ನನ್ನ ಇಂದಿನ ಎಲ್ಲಾ ಸಾಧನೆಗಳಿಗೆ ಆಳ್ವಾಸ್ ಕಾರಣ. ವಿದ್ಯಾರ್ಥಿ ಜೀವನದಲ್ಲಿ ಕ್ರೀಡೆಯ ಮೂಲಕ ಆಳ್ವಾಸ್ ನೀಡಿದ ಅವಕಾಶಗಳು ಮತ್ತು ಮಾರ್ಗದರ್ಶನದಿಂದ ನನ್ನ ಜೀವನದಲ್ಲಿ ಬದಲಾವಣೆ ಸಾಧ್ಯವಾಯಿತು ಎಂದು ಉಡುಪಿ ವಲಯದ ಫಾರೆಸ್ಟ್ ಬೀಟ್ ಆಫೀಸರ್ ಹಾಗೂ ಹಿರಿಯ ವಿದ್ಯಾರ್ಥಿ ಶರತ್ ಶೆಟ್ಟಿ ನುಡಿದರು. ಅವರು ಆಳ್ವಾಸ್ ಕಾಲೇಜ್ ಆಫ್ ಫಿಸಿಯೋತೆರೆಪಿ ಆಯೋಜಿಸಿದ್ದ ರಾಜೀವ್ ಗಾಂಧಿ ವಿಜ್ಞಾನ ವಿವಿಗಳ ಮಂಗಳೂರು ವಲಯ ಮಟ್ಟದ ಹುಡುಗರ ಮತ್ತು ಹುಡುಗಿಯರ ವಾಲಿಬಾಲ್ ಪಂದ್ಯಾಟವನ್ನು ಉದ್ಘಾಟಿಸಿ ಮಾತನಾಡಿದರು. ಆಳ್ವಾಸ್ನ ಶಿಸ್ತು, ಕಠಿಣ ಪರಿಶ್ರಮ ಮತ್ತು ಎಲ್ಲರಿಗೂ ಸಮಾನ ಅವಕಾಶ ನೀಡುವ ವ್ಯವಸ್ಥೆ ನನ್ನಂತಹ ಅನೇಕ ವಿದ್ಯಾರ್ಥಿಗಳನ್ನು ಯಶಸ್ಸಿನ ಹಾದಿಗೆ ಕೊಂಡೊಯ್ದಿದೆ. ಇಂದು ನಾನು ಸರಕಾರಿ ಉದ್ಯೋಗಿಯಾಗಿರುವುದು ಆಳ್ವಾಸ್ನಲ್ಲಿ ಕಲಿತ ನೈತಿಕತೆ, ಶ್ರಮ ಮತ್ತು ನಿಷ್ಠೆಯ ಫಲ. ಈ ಹಂತದಲ್ಲಿ ಸಿಗುವ ಅವಕಾಶಗಳನ್ನು ವಿದ್ಯಾರ್ಥಿಗಳು ಸಮರ್ಪಕವಾಗಿ ಉಪಯೋಗಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ಆಳ್ವಾಸ್ನಲ್ಲಿ ನಿಜವಾದ ಕಲಿಕೆ ಸಂಜೆ ಐದು ಗಂಟೆಯ ನಂತರ ಆರಂಭವಾಗುತ್ತದೆ. ದಿನನಿತ್ಯದ ತರಗತಿಗಳ ನಂತರ ನಡೆಯುವ ಚಟುವಟಿಕೆಗಳು ವಿದ್ಯಾರ್ಥಿಗಳಿಗೆ ಜೀವನ ಕೌಶಲ್ಯವನ್ನು ಕಲಿಸುತ್ತವೆ. ಇಂತಹ ಕಲಿಕೆಯಲ್ಲಿ ತೊಡಗಿಕೊಂಡವರ ಬದುಕು ಹಸನಾಗಿದೆ. ಇಂದಿನ ಮುಖ್ಯ ಅತಿಥಿಗಳು ಈ ನೆಲೆಯಲ್ಲಿ ಜೀವಂತ ನಿದರ್ಶನ ಎಂದು ಹೇಳಿದರು. ಪುರುಷರ ವಿಭಾಗದಲ್ಲಿ 18, ಮಹಿಳೆಯರ ವಿಭಾಗದಲ್ಲಿ 12 ತಂಡಗಳು ಭಾಗವಹಿಸಿದವು. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಚರ್ಯೆ ಪ್ರೊ. ಕ್ಷಮಾ ಸುಶೀಲ್ ಶೆಟ್ಟಿ, ಆಳ್ವಾಸ್ ದೈಹಿಕ ಕಾಲೇಜಿನ ಪ್ರಾಚರ್ಯ ಮಧು ಜಿಆರ್, ದೈಹಿಕ ನಿರ್ದೇಶಕರಾದ ಅವಿನಾಶ್, ಹರೀಶ್ ಗೌಡ ಇದ್ದರು. ಉದ್ಘಾಟನೆಯ ಬಳಿಕ ವಾಲಿಬಾಲ್ ಪಂದ್ಯಾಟಕ್ಕೆ ಚಾಲನೆ ದೊರಕಿತು. ಉಪನ್ಯಾಸಕಿ ಸೌಧ ಕಾರ್ಯಕ್ರಮ ನಿರೂಪಿಸಿದರು.