
ವಿಶ್ವ ಪ್ರಸಿದ್ಧ ಬಂಟರ ಸಂಘ ಮುಂಬಯಿ ಆಳಿದ ನಾಲ್ವರು ಅಧ್ಯಕ್ಷರು ವಿಜಯ ಕಾಲೇಜು ಮೂಲ್ಕಿ ಇದರ ಹಳೆ ವಿದ್ಯಾರ್ಥಿಗಳು ಎನ್ನುವುದು ಅಭಿಮಾನವೆನಿಸುತ್ತಿದೆ. ಈ ಕಾಲೇಜ್ನ ವಿದ್ಯಾರ್ಥಿಗಳು ಸಭ್ಯ ಮತ್ತು ಶಿಸ್ತುಬದ್ಧರು ಎಂದು ಹೇಳುವುದೇ ಅಭಿಮಾನದ ಸಂಗತಿ. ಆವಾಗಿನ ಮಕ್ಕಳೇ ಇಂದು ಒಳ್ಳೆಯವರೆಣಿಸಿ ಸಾಧಕರಾಗಿರುವುದು ಪ್ರಶಂಸನೀಯ. ನನ್ನ ಹುಟ್ಟು ಮೂಲ್ಕಿಯಲ್ಲಿ ಆದರೂ ಬಾಲ್ಯಾವಸ್ಥೆ ಮುಂಬಯಿಯಲ್ಲಿ ಕಳೆದ ಕಾರಣ ನಾನು ವಿಜಯ ಕಾಲೇಜ್ನಲ್ಲಿ ಕಲಿಯಲು ಅಸಾಧ್ಯವಾಯಿತು. ವಿಜಯ ಕಾಲೇಜ್ನ ಶೈಕ್ಷಣಿಕ ಕೊಡುಗೆ ಗಣನೀಯವಾದುದು ಎಂದು ಪಯ್ಯಡೆ ಹೊಟೇಲ್ಸ್ ಪ್ರೈವೇಟ್ ಲಿಮಿಟೆಡ್ ಇದರ ನಿರ್ದೇಶಕ, ಮುಂಬಯಿ ಕ್ರಿಕೆಟ್ ಅಸೋಶಿಯೇಶನ್ನ ಮಾಜಿ ಜೊತೆ ಕಾರ್ಯದರ್ಶಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಡಾ. ಪದ್ಮನಾಭ ವಿ. ಶೆಟ್ಟಿ ತಿಳಿಸಿದರು. ವಿಜಯ ಕಾಲೇಜು ಮೂಲ್ಕಿ ಗ್ಲೋಬಲ್ ಅಲ್ಯೂಮ್ನಿ ಅಸೋಸಿಯೇಶನ್ ಮಾರ್ಚ್ 7 ರಂದು ಅಂಧೇರಿ ಪೂರ್ವದ ಸಾಕಿನಾಕ ಇಲ್ಲಿನ ಪೆನಿನ್ಸುಲಾ ಗ್ರ್ಯಾಂಡ್ ಹೋಟೆಲ್ ಸಭಾಗೃಹದಲ್ಲಿ ಆಯೋಜಿಸಿದ್ದ ವಿಶೇಷ ಮಹಾಸಭೆ, ವಾರ್ಷಿಕ ಸಂಭ್ರಮ, ಗುರುವಂದನೆ ಮತ್ತು ಸನ್ಮಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಡಾ. ಪದ್ಮನಾಭ ಶೆಟ್ಟಿ ಮಾತನಾಡಿದರು. ವಿಜಯ ಕಾಲೇಜ್ ಮೂಲ್ಕಿ ಗ್ಲೋಬಲ್ ಅಲ್ಯೂಮ್ನಿ ಅಸೋಶಿಯೇಶನ್ ಮುಂಬಯಿ (ವಿಸಿಎಂಜಿಎಎಎಂ) ಅಧ್ಯಕ್ಷ ವಾಸುದೇವ ಎಂ. ಸಾಲ್ಯಾನ್ ಅಧ್ಯಕ್ಷತೆಯಲ್ಲಿ ನೇರವೇರಲ್ಪಟ್ಟ ವಾರ್ಷಿಕ ಸಂಭ್ರಮಕ್ಕೆ ವಿಸಿಎಂಜಿಎಎಎಂ ಗೌರವ ಅಧ್ಯಕ್ಷ ಆನಂದ್ ಶೆಟ್ಟಿ ದೀಪ ಪ್ರಜ್ವಲಿಸಿ ಉದ್ಘಾಟಿಸಿದರು. ಗೌರವ ಅತಿಥಿಗಳಾಗಿ ವಿಸಿಎಂಜಿಎಎಎಂ ಸ್ಥಾಪಕ ಅಧ್ಯಕ್ಷ ಸಿ.ಎ ಶಂಕರ್ ಬಿ.ಶೆಟ್ಟಿ, ವಿಜಯ ಕಾಲೇಜು ಮೂಲ್ಕಿ ಪ್ರಾಂಶುಪಾಲ ವೆಂಕಟೇಶ ಭಟ್, ವಿಸಿಎಂಜಿಎಎಎಂ ಉಪಾಧ್ಯಕ್ಷ ಅಡ್ವಕೇಟ್ ಶೇಖರ್ ಎಸ್. ಭಂಡಾರಿ, ಗೌ. ಪ್ರ. ಕಾಯದರ್ಶಿ ಭಾಸ್ಕರ್ ಬಿ ಶೆಟ್ಟಿ, ಗೌರವ ಕೋಶಾಧಿಕಾರಿ ಸಿಎ ರೋಹಿತಾಕ್ಷ ದೇವಾಡಿಗ, ಬಂಟರ ಸಂಘ ಮುಂಬಯಿ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ ವೇದಿಕೆಯಲ್ಲಿದ್ದರು.

ಕಾರ್ಯಕ್ರಮದಲ್ಲಿ ಕಾಲೇಜ್ನ ನಿವೃತ್ತ ಪ್ರಾಧ್ಯಾಪಕಿ (ಇಂಗ್ಲೀಷ್ ಬೋಧಕಿ) ಪಾರ್ವತಿ ಅಮ್ಮಾ, ವಿಶ್ರಾಂತ ಪ್ರಾಚಾರ್ಯ (ಅಕೌಂಟ್ಸ್ ಮತ್ತು ಆಡಿಟ್ ವಿಭಾಗ) ಜಿ.ಎಸ್ ಹೆಗ್ಡೆ (ಪತ್ನಿ ಗೌರಿ ಹೆಗ್ಡೆ ಜೊತೆಗೂಡಿ) ಅವರಿಗೆ ಗುರುವಂದನೆ ಸಲ್ಲಿಸಲಾಯಿತು. ಅಂತೆಯೇ ಕಾಲೇಜ್ನ ಸಾಧಕ ಹಳೆ ವಿದ್ಯಾರ್ಥಿಗಳಾದ ಹೆಸರಾಂತ ಚಾರ್ಟರ್ಡ್ ಅಕೌಂಟೆಂಟ್ ಸಿಎ ಸದಾಶಿವ ಶೆಟ್ಟಿ ಮೂಲ್ಕಿ (ಪತ್ನಿ ಸುನಂದ ಸದಾಶಿವ ಶೆಟ್ಟಿ ಜೊತೆಗೂಡಿ), ಹೆಚ್ಡಿಎಫ್ಸಿ ಬ್ಯಾಂಕ್ನ ನಿವೃತ್ತ ಸಹಾಯಕ ಪ್ರಧಾನ ವ್ಯವಸ್ಥಾಪಕ ರಾಜ್ಕುಮಾರ್ ಕಾರ್ನಾಡ್ ಹಾಗೂ ಬರಹಗಾರ ಮತ್ತು ಪತ್ರಿಕಾ ವರದಿಗಾರ ವೈ.ಟಿ ಶೆಟ್ಟಿ (ಪತ್ನಿ ಮೀರಾ ಯೋಗೇಶ್ ಶೆಟ್ಟಿ ಜೊತೆಗೂಡಿ) ಅವರಿಗೆ ಅಭಿನಂದನಾ ಗೌರವವನ್ನಿತ್ತು ಸನ್ಮಾನಿಸಲಾಯಿತು. ಸನ್ಮಾನಿತರು ಸಂದರ್ಭೋಚಿತವಾಗಿ ಮಾತನಾಡಿ ಸನ್ಮಾನಕ್ಕೆ ಅಭಿನಂದಿಸಿದರು. ಗಣ್ಯರು ಸತೀಶ್ ಆರ್. ಶೆಟ್ಟಿ (ಪೆನಿನ್ಸೂಲಾ), ರಮೇಶ್ ಶೆಟ್ಟಿ, ರಾಮ್ಪ್ರಸಾದ್ ದಾಸ್, ಅಣ್ಣಪ್ಪ ಶೆಟ್ಟಿ, ಪೇಟೆಮನೆ ಪ್ರಕಾಶ್ ಶೆಟ್ಟಿ, ಸುನೀಲ್ ಕುಮಾರ್ ಶೆಟ್ಟಿ, ರವೀಂದ್ರ ಶೆಟ್ಟಿ ಕೊಟ್ರಪಾಡಿಗುತ್ತು, ಎ.ಕೆ ಹರೀಶ್, ಕಿಶೋರ್ ಚೌಟ, ಸಿಎ ಅಶ್ವಜಿತ್ ಹೆಜ್ಮಾಡಿ, ಭಾಸ್ಕರ್ ಎಂ. ಸಾಲ್ಯಾನ್, ರತ್ನಾಕರ್ ಶೆಟ್ಟಿ ದೆಪ್ಪಣಿಗುತ್ತು, ಶ್ಯಾಮ್ಸುಂದರ್ ಶೆಣೈ ಮತ್ತಿತರರನ್ನು ಗೌರವಿಸಿ ಹಳೆ ವಿದ್ಯಾರ್ಥಿಗಳ ಮಕ್ಕಳಿಗೆ ಶೈಕ್ಷಣಿಕ ಸಾಧನೆ ಪರಿಗಣಿಸಿ ಸತ್ಕರಿಸಿದರು. ಪಾರ್ವತಿ ಮಾತನಾಡಿ, ವಿಜಯ ಕಾಲೇಜ್ನ ಈ ಹಳೆ ವಿದ್ಯಾರ್ಥಿ ಸಂಘದ ಜಾಗತಿಕ ಸಾಂಘಿಕತೆ ಆವಿಷ್ಕಾರಿತ ಮತ್ತು ಅದ್ಭುತವಾಗಿದೆ. ಸಮಾಜಕ್ಕೆ ಇದರ ನಿಸ್ವಾರ್ಥ ಸೇವೆಯು ನಿಜವಾಗಿಯೂ ಸ್ವಾರ್ಥ ರಹಿತವಾಗಿದೆ. ಶಿಕ್ಷಣ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆಗಾಗಿ ಮತ್ತು ಅಗತ್ಯವಿರುವ ವಿದ್ಯಾರ್ಥಿಗಳಿಗೆ ಮತ್ತು ಕಾಲೇಜ್ಗೆ ಸಹಾಯ ಮಾಡಿದ್ದಕ್ಕಾಗಿ ಅಭಿನಂದನೆಗಳು. ಬೆಳೆದ ವಿದ್ಯಾರ್ಥಿಗಳಿಗೆ ಭಾಷೆಯನ್ನು ಕಲಿಸುವುದು ಸುಲಭವಲ್ಲ ಎಂದು ನನ್ನ ಹಿರಿಯ ಬೋಧಕರು ಹೇಳುತ್ತಿದ್ದು, ನನ್ನನ್ನು ಗಾಬರಿ ಪಡಿಸಿತ್ತು. ಏಕೆಂದರೆ ವಿದ್ಯಾರ್ಥಿಗಳು ಭಾಷಾ ವಿಷಯಗಳಿಗೆ ಹಾಜರಾಗುವಾಗ ದೇಹ ಮತ್ತು ಮನಸ್ಸನ್ನು ಬಿಗಿಯಾಗಿ ಹಿಡಿದಿಟ್ಟು ತರಗತಿಗಳನ್ನು ವಿಶ್ರಾಂತಿಗಾಗಿ ಪರಿಗಣಿಸುತ್ತಾರೆ. ಅಂದು ಅದೇ ಸರಿಯಾಗಿದ್ದರೂ ಇಂದು ಅದೇ ವಿದ್ಯಾರ್ಥಿಗಳೇ ಭಾಷಾತಜ್ಞರಾಗಿ ಜಾಗತಿಕವಾಗಿ ಸಾಧಕರೆಣಿಸಿರುವುದು ಹೆಮ್ಮೆದಾಯಕವಾಗಿದೆ. ಇದೇ ಪ್ರತಿಯೊಬ್ಬ ಅಧ್ಯಾಪಕರಿಗೆ ಸಲ್ಲುವ ನಿಜಾರ್ಥದ ಗೌರವವಾಗಿದೆ ಎಂದರು.
ರಾಷ್ಟ್ರದ ಆರ್ಥಿಕ ರಾಜಧಾನಿ ಅಂತರಾಷ್ಟ್ರೀಯ ಮಹಾನಗರಿಯಲ್ಲಿ ನಮ್ಮ ವಿದ್ಯಾರ್ಥಿಗಳು ನಡೆಸುವ ಈ ಕಾರ್ಯಕ್ರಮ ಪ್ರಮುಖ ಮತ್ತು ವಿಶಿಷ್ಟವಾಗಿದೆ. ನಿವೃತ್ತ ಅಧ್ಯಾಪಕರನ್ನು ಸನ್ಮಾನಿಸುವ ನಿಷ್ಠೆ ಅರ್ಥಗರ್ಭಿತವಾದುದು. ಇದು ಸಾಧಕರ ಅಭಿಮಾನ ಪಾತ್ರವಾದ ಸಾಧನಾಶೀಲ ಸಂಭ್ರಮವಾಗಿದೆ. ಎಂಬತ್ತರ ದಶಕದತ್ತ ಮತ್ತೆ ಅಧ್ಯಾಪನಾ ದಿನಗಳನ್ನು ಮೆಲುಕು ಹಾಕುತ್ತಾ ಸಂತಸ ಪಡುವ ಕ್ಷಣಗಳಿಕ್ಕಿಂತ ಸನ್ಮಾನ ಬೇರೊಂದಿಲ್ಲ. ಆದ್ದರಿಂದ ಇದು ನಮ್ಮ ವೃತ್ತಿಗೆ ಸಂತುಷ್ಟಿ ತಂದಿದ್ದು ಸಮಾಧಾನಕರ ಬದುಕಿಗೆ ಪ್ರೇರಣೆಯಾಗಿದೆ ಎಂದು ಪ್ರೋ. ಜಿ.ಎಸ್ ಹೆಗ್ಡೆ ನುಡಿದರು. ವೆಂಕಟೇಶ್ ಭಟ್ ಮಾತನಾಡಿ, ನಿಮ್ಮ ಈ ಮಟ್ಟದ ಸಾಧನೆಗೆ ಕಾಲೇಜ್ನ ಪ್ರಾಂಶುಪಾಲರು, ಪ್ರಾಧ್ಯಾಪಕರು ಸಹಾಯ ಮಾಡಿದ್ದು, ಅದನ್ನು ನೆನಪಿಟ್ಟುಕೊಂಡು ಕಾಲೇಜ್ಗೆ ಸಹಾಯ ಮಾಡುತ್ತಿರುವುದು ವಿದ್ಯಾಋಣ ಪೂರೈಕೆಯಾಗಿದೆ. ನಿಮ್ಮ ಕೃಪೆಯಿಂದ ಪ್ರಸಕ್ತ ವಿದ್ಯಾರ್ಥಿಗಳು ನಿರಾಳವಾಗಿ ರ್ಯಾಂಕ್ ಗಳನ್ನು ಪಡೆಯುತ್ತಿದ್ದು, ನಿಮ್ಮ ಕೊಡುಗೆಯ ಸದುಪಯೋಗ ಪಡೆಯುತ್ತಿದ್ದಾರೆ ಎಂದರು. ಒಂದು ಸಂಘಟನೆಯು ಯಶಸ್ವಿಯಾಗಿ ಮುನ್ನಡೆಯಬೇಕಾದರೆ ಅದಕ್ಕೆ ಸದಸ್ಯರ ಸಹಭಾಗಿತ್ವ ಮುಖ್ಯವಾದುದು. ಸದ್ಯದ ಪದಾಧಿಕಾರಿಗಳ ಅವಿರತ ಪರಿಶ್ರಮ ಯಶಸ್ಸುವಾಗಿರುವುದಕ್ಕೆ ಈ ಕಾರ್ಯಕ್ರಮವು ಸಾಕ್ಷಿಯಾಗಿದೆ. ನಾವು ಇಂದು ಏನಾಗಿದ್ದರೂ ಅದು ವಿಜಯ ಕಾಲೇಜ್ನ ಪ್ರಾಧ್ಯಾಪಕರ ಬೋಧನಾಶ್ರಮದ ಫಲವಾಗಿದೆ. ಮುಂದಿನ ದಿನಗಳಲ್ಲಿ ಶಿಕ್ಷಣಕ್ಕಾಗಿ ಹೆಚ್ಚುವರಿ ದೇಣಿಗೆಯನ್ನು ಕೊಡಮಾಡಿ ಸಾಕ್ಷರತಾ ಸೇವೆಗೆ ಪ್ರೋತ್ಸಾಹಕರಾಗೋಣ ಎಂದು ಸಿಎ. ಶಂಕರ್ ಶೆಟ್ಟಿ ನುಡಿದರು.
ಹಳೆ ವಿದ್ಯಾರ್ಥಗಳ ಸಹಕಾರ ಅವಿಸ್ಮರಣೀಯವಾಗಿದೆ. ನಮ್ಮ ಉಪದ್ರವು ಕಾಲೇಜ್ಗೆ ಉಪಕಾರವಾಗಿ ಪರಿಣಮಿಸಿರುವುದೇ ನಮ್ಮ ಅಭಿಮಾನವಾಗಿದೆ. ಉದಾರತೆಯಿಂದ ಮಾತ್ರ ಸಂಸ್ಥೆಗಳ ಮುನ್ನಡೆ ಸಾಧ್ಯವಾಗಿದ್ದು, ಭವಿಷ್ಯದಲ್ಲಿ ನಿಮ್ಮೆಲ್ಲರ ಸಹಕಾರ ಇನ್ನಷ್ಟು ದ್ವಿಗುಣಗೊಳ್ಳಲಿ. ಈ ಮೂಲಕ ವಿದ್ಯಾರ್ಥಿಗಳ ದತ್ತು ಸ್ವೀಕಾರ ಮತ್ತಷ್ಟು ಅಧಿಕಗೊಳಿಸೋಣ ಎಂದು ಅಧ್ಯಕ್ಷೀಯ ಭಾಷಣವನ್ನುದ್ದೇಶಿಸಿ ವಾಸುದೇವ ಸಾಲಿಯಾನ್ ತಿಳಿಸಿದರು. ಸಿಎ ಸೋಮನಾಥ್ ಕುಂದರ್, ಮೋಹನ್ದಾಸ್ ಹೆಜ್ಮಾಡಿ ಸೇರಿದಂತೆ ಸದಸ್ಯರನೇಕರು ಹಾಜರಿದ್ದು, ಗುರುವಂದನೆ ಸಲ್ಲಿಸಿ ಶುಭ ಹಾರೈಸಿದರು. ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಸದಸ್ಯರ ಮಕ್ಕಳು ನೃತ್ಯವೈಭವ ಪ್ರದರ್ಶಿಸಿದ್ದು, ರಾಜ್ಕುಮಾರ್ ಕಾರ್ನಾಡ್ ಸಂಗೀತ ರಸಮಂಜರಿ ಸಾದರಪಡಿಸಿದರು. ಶಶಿಧರ್ ಬಂಗೇರ ಮಟ್ಟು ಸಾಂಸ್ಕೃತಿಕ ಕಾರ್ಯಕ್ರಮ ನಿರೂಪಿಸಿದರು. ಗತ ಸಾಲಿನಲ್ಲಿ ನಿಧನರಾದ ಗಣ್ಯರಿಗೆ ಆರಂಭದಲ್ಲಿ ಮೌನ ಪ್ರಾರ್ಥನೆಯೊಂದಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಆನಂದ್ ಶೆಟ್ಟಿ ಸ್ವಾಗತಿಸಿ, ಪ್ರಸ್ತಾವನೆಗೈದರು. ಚಿತ್ರಾ ಗಣೇಶ್ ಶೆಟ್ಟಿ ಪ್ರಾರ್ಥನೆಗೈದರು. ಭಾಸ್ಕರ್ ಬಿ ಶೆಟ್ಟಿ ವಾರ್ಷಿಕ ವರದಿ ವಾಚಿಸಿದರು. ಸಿಎ ರೋಹಿತಾಕ್ಷ ದೇವಾಡಿಗ ಗತ ವಾರ್ಷಿಕ ಲೆಕ್ಕಪತ್ರ ಮಂಡಿಸಿದರು. ವಿದ್ಯಾ ಶೆಣೈ ಮತ್ತು ಸರಿತಾ ರಾವ್ ಗುರುವಂದನಾ ಸ್ವೀಕೃತರನ್ನು ಪರಿಚಯಿಸಿದರು. ಲಕ್ಷ್ಮೀಶ್ ರಾವ್, ಶಶಿಧರ್ ಬಂಗೇರ ಸನ್ಮಾನಿತರನ್ನು ಪರಿಚಯಿಸಿದರು. ಹರೀಶ್ ಹೆಜ್ಮಾಡಿ ಕಾರ್ಯಕ್ರಮ ನಿರೂಪಿಸಿದರು. ಶೇಖರ್ ಭಂಡಾರಿ ವಂದಿಸಿದರು.
ಚಿತ್ರ, ವರದಿ : ರೋನ್ಸ್ ಬಂಟ್ವಾಳ್

























































































































