ಪ್ರಾಚೀನ ಕಾಲದಿಂದಲೂ ಮಹಾಕಾವ್ಯಗಳ ವಾಚನ ಪ್ರವಚನದಿಂದಾಗಿ ನಮ್ಮ ಹಿರಿಯರು ಪುರಾಣ ಪುಣ್ಯ ಕಥೆಗಳನ್ನು ತಿಳಿದುಕೊಂಡಿದ್ದರು. ಅದರೊಂದಿಗೆ ವಿವಿಧ ಪುರಾಣಗಳ ಶ್ರವಣ ಮಾತ್ರದಿಂದ ಅವರ ಮನಸ್ಸಿನ ಕ್ಲೈಬ್ಯ ಹಾಗೂ ತುಮುಲಗಳ ನಿವಾರಣೆಯೂ ಸಾಧ್ಯವಾಗಿತ್ತು. ಮಳೆಗಾಲದಲ್ಲಿ ಹಳ್ಳಿ ಜನರಿಗೆ ಯಾವುದೇ ಕೆಲಸ ಕಾರ್ಯಗಳಿಲ್ಲದಿದ್ದಾಗ ಮನಸ್ಸಿನ ಬೇಸರ ಕಳೆಯಲು ಹಿಂದೆ ಮನೆ ಮನೆಗಳಲ್ಲಿ ಹಾಗೂ ಮಠ ಮಂದಿರಗಳಲ್ಲಿ ಪುರಾಣ ವಾಚನ ನಡೆಯುತ್ತಿತ್ತು ಎಂದು ಯಕ್ಷಗಾನ ಅರ್ಥಧಾರಿ ಮತ್ತು ಪ್ರವಚನಕಾರ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಹೇಳಿದರು. ದೇವಿಪುರ ತಲಪಾಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಜರಗಿದ ಆಷಾಢ ಮಾಸದ ಶ್ರೀ ಮದ್ರಾಮಾಯಣ ಮಹಾಕಾವ್ಯದ ವಾಚನ ಪ್ರವಚನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ದೇವಳದಲ್ಲಿ ಪ್ರತಿ ವರ್ಷದ ಆಷಾಢ ಮಾಸವನ್ನು ರಾಮಾಯಣ ಮಾಸವನ್ನಾಗಿ ಆಚರಿಸುವ ಹಿರಿಯರ ಸಂಪ್ರದಾಯದಂತೆ ಜುಲೈ 17ರಂದು ಶುಕ್ರವಾರ ಉದ್ಘಾಟನಾ ಸಮಾರಂಭ ಜರಗಿತು. ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ಗಣೇಶ್ ಭಟ್ ಪಂಜಾಳ ದೀಪ ಬೆಳಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಆಷಾಢ ಮಾಸದ ಪ್ರತಿ ಶುಕ್ರವಾರದಂದು ನಡೆಯುವ ಶ್ರೀ ರಾಮಾಯಣ ಮಹಾಕಾವ್ಯದ ವಾಚನ ಪ್ರವಚನ ಸತ್ಸಂಗ ಕಾರ್ಯಕ್ರಮದಲ್ಲಿ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತಾಗಲಿ ಎಂದವರು ಹಾರೈಸಿದರು.



ಉದ್ಘಾಟನೆಯ ಬಳಿಕ ಬತ್ತಲೇಶ್ವರ ಕವಿ ವಿರಚಿತ ಕೌಶಿಕ ರಾಮಾಯಣದ ಮೊದಲೆರಡು ಸಂಧಿಗಳನ್ನು ಕಟೀಲು ಮೇಳದ ಪ್ರಧಾನ ಭಾಗವತ ದೇವೀಪ್ರಸಾದ ಆಳ್ವ ತಲಪಾಡಿ ವಾಚಿಸಿದರು. ಪ್ರವಚನಕಾರರಾಗಿ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಬಾಲಕಾಂಡದಿಂದ ಸೀತಾ ಕಲ್ಯಾಣವರೆಗಿನ ಕಾವ್ಯ ಭಾಗಕ್ಕೆ ವ್ಯಾಖ್ಯಾನ ನೀಡಿದರು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಿಶ್ವನಾಥ ಶೆಟ್ಟಿ ನಾರ್ಲ ಸ್ವಾಗತಿಸಿ ಕಲಾವಿದರನ್ನು ಗೌರವಿಸಿದರು. ಸೇವಾ ಸಮಿತಿಯ ನಾರಾಯಣ ಕಜೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಪ್ರಮುಖರಾದ ಶ್ರೀನಿವಾಸ ನೆಲ್ಲಿತ್ತಾಯ, ಶಿವರಾಮ ಶೆಟ್ಟಿ ಸಾಂತ್ಯಗುತ್ತು, ರಾಜೇಶ್ ಕೊಟ್ಟಾರಿ, ರಾಜೇಶ್ ಗುಡ್ಡೆ ಮನೆ, ಆಶಾ ಶೆಟ್ಟಿ, ನಯನ ಉಪಸ್ಥಿತರಿದ್ದರು.




















































































































