
ಮೂಡುಬಿದಿರೆ: ದೇಶಪ್ರೇಮ ಎಂದಾಕ್ಷಣ ಸೇನೆ ಸೇರುವುದು ಮಾತ್ರವಲ್ಲ. ದೇಶದ ಅಭ್ಯುದಯಕ್ಕಾಗಿ ಸಲ್ಲಿಸುವ ಪ್ರತೀ ಕರ್ಯವು ದೇಶಪ್ರೇಮವೆನಿಸುತ್ತದೆ ಎಂದು ಪತ್ರಕರ್ತ ಹಾಗೂ ಯುವ ವಾಗ್ಮಿ ಶ್ರೀಕಾಂತ್ ಶೆಟ್ಟಿ ನುಡಿದರು. ಅವರು ಶುಕ್ರವಾರ ಶಿವರಾಮ ಕಾರಂತರ ಸಭಾಂಗಣದಲ್ಲಿ ನಡೆದ ಆಳ್ವಾಸ್ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ೨೦೨೪-೨೫ನೇ ವರ್ಷದ ಚಟುವಟಿಕೆಗಳು ಹಾಗೂ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಮಾತನಾಡಿದರು. ಭಾರತದ ಸ್ವಾತಂತ್ರ್ಯದ ನಂತರ ಐದು ಪ್ರಮುಖ ಯುದ್ಧಗಳು ನಡೆದಿವೆ. ಪಾಕಿಸ್ತಾನ ನಾಲ್ಕು ಯುದ್ಧಗಳಲ್ಲೂ ನಮ್ಮ ವಿರುದ್ಧ ಗೆಲ್ಲಲಾಗಲಿಲ್ಲ. ಸೈನಿಕರ ಸಾವು ನಮಗೆ ಸ್ವಾಭಾವಿಕ ಸಂಗತಿ ಎಂದೆನಿಸಬಾರದು.


ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದವರ ಬಲಿದಾನವನ್ನು ಸ್ಮರಿಸಬೇಕು. ಸೈನಿಕರ ನಿಸ್ವಾರ್ಥ ಸೇವೆ ಮತ್ತು ನಿಷ್ಠೆ ಸದಾ ಸ್ಮರಣೀಯ ಎಂದರು. ಕೆಂಗುರಸೆ ಎಂಬ ಯೋಧ ಘಾತಕ್ ಪ್ಲಟೂನ್ ಸೇರಿ ಹುತಾತ್ಮನಾದ ಮೇಲೆ ನಾಗಲ್ಯಾಂಡ್ನಲ್ಲಿ ಸೈನ್ಯದ ಬಗ್ಗೆ ಇದ್ದ ನಕಾರಾತ್ಮಕತೆ ಹೋಗಿ ಹೆಚ್ಚು ಹೆಚ್ಚು ಯುವಕರು ಸೇನೆ ಸೇರುವಂತಾದ ಪ್ರಸಂಗವನ್ನು ವಿವರಿಸಿದರು. ನಮ್ಮ ದೇಶದ ಮೇಲೆ ಎಷ್ಟೇ ದಾಳಿಗಳಾದರೂ ನಮ್ಮ ಸಾಂಸ್ಕೃತಿಕ ಹಿನ್ನೆಲೆಯನ್ನು ನಾಶಮಾಡಲು ಸಾಧ್ಯವಾಗಲಿಲ್ಲ. ಕಾರ್ಗಿಲ್ಯುದ್ಧ ಪಾಕಿಸ್ತಾನ ನಮ್ಮ ಬೆನ್ನಿಗೆ ಹಾಕಿದ ಚೂರಿ. ಕ್ಯಾ.ವಿಕ್ರಂ ಬಾತ್ರ, ರಾಜೇಶ್ ಅಧಿಕಾರಿ, ಕರ್ನಲ್ ರವೀಂದ್ರನಾಥ್ ಸೇರಿ ಹಲವು ಸೈನಿಕರ ಬಲಿದಾನದ ನಂತರ ನಾವು ಕಾರ್ಗಿಲ್ ಕದನ ಗೆದ್ದೆವು. ಮೊದಲ ಬಾರಿ ಈ ದೇಶದಲ್ಲಿ ಯುದ್ಧದ ನಂತರ ಎಲ್ಲಾ ಹುತಾತ್ಮರ ದೇಹಗಳನ್ನು ಮನೆಗೆ ತಲುಪಿಸುವ ಕೆಲಸ ನಡೆಯಿತು.

ಹಾಗೆಯೇ ಅದರ ಮೂಲಕ ಭಾವನಾತ್ಮಕವಾಗಿ ಭಾರತವನ್ನು ಬೇಸೆಯೋ ಕೆಲಸವಾಯಿತು. ಇಂದಿಗೂ ಯುದ್ಧ ನಿಂತಿಲ್ಲ ಆದರೆ ಯುದ್ಧದ ರೂಪ ಬದಲಾಗಿದೆ ಎಂದರು. ಮೂಡುಬಿದಿರೆ ಜೈನ ಪ್ರೌಢಶಾಲೆಯ ನಿವೃತ್ತ ಅಧ್ಯಾಪಕ ಮುನಿರಾಜ ರೆಂಜಾಳ ರಾಷ್ಟ್ರೀಯ ಸೇವಾ ಯೋಜನೆಯ ೨೦೨೪ – ೨೫ನೇ ವರ್ಷದ ಚಟುವಟಿಕೆಗಳನ್ನು ಉದ್ಘಾಟಿಸಿ ಮಾತನಾಡಿದರು. ವೃತ್ತಿಯಲ್ಲಿ ನಿವೃತ್ತರಾದ ಪ್ರತಿಯೊಬ್ಬರಿಗೂ ಅವರ ಹಿಂದಿನ ವೃತ್ತಿಯ ಬಗ್ಗೆ ಆಸಕ್ತಿ ಇರುತ್ತದೆ. ನಾನು ಕಳೆದ ೪೦ ವರ್ಷದಿಂದ ಎನ್.ಎಸ್.ಎಸ್. ಸಂಪರ್ಕದಲ್ಲಿದ್ದೇನೆ. ವಿಶ್ವಮಾನವನಾಗಿಸುವ ವೇದಿಕೆ ಯಾವುದಾದರೂ ಇದ್ದರೆ ಅದು ರಾ.ಸೇ.ಯೋ ಎಂದರು. ಒಂದು ಕೆಲಸವನ್ನು ಆರಂಭಿಸಿದ ನಂತರ ಅದಕ್ಕೆ ಪೂರಕವಾದ ಶ್ರಮ ಮತ್ತು ನಿರಂತರತೆ ಅಗತ್ಯ. ಈಗಿನ ಮಕ್ಕಳಲ್ಲಿ ಕಷ್ಟದ ಪರಿಚಯ ಇಲ್ಲ, ಹೊಂದಾಣಿಕೆಯೂ ಇಲ್ಲ. ಶ್ರಮಪಟ್ಟಾಗ ಮಾತ್ರ ಸುಂದರ ಜೀವನವನ್ನು ರೂಪಿಸಿಕೊಳ್ಳುಲು ಸಾಧ್ಯ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಮೊಹಮ್ಮದ್ ಸದಾಕತ್ ಜೀವನದಲ್ಲಿ ಶಿಸ್ತುತನ್ನು ಪಾಲಿಸಬೇಕು. ತರಗತಿ ಹೊರಗಿನ ಶಿಕ್ಷಣ ಅದು ನಿಜವಾದ ಶಿಕ್ಷಣ. ಪ್ರಾಮಾಣಿಕವಾಗಿ ಕೆಲಸ ಮಾಡಿ ಮತ್ತು ಮಾನವೀಯತೆಯನ್ನು ಬೆಳೆಸಿಕೊಳ್ಳಿ. ಆಗ ಮಾತ್ರ ಜೀವನದಲ್ಲಿ ಯಶಸ್ಸುನ್ನು ಸಾದಿಸಲು ಸಾಧ್ಯ ಎಂದರು. ಕಾರ್ಯಕ್ರಮದಲ್ಲಿ ಸಂಸ್ಕೃತ ವಿಭಾಗದ ಮುಖ್ಯಸ್ಥ ಅಂಬರೀಶ್ ಚಿಪ್ಳೂಣಕರ್ ಉಪಸ್ಥಿತರಿದ್ದರು. ರಾಷ್ಟೀಯ ಸೇವಾ ಯೋಜನೆಯ ಸಂಯೋಜಕ ಧರ್ಮೇಂದ್ರ ಕುದ್ರೋಳಿ ಸ್ವಾಗತಿಸಿ, ಗಣಪತಿ ನಾಯಕ್ ವಂದಿಸಿ, ಶಾಲೆಟ್ ಮೋನೀಸ್ ನಿರೂಪಿಸಿದರು.

























































































































