ಸೇವಾ ಶಿಖರ್ ಫೌಂಡೇಶನ್ ಮಂಗಳೂರು, ದಕ್ಷಿಣ ಕನ್ನಡ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಹಾಗೂ ಮಂಗಳೂರು ತಾಲೂಕು ಕಬಡ್ಡಿ ಅಸೋಸಿಯೇಷನ್ ಇದರ ಸಹಯೋಗದಲ್ಲಿ “ಕುಡ್ಲ ಕಬಡ್ಡಿ-2023” ಇದರ ಉದ್ಘಾಟನಾ ಸಮಾರಂಭ ಪಣಂಬೂರಿನ ಎನ್ಎಂಪಿಎ ಮೈದಾನದಲ್ಲಿ ಜರುಗಿತು. ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದ ಶಾಸಕ ಡಾ. ಭರತ್ ಶೆಟ್ಟಿ ವೈ. ಅವರು ಮಾತಾಡುತ್ತಾ, “ಕಬಡ್ಡಿಯಂತಹ ದೇಶೀಯ ಕ್ರೀಡೆ ಇಂದು ಅಳಿವಿನ ಅಂಚಿನಲ್ಲಿದೆ. ಆದರೆ ಯುವಕರು ಇಂತಹ ಕ್ರೀಡೆಗಳತ್ತ ಅಕರ್ಷಿತರಾಗುತ್ತಿರುವುದು ಒಳ್ಳೆಯ ಬೆಳವಣಿಗೆ. ಕಬಡ್ಡಿ ಟೂರ್ನಮೆಂಟ್ ಹಮ್ಮಿಕೊಂಡಿರುವ ಸಂಘಟನೆ ಇನ್ನಷ್ಟು ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಸಮಾಜಕ್ಕೆ ಮಾದರಿಯಾಗಲಿ” ಎಂದು ಶುಭ ಹಾರೈಸಿದರು.


ಬಂಟರ ಯಾನೆ ನಾಡವರ ಮಾತೃಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಮಾತನಾಡುತ್ತಾ, “ಸಮಾಜಕ್ಕೆ ಸೇವೆ ಸಲ್ಲಿಸಲು ಯಾವ ಜಾತಿ ಧರ್ಮವೂ ಬೇಕಾಗಿಲ್ಲ. ಸೇವೆಗಾಗಿ ನಿರ್ಮಿಸಿರುವ ಸೇವಾ ಶಿಖರ್ ಸಂಘಟನೆ ಸಾಮಾಜಿಕ ಕಳಕಳಿಯ ಮೂಲಕ ಸೇವೆಯ ಶಿಖರವನ್ನು ಏರಲಿ” ಎಂದರು.

ಇತ್ತೀಚಿಗೆ ಕರ್ತವ್ಯ ಸಂದರ್ಭ ವೀರ ಮರಣವನ್ನಪ್ಪಿದ ಶಕ್ತಿನಗರದ ಯೋಧ ಮುರಳೀಧರ ರೈ ಅವರ ಕುಟುಂಬಕ್ಕೆ ಬಂಟರ ಯಾನೆ ನಾಡವರ ಮಾತೃಸಂಘದ ವತಿಯಿಂದ 50,000 ರೂ., ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು ಸಮಿತಿ ವತಿಯಿಂದ 50,000 ರೂ. ಹಾಗೂ ಸೇವಾ ಶಿಖರ್ ಸಂಘಟನೆಯ ವತಿಯಿಂದ 10,000 ಧನ ಸಹಾಯದ ಚೆಕ್ ಹಸ್ತಾಂತರ ಮಾಡಲಾಯಿತು.

ವೇದಿಕೆಯಲ್ಲಿ ಪಣಂಬೂರು ನಂದನೇಶ್ವರ ದೇವಸ್ಥಾನದ ಅನಂತ ಐತಾಳ್, ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ.ಭರತ್ ಶೆಟ್ಟಿ ವೈ., ಅಜಿತ್ ಕುಮಾರ್ ರೈ ಮಾಲಾಡಿ, ಕ್ಯಾಪ್ಟನ್ ಬೃಜೇಶ್ ಚೌಟ, ಬಂಟರ ಮಾತೃ ಸಂಘದ ಮಂಗಳೂರು ತಾಲೂಕು ಸಮಿತಿಯ ಸಂಚಾಲಕ ವಸಂತ ಶೆಟ್ಟಿ, ಗುರುಚಂದ್ರ ಹೆಗ್ಡೆ, ಮಾಜಿ ಸಚಿವ ನಾಗರಾಜ್ ಶೆಟ್ಟಿ, ಡಾ ಆಶಾ ಜ್ಯೋತಿ ರೈ, ರವೀಂದ್ರನಾಥ್ ಶೆಟ್ಟಿ, ಪುರುಷೋತ್ತಮ್, ಕೆ.ಎಂ. ಶೆಟ್ಟಿ, ರಾಮ್ ಮೋಹನ್ ರೈ, ಉಲ್ಲಾಸ್ ಶೆಟ್ಟಿ ಪೆರ್ಮುದೆ, ನಿಟ್ಟೆಗುತ್ತು ರವಿರಾಜ್ ಶೆಟ್ಟಿ, ಈಶ್ವರ್ ಶೆಟ್ಟಿ, ಲೀಲಾಕ್ಷ ಕರ್ಕೇರ, ಜಯರಾಮ್ ಶಾಂತ, ಲೋಕೇಶ್ ಭಂಡಾರಿ, ಕಿಶೋರ್ ಕುಮಾರ್ ಪುತ್ತೂರು, ಸಚಿನ್ ಶೆಟ್ಟಿ ಸಾಂತ್ಯ, ಸೇವಾ ಶಿಖರ್ ಮೆನೇಜಿಂಗ್ ಟ್ರಸ್ಟಿ ವರುಣ್ ಶೇಣವ ಮತ್ತಿತರರು ಉಪಸ್ಥಿತರಿದ್ದರು.





































































































