


ನಮ್ಮ ಹಿರಿಯರ ಪ್ರಕಾರ ವಿವಾಹ ಎಂಬುದು ಪವಿತ್ರ ಬಂಧನ. ಇದಕ್ಕಿಂತ ಮಿಗಿಲಾದ ಸಂಬಂಧ ಮತ್ತೊಂದಿಲ್ಲ. ಹಿಂದೆ ಕುಟುಂಬ ವ್ಯವಸ್ಥೆ ಭದ್ರವಾಗಿದ್ದು, ಹೆಚ್ಚಿನ ಮಹಿಳೆಯರು ಶಿಕ್ಷಣದಿಂದ ವಂಚಿತರಾಗಿ ನಾಲ್ಕು ಗೋಡೆಗಳ ಮಧ್ಯೆ ಸೀಮಿತರಾಗಿದ್ದರು. ಆದರೆ ಇಂದು ಕಾಲ ಬದಲಾಗಿದೆ. ಶಿಕ್ಷಣ, ಉದ್ಯೋಗ ಹಾಗೂ ಸಾಮಾಜಿಕ ಜಾಗೃತಿಯಿಂದ ಕುಟುಂಬ ಜೀವನದಲ್ಲಿಯೂ ಅನೇಕ ಬದಲಾವಣೆಗಳು ಕಂಡುಬಂದಿವೆ. ಯಶಸ್ವಿ ವೈವಾಹಿಕ ಜೀವನದಲ್ಲಿ ದೀರ್ಘಕಾಲ ಕಳೆದ ದಂಪತಿಗಳನ್ನು ಗೌರವಿಸಿ, ಸಮಾಜಕ್ಕೆ ಆದರ್ಶ ವ್ಯಕ್ತಿಗಳಾಗಿ ಗುರುತಿಸುವ ಉದ್ದೇಶದಿಂದ ‘ವಸುಂಧರ ಆದರ್ಶ ದಂಪತಿ ಪ್ರಶಸ್ತಿ -2026’ ಪ್ರದಾನಿಸಲಾಯಿತು ಎಂದು ಕಲಾ ಜಗತ್ತು ಸಂಸ್ಥೆಯ ಅಧ್ಯಕ್ಷ ಡಾ| ತೋನ್ಸೆ ವಿಜಯಕುಮಾರ್ ಶೆಟ್ಟಿ ಹೇಳಿದರು. ಜೂನ್ 26ರಂದು ಬೊರಿವಲಿ ಪಶ್ಚಿಮ ಪ್ರಭೋದನ್ ಠಾಕ್ರೆ ನಾಟ್ಯಗೃಹದಲ್ಲಿ ಕಲಾ ಜಗತ್ತು ವಸುಂಧರ ವತಿಯಿಂದ ಜರಗಿದ ‘ವಸುಂಧರ ಆದರ್ಶ ದಂಪತಿ ಪ್ರಶಸ್ತಿ–2026’ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಸುಖೀ ದಾಂಪತ್ಯ ಜೀವನಕ್ಕೆ ಪರಸ್ಪರ ವಿಶ್ವಾಸ, ಗೌರವ, ತಾಳ್ಮೆ ಮತ್ತು ಹೊಂದಾಣಿಕೆ ಅತ್ಯಂತ ಮುಖ್ಯವೆಂದು ತಿಳಿಸಿದರು. ಮಕ್ಕಳಿಗೆ ಉತ್ತಮ ಸಂಸ್ಕೃತಿ, ಸಂಸ್ಕಾರವನ್ನು ನೀಡುವ ಉದ್ದೇಶದಿಂದ ಚಿಣ್ಣರ ಬಿಂಬದಂತಹ ಸಂಸ್ಥೆಯನ್ನು ಹುಟ್ಟು ಹಾಕಲಾಯಿತು. ಇದನ್ನು ಇಡೀ ಜಗತ್ತೇ ಸ್ವಾಗತಿಸುತ್ತಿದೆ. ಇಂದಿನ ಕಾಲದಲ್ಲಿ ಸಮಾಜದಲ್ಲಿ ಉತ್ತಮ ಕುಟುಂಬ ಮೌಲ್ಯಗಳನ್ನು ಬೆಳೆಸುವ ನಿಟ್ಟಿನಲ್ಲಿ ಆದರ್ಶ ದಂಪತಿ ಯಂತಹ ಕಾರ್ಯಕ್ರಮಗಳು ಪ್ರೇರಣೆಯಾಗುತ್ತವೆ ಎಂದರು.





ಸಮಾರಂಭದಲ್ಲಿ ಗೌರವ ಅತಿಥಿಗಳಾಗಿ ಶ್ರೀಮತಿ ಗೀತಾ ಮತ್ತು ಡಾ. ಸದಾನಂದ ಶೆಟ್ಟಿ ಹಾಗೂ ಶ್ರೀಮತಿ ಉಮಾ ಮತ್ತು ಡಾ| ಕೃಷ್ಣ ವೈ. ಶೆಟ್ಟಿ ಉಪಸ್ಥಿತರಿದ್ದು, ಎಲ್ಲಾ ದಂಪತಿಗಳನ್ನು ಅಭಿನಂದಿಸಿದರು. ಸಾಂಸ್ಕೃತಿಕ ಹಾಗೂ ಸಾಮಾಜಿಕ ಚಟುವಟಿಕೆಗಳ ಮೂಲಕ ಗುರುತಿಸಿಕೊಂಡಿರುವ ಕಲಾ ಜಗತ್ತು ವಸುಂಧರ ಸಂಸ್ಥೆಯ ವತಿಯಿಂದ ವಿಶಿಷ್ಠವಾದ ಕಾರ್ಯಕ್ರಮ ‘ವಸುಂಧರ ಆದರ್ಶ ದಂಪತಿ ಪ್ರಶಸ್ತಿ -2026’ ಪ್ರದಾನ ಸಮಾರಂಭವನ್ನು ಆಯೋಜಿಸಲಾಯಿತು. ಕಲಾ ಜಗತ್ತು ಸಂಸ್ಥೆಯ ಮಹಿಳಾ ವಿಭಾಗ ‘ವಸುಂಧರ’ ಇತ್ತೀಚೆಗೆ ಉದ್ಘಾಟನೆಯಾಗಿದ್ದು, ಮಹಿಳಾ ಸಬಲೀಕರಣ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ಉತ್ತೇಜನ ನೀಡುವ ಉದ್ದೇಶವನ್ನು ಹೊಂದಿದೆ. ಸಮಾರಂಭದಲ್ಲಿ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಆದರ್ಶ ದಾಂಪತ್ಯ ಜೀವನ ನಡೆಸಿ, ಸಮಾಜ ಸೇವೆ ಹಾಗೂ ಸಾಂಸ್ಕೃತಿಕ ಕ್ಷೇತ್ರಕ್ಕೆ ವಿಶಿಷ್ಟ ಕೊಡುಗೆ ನೀಡಿರುವ ಐದು ಮಂದಿ ಗಣ್ಯ ದಂಪತಿಗಳಾದ ಲಲಿತಾ ಶಂಕರನಾರಾಯಣ ಕಾರಂತ, ಕುಸುಮ ಕೃಷ್ಣರಾಜ್ ಸುವರ್ಣ, ವೀಣಾ ಉದಯ ಶೆಟ್ಟಿ, ಜ್ಯೋತಿ ಅನಂತ್ ಭಟ್ ಮತ್ತು ತಾರ ಉತ್ತಮ ಎಂ ಶೆಟ್ಟಿಗಾರ್ ದಂಪತಿಗಳಿಗೆ ವಸುಂಧರ ಆದರ್ಶ ದಂಪತಿ ಪ್ರಶಸ್ತಿ -2026 ನೀಡಿ ಗೌರವಿಸಲಾಯಿತು.
ಬೊಂಬೇ ಬಂಟ್ಸ್ ನ ಅಧ್ಯಕ್ಷ ನ್ಯಾ. ಡಿ.ಕೆ ಶೆಟ್ಟಿ, ಬೊಂಬೇ ಬಂಟ್ಸ್ ನ ನಿಕಟಪೂರ್ವ ಅಧ್ಯಕ್ಷ ಸಿಎ ಸುರೇಂದ್ರ ಶೆಟ್ಟಿ, ಬೊಂಬೇ ಬಂಟ್ಸ್ ನ ಪ್ರಧಾನ ಕಾರ್ಯದರ್ಶಿ ಶೇಖರ್ ಆರ್. ಶೆಟ್ಟಿ, ನ್ಯಾ. ಗುಣಕರ್ ಶೆಟ್ಟಿ, ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಂ ಇದರ ಮಹಾರಾಷ್ಟ್ರ ಘಟಕದ ಕಾರ್ಯದರ್ಶಿ ಪ್ರಕಾಶ್ ಶೆಟ್ಟಿ ಪೇಟೆಮನೆ, ತುಳು ಸಂಘ ಬೊರಿವಲಿಯ ಅಧ್ಯಕ್ಷ ಹರೀಶ್ ಮೈಂದನ್, ಬಾಂಬೆ ಬಂಟ್ಸ್ ನ ಉಪಾಧ್ಯಕ್ಷರಾದ ಕಿಶೋರ್ ಶೆಟ್ಟಿ, ವಸಾಯಿಯ ಹಿರಿಯ ಸಮಾಜ ಸೇವಕ ಪಾಂಡು ಶೆಟ್ಟಿ, ಕಲಾ ಪೋಷಕ ಸಹೋದರರಾದ ಕುದಿ ಸುಧಾಕರ ಶೆಟ್ಟಿ ಹಾಗೂ ಸಂತೋಷ್ ಶೆಟ್ಟಿ, ಕೊಂಕಣಿ ರಂಗಭೂಮಿಯ ಪ್ರಸಿದ್ಧ ನಾಟಕಕಾರ ಪ್ರಾನ್ಸಿಸ್ ಕಾಸಿಯಾ ಅತಿಥಿಗಳಾಗಿ ಭಾಗವಹಿಸಿದ್ದರು. ಸಂಗೀತ ನಿರ್ದೇಶಕ ವಿಜಯ್ ಶೆಟ್ಟಿ ಬಳಗದವರ ಸಂಗೀತ ಕಾರ್ಯಕ್ರಮ ಸಮಾರಂಭಕ್ಕೆ ವಿಷೇಷ ಮೆರಗನ್ನು ನೀಡಿತು. ಮಹಿಳೆಯರಿಂದ ಭಜನಾ ಕಾರ್ಯಕ್ರಮ ನಡೆಯಿತು. ಡಾ| ತೋನ್ಸೆ ವಿಜಯ ಕುಮಾರ್ ಶೆಟ್ಟಿಯವರು ರಚಿಸಿದ ಶರಶಯ್ಯ ನಾಟಕ ಪ್ರದರ್ಶನವಿತ್ತು.






























































































































