
ಮೂಡುಬಿದಿರೆ: ‘ಬರಹ ಅಥವಾ ಕಾವ್ಯವನ್ನು ರಂಗರೂಪಕ್ಕೆ ತರುವುದು ಒಂದು ಸಾಹಸ. ‘ಚಾರುವಸಂತ’ದ ಮೂಲಕ ಹಂಪನಾ ಅವರ ಕನಸು ಈಡೇರಿದೆ’ ಎಂದು ವಿಶ್ರಾಂತ ಕುಲಪತಿ ಪ್ರೊ.ಬಿ.ಎ. ವಿವೇಕ ರೈ ಹೇಳಿದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ನಗರದ ಸ್ಕೌಟ್ಸ್ ಗೈಡ್ಸ್ ಕನ್ನಡ ಭವನದಲ್ಲಿ ಗುರುವಾರ ಸಂಜೆ ಹಮ್ಮಿಕೊಂಡ ರಂಗ ಮಾಂತ್ರಿಕ ಜೀವನ್ರಾಂ ಸುಳ್ಯ ನಿರ್ದೇಶನದಲ್ಲಿ ಆಳ್ವಾಸ್ ರಂಗ ಅಧ್ಯಯನ ಕೇಂದ್ರ ವಿದ್ಯಾರ್ಥಿಗಳು ಅಭಿನಯಿಸಿದ, ಹಂಪನಾ ವಿರಚಿತ ದೇಸೀ ಮಹಾ ಕಾವ್ಯದ ರಂಗರೂಪ ‘ಚಾರು ವಸಂತ’ ನಾಟಕದ ಪ್ರದರ್ಶನ, ರಂಗಪಯಣ ಉದ್ಘಾಟನೆ ಮತ್ತು ನಾಟಕ ಕೃತಿ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.



ಬರಹದಿಂದ ರಂಗರೂಪಕ್ಕೆ ಕತೆಯನ್ನು ತರುವ ಅನುಭವಗಳನ್ನು ಹಂಚಿಕೊಂಡ ವಿವೇಕ ರೈ, ‘ಕಾವ್ಯ ಭಾಷೆಯನ್ನು ಹೆಚ್ಚಾಗಿ ರಂಗರೂಪಕ್ಕೆ ಬಳಸಲಾಗಿದೆ’ ಎಂದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ ಮೋಹನ ಆಳ್ವ ಮಾತನಾಡಿ, ‘ಚಾರುವಸಂತ’ ನಾಟಕಕ್ಕೆ ಜೈನ ಸಿದ್ಧಾಂತ ಮೂಲವಾಗಿದ್ದು, ಜೈನ ಕಾಶಿಯಲ್ಲಿ ಪ್ರದರ್ಶನ ಏರ್ಪಡಿಸಲಾಗಿದೆ ಎಂದರು. ಮೂಡುಬಿದಿರೆಯಲ್ಲಿ ನಡೆದಿದ್ದ ೭೧ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಾಗ ಹಂಪನಾ ಅವರು ನೀಡಿದ ಸಹಕಾರ ಅವಿಸ್ಮರಣೀಯ ಎಂದರು. ವಿದ್ಯಾರ್ಥಿಗಳನ್ನು ಉದ್ದೇಶಿಸಿ ಕಾಣುವ ಕನಸುಗಳನ್ನು ನನಸು ಮಾಡಲು ದೀರ್ಘವಾದ ಅಭ್ಯಾಸ ಮತ್ತು ಧೈರ್ಯ ಅಗತ್ಯ ಎಂದರು. ‘ಚಾರುವಸಂತ’ವನ್ನು ರಂಗರೂಪಕ್ಕೆ ತಂದ ರಂಗಕರ್ಮಿ ಡಾ.ನಾ ದಾಮೋದರ ಶೆಟ್ಟಿ ಮಾತನಾಡಿ, ಕನ್ನಡ ಕಲಿಯಲು ಮತ್ತು ಉಳಿಸಲು ಆಳ್ವಾಸ್ ಮಾಡುತ್ತಿರುವ ಕೆಲಸ ಶ್ಲಾಘನೀಯ ಎಂದರು. ಈ ನಾಟಕವೂ ಕನ್ನಡ ಕಲಿಕೆಗೆ ಮತ್ತು ನೈತಿಕ ಮೌಲ್ಯಗಳನ್ನು ಕಲಿಯಲು ಅನುವು ಮಾಡಿಕೊಡುತ್ತದೆ ಎಂದರು.

‘ಚಾರುವಸಂತ’ ನಾಟಕ ಕೃತಿಯನ್ನು ಬಿಡುಗಡೆಗೊಳಿಸಲಾಯಿತು. ರಾಜ್ಯದ ವಿವಿಧೆಡೆ ತಂಡದ ರಂಗಪಯಣ ನಡೆಯಲಿದೆ. ನಾಟಕದ ನಿರ್ದೇಶಕ, ರಂಗ ಮಾಂತ್ರಿಕ ಜೀವನ್ರಾಂ ಸುಳ್ಯ ಇದ್ದರು. ಆಳ್ವಾಸ್ ಪದವಿಪೂರ್ವ ಕಾಲೇಜಿನ ಕಲಾ ವಿಭಾಗದ ಡೀನ್ ಕೆ. ವೇಣುಗೋಪಾಲ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.





















































































































