
ಸಾಂಸ್ಕೃತಿಕ ಸಂಘಟಕ, ನಾಟಕಕಾರ ಹಾಗೂ ರಾಜಕಾರಣಿ ರಾಮಚಂದ್ರ ಬೈಕಂಪಾಡಿ ಅವರು ತನಗಾಗಿ ಏನನ್ನೂ ಮಾಡದೇ ಇತರರ ಸಂತೋಷದಿಂದ ತೃಪ್ತಿ ಪಡೆದವರು. ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಹಲವಾರು ಯೋಜನೆಗಳ ಹೋರಾಟದಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ ಅವರ ಮಾರ್ಗದರ್ಶನ ನನಗೂ ಪ್ರೇರಣೆಯಾಗಿತ್ತು. ಅವರು ಮಾಡಿದ ನಿಸ್ವಾರ್ಥ ಸೇವೆಯಿಂದ ಅವರ ಹೆಸರು ಚಿರಸ್ಮರಣೀಯ ಎಂದು ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಜಿಲ್ಲಾ ಕಾರ್ಯಾಧ್ಯಕ್ಷರಾದ ಹರೀಶ್ ಕುಮಾರ್ ಎಂ ಶೆಟ್ಟಿ ನುಡಿದರು. ಮಂಗಳೂರು ತುಳು ಭವನದಲ್ಲಿ ಏಪ್ರಿಲ್ 25 ರಂದು ಆಯೋಜಿಸಲಾದ ತುಳು ಅಕಾಡೆಮಿಯ ಮಾಜಿ ಸದಸ್ಯ ಹಾಗೂ ತುಳು ಅಕಾಡೆಮಿಯ ವಾರ್ಷಿಕ ಗೌರವ ಪುರಸ್ಕೃತ ನಾಟಕಕಾರ ರಾಮಚಂದ್ರ ಬೈಕಂಪಾಡಿ ಅವರಿಗೆ ನುಡಿ ನಮನ ಸಲ್ಲಿಸುವ ಕಾರ್ಯಕ್ರಮದಲ್ಲಿ ಸಮಿತಿಯ ಪರವಾಗಿ ಅವರು ಮಾತನಾಡಿದರು.



ರಾಮಚಂದ್ರ ಬೈಕಂಪಾಡಿ ಅವರಲ್ಲಿ ನೈಜ ಸಾಂಸ್ಕೃತಿಕ ಕಾಳಜಿ ಇತ್ತು ಅವರು ರಾಜಕೀಯ ನೇತಾರರಾಗಿದ್ದರೂ ಅವರು ರಾಜಕೀಯ ಅದೃಷ್ಟವಂತರಾಗಿರಲಿಲ್ಲ. ಕರಾವಳಿಯ ಸಾಂಸ್ಕೃತಿಕ ಲೋಕಕ್ಕೆ ಅವರದ್ದು ದೊಡ್ಡ ಕೊಡುಗೆ ಇದೆ ಎಂದು ಹಿರಿಯ ವಿದ್ವಾಂಸ ಡಾ. ಪ್ರಭಾಕರ ಜೋಶಿ ಅವರು ಹೇಳಿದರು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಮಾತನಾಡುತ್ತಾ, ರಾಮಚಂದ್ರ ಬೈಕಂಪಾಡಿ ತುಳು ಬಾಷೆ, ಸಂಸ್ಕೃತಿಗೆ ನೀಡಿದ ಸೇವೆ ಅಪಾರ. ಅವರ ನಿಧನವು ತುಳುನಾಡಿಗೆ ಅಪಾರ ನಷ್ಟವನ್ನುಂಟು ಮಾಡಿದೆ. ನಾವೆಲ್ಲರೂ ಸೇರಿ ರಾಮಚಂದ್ರ ಬೈಕಂಪಾಡಿಯವರನ್ನು ಸ್ಮರಿಸುವ ಕಾರ್ಯ ಕೈಗೊಳ್ಳಬೇಕಾಗಿದೆ ಎಂದರು.
ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ರಾಜ್ಯ ಸಂಯೋಜಕ ಕೆ.ಪಿ ಜಗದೀಶ ಅಧಿಕಾರಿ, ಉಪಾಧ್ಯಕ್ಷ ಅಡ್ವೋಕೇಟ್ ಆರ್.ಎಂ. ಭಂಡಾರಿ, ಗೌರವ ಕಾರ್ಯದರ್ಶಿ ದೇವದಾಸ್ ಕುಲಾಲ್, ವಕ್ತಾರ ದಯಾಸಾಗರ ಚೌಟ, ಮುಂಬಯಿಯ ಪತ್ರಕರ್ತರಾದ ಈಶ್ವರ ಎಂ.ಐಲ್ ಮತ್ತು ದಿನೇಶ್ ಕುಲಾಲ್ ಅಲ್ಲದೇ, ಹಿರಿಯ ನಾಟಕ ನಿರ್ದೇಶಕ ವಿಜಯ ಕುಮಾರ್ ಕೊಡಿಯಾಲ್ ಬೈಲ್, ರಂಗ ನಿರ್ದೇಶಕ ಜಗನ್ ಪವಾರ್ ಬೇಕಲ್ , ಅಖಿಲ ಭಾರತ ತುಳು ಒಕ್ಕೂಟದ ಅಧ್ಯಕ್ಷ ಎ.ಸಿ ಭಂಡಾರಿ, ಬೈಕಂಪಾಡಿ ಮೋಗವೀರ ಸಮಾಜದ ಮುಖಂಡ ಶೋಭೇಂದ್ರ ಸಸಿಹಿತ್ಲು, ಹಿರಿಯ ರಂಗ ನಿರ್ದೇಶಕ ತಮ್ಮ ಲಕ್ಷ್ಮಣ, ರಾಷ್ಟ್ರೀಯ ಕ್ರೈಸ್ತ ವೇದಿಕೆಯ ಅಧ್ಯಕ್ಷ ಫ್ರಾಂಕ್ಲಿನ್ ಮೊಂತೇರೋ, ತುಳುನಾಡ ರಕ್ಷಣಾ ವೇದಿಕೆಯ ಅಧ್ಯಕ್ಷ ಯೋಗೀಶ್ ಶೆಟ್ಟಿ ಜೆಪ್ಪು, ಸಂಗೀತ ಕಲಾವಿದರ ಒಕ್ಕೂಟದ ಅಧ್ಯಕ್ಷ ಧನರಾಜ್ ಸುರತ್ಕಲ್, ನಿವೃತ್ತ ಪ್ರಾಂಶುಪಾಲ ಪ್ರೊ. ಕೃಷ್ಣಮೂರ್ತಿ, ಪತ್ರಕರ್ತ ಆನಂದ ಶೆಟ್ಟಿ, ಪತ್ರಕರ್ತ ಬಿ ಸಂಜೀವ ಕೆ.ಬಿ, ಸಂಕೇತ್ ರಂಗ ಸಂಸ್ಥೆಯ ಅಧ್ಯಕ್ಷ ಹರೀಶ್ ಶಕ್ತಿನಗರ, ಕಲಾವಿದೆ ಪ್ರಮೀಳ ಮೆಂಡೋನ್ಸಾ, ನಟ ಮೋಹನ್ ಬೋಳಾರ್, ಸುಧಾಕರ ರಾವ್, ರಂಜನ್ ಬೋಳೂರು ಮೊದಲಾದವರು ಉಪಸ್ಥಿತರಿದ್ದು, ದಿವಂಗತರ ಬಾವಚಿತ್ರಕ್ಕೆ ಪುಷ್ಪಾಂಜಲಿ ಅರ್ಪಿಸಿದರು.

























































































































