

ಪಂಚ ದ್ರಾವಿಡ ಭಾಷೆಗಳಲ್ಲಿ ತುಳು ಭಾಷೆ ಪ್ರಮುಖ ಭಾಷೆಯಾಗಿದೆ. ನಾಟಕ, ಸಿನಿಮಾಗಳ ಮೂಲಕ ತುಳು ಭಾಷೆ ಇಂದು ಜಾಗತಿಕ ಮಟ್ಟದಲ್ಲಿ ಮನ್ನಣೆ ಪಡೆದಿದೆ. ಎಲ್ಲರೂ ಇಷ್ಟ ಪಡುವ ಭಾಷೆ ತುಳು. ಸುಮುಖ ಪ್ರೊಡಕ್ಷನ್ ಲಾಂಛನದಲ್ಲಿ ಈ ಹಿಂದೆ ತೆರೆಕಂಡ ‘ತುಡರ್’ ಯಶಸ್ವಿ ಪ್ರದರ್ಶನ ದಾಖಲಿಸಿದೆ. ಅದೇ ತಂಡದಿಂದ ‘ಕಜ್ಜ’ ತುಳು ಸಿನಿಮಾ ಪ್ರೇಕ್ಷಕರ ಮನ ಗೆಲ್ಲಲಿ. ತುಳುವಿನಲ್ಲಿ 150 ಕ್ಕೂ ಮಿಕ್ಕಿದ ಸಿನಿಮಾಗಳು ತೆರೆಗೆ ಬಂದಿದೆ. ಎಲ್ಲವನ್ನೂ ಮೀರಿ ತುಳು ಚಿತ್ರರಂಗ ಬೆಳೆಯುತ್ತಿದೆ ಎಂದು ಮೂಡಬಿದ್ರೆ ಆಳ್ವಾಸ್ ಸಂಸ್ಥೆಯ ಅಧ್ಯಕ್ಷ ಡಾ. ಎಂ ಮೋಹನ್ ಆಳ್ವ ನುಡಿದರು. ಮಂಗಳೂರು ಪುರಭವನದಲ್ಲಿ ಜರಗಿದ ಶಾಮ್ ಇನ್ಸ್ಟಿಟ್ಯೂಶನ್ ಪ್ರಸ್ತುತ ಪಡಿಸುವ ‘ಕಜ್ಜ’ ತುಳು ಸಿನಿಮಾದ ಆಡಿಯೋ ಮತ್ತು ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.




ಕಾರ್ಯಕ್ರಮವನ್ನು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅನುವಂಶಿಕ ಮೊಕ್ತೇಸರರಾದ ಲಕ್ಷ್ಮೀನಾರಾಯಣ ಅಸ್ರಣ್ಣ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ತುಳು ಸಿನಿಮಾದ ಮೂಲಕ ಸಂಸ್ಕಾರ, ಸಂಸ್ಕೃತಿ, ಆಚಾರ ವಿಚಾರ ಜಗತ್ತಿಗೆ ಪಸರಿಸಲಿ. ಸೀಮಿತ ಮಾರುಕಟ್ಟೆಯ ತುಳು ಚಿತ್ರರಂಗ ಇಂದು ವಿಶಾಲವಾಗಿ ಬೆಳೆಯುತ್ತಿರುವುದು ಸಂತೋಷದ ವಿಚಾರ. ‘ಕಜ್ಜ’ ಸಿನಿಮಾದ ಮೂಲಕ ಸುಮುಖ ಪ್ರೊಡಕ್ಷನ್ ತಂಡ ತುಳು ಭಾಷೆಯಲ್ಲಿ ಸಿನಿಮಾ ಮಾಡುತ್ತಿದೆ. ದೈವ ದೇವರ ಮೇಲಿನ ನಂಬಿಕೆ, ಶ್ರದ್ದೆ ಭಕ್ತಿಯಿಂದ ಕೆಲಸ ಮಾಡಿದಾಗ ಯಶಸ್ಸು ಲಭಿಸುತ್ತದೆ. ತುಳು ಭಾಷೆ ಇಂದು ಜಗತ್ತಿನಾದ್ಯಂತ ಪಸರಿಸಿದೆ ಎಂದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ನಾಟಕ, ಸಿನಿಮಾ ನಿರ್ದೇಶಕರಾದ ವಿಜಯಕುಮಾರ್ ಕೊಡಿಯಾಲ್ ಬೈಲ್ ಮಾತನಾಡಿ, ‘ಕಜ್ಜ’ ತುಳು ಸಿನಿಮಾ ತುಳುವಿನಲ್ಲಿ ಮೈಲುಗಲ್ಲಾಗಲಿ ಎಂದರು.
ಮುಖ್ಯ ಅತಿಥಿ ಸರ್ವೋತ್ತಮ ಶೆಟ್ಟಿ ಮಾತನಾಡಿ, ‘ಕಜ್ಜ’ ಒಳ್ಳೆಯ ಸಿನಿಮಾ ಆಗಿ ಮೂಡಿ ಬಂದು ಪ್ರೇಕ್ಷಕರ ಮನಸ್ಸಿನಲ್ಲಿ ಉಳಿಯಲಿ ಎಂದರು. ಆಡಿಯೋ, ಟ್ರೇಲರ್ ಬಿಡುಗಡೆಗೊಳಿಸಿದ ನಟ ವಸಿಷ್ಠ ಸಿಂಹ ಮಾತನಾಡಿ, ಇಲ್ಲಿಯ ಭಾಷೆ, ಇಲ್ಲಿಯ ಜನರ ಒಡನಾಟದಿಂದ ನಾನು ತುಳು ಭಾಷೆ ಕಲಿಯುವಂತಾಯಿತು. ‘ಕಜ್ಜ’ ಸಿನಿಮಾದ ಚಿತ್ರೀಕರಣದ ವೇಳೆ ಒಂದು ಕುಟುಂಬದ ಸದಸ್ಯರಂತೆ ನಾವು ಇದ್ದೆವು. ಸಿನಿಮಾ ಯಶಸ್ವಿಯಾಗುತ್ತದೆ ಎಂಬ ವಿಶ್ವಾಸ ನನಗಿದೆ ಎಂದರು. ಕರ್ನಾಟಕ ವಿಧಾನ ಸಭಾಧ್ಯಕ್ಷ ಯು.ಟಿ ಖಾದರ್ ಮಾತನಾಡಿ, ಆಧುನಿಕ ತಂತ್ರಜ್ಞಾನದಲ್ಲಿ ತುಳು ಭಾಷೆಯನ್ನು ಮರೆಯುತ್ತಾರೆ ಎಂಬ ಭಾವನೆ ನನ್ನಲ್ಲಿತ್ತು. ಆದರೆ ಇಂದು ತುಳು ಸಿನಿಮಾಗಳ ಮೂಲಕ ಭಾಷೆ ಎತ್ತರಕ್ಕೆ ಬೆಳೆದಿದೆ ಎಂದರು. ತುಳು ಭಾಷೆಯ ಅಭಿಮಾದಿಂದ ತಯಾರಿಸಿದ ‘ಕಜ್ಜ’ ಯಶಸ್ವಿಯಾಗಲಿ ಎಂದು ಪ್ರದೀಪ್ ಕಲ್ಕೂರ ನುಡಿದರು. ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, ಅನೇಕ ತುಳು ಭಾಷೆಯ ಸಿನಿಮಾಗಳು ತೆರೆಗೆ ಬರುತ್ತಿರುವುದನ್ನು ನಾವು ನೋಡುತ್ತೇವೆ. ಎಲ್ಲರೂ ತುಳು ಭಾಷೆಯ ಸಿನಿಮಾಗಳನ್ನು ನೋಡಿ ಪ್ರೋತ್ಸಾಹಿಸ ಬೇಕೆಂದರು.
ಸಮಾರಂಭದಲ್ಲಿ ಹರಿಕೃಷ್ಣ ಪುನರೂರು, ಅರವಿಂದ ಬೋಳಾರ್, ಎಂಪಿ ಶೆಣೈ, ವಿಶ್ವನಾಥ ಶೆಟ್ಟಿ ದುಬಾಯಿ, ಸತೀಶ್ ಬಂದಲೆ, ಉದಯ ಪೂಜಾರಿ ಬಲ್ಲಾಲ್ ಭಾಗ್, ರೈ ಮಸಾಲೆಯ ಮಾಲಕಿ ದಿವ್ಯಾ ರೈ, ನಿರ್ಮಾಪಕ ವಿಶಾಂತ್ ಮೆನೆಜೆಸ್, ಸಹ ನಿರ್ಮಾಪಕ ಪ್ರವೀಣ್ ಸುವರ್ಣ, ನಟ ಸಿದ್ದಾಥ್೯ ಶೆಟ್ಟಿ, ಸಂಗೀತ ನಿರ್ದೇಶಕ ಲಿಖಿತ್ ಪ್ರಸಾದ್ ಶೆಟ್ಟಿ, ಲಂಚುಲಾಲ್, ಹರೀಶ್ ಶೆಟ್ಟಿ, ಆರತಿ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಪ್ರಕಾಶ್ ಮಹಾದೇವನ್ ಪ್ರಾರ್ಥಿಸಿದರು. ಚಿತ್ರದ ಕಥೆ ಹಾಗೂ ಸಾಹಿತ್ಯ ಬರೆದ ಮೋಹನ್ ರಾಜ್ ಸ್ವಾಗತಿಸಿದರು. ಅನುರಾಗ್ ಕಾರ್ಯಕ್ರಮ ನಿರ್ವಹಿಸಿದರು. ‘ಕಜ್ಜ’ ಸಿನಿಮಾ ಮೇ 15 ರಂದು ತೆರೆ ಕಾಣಲಿದೆ.

























































































































