ಬಾಂಬೆ ಬಂಟ್ಸ್ ಅಸೋಸಿಯೇಶನ್ ನ ಮಹಿಳಾ ವಿಭಾಗದ ವತಿಯಿಂದ ಜೂನ್ 21ರಂದು ಸಾಯಂಕಾಲ 3.30 ಕ್ಕೆ ಸಯನ್ ನಿತ್ಯಾನಂದ ಸಭಾಗೃಹದ ವೇದಿಕೆಯಲ್ಲಿ ಬಾಂಬೆ ಬಂಟ್ಸ್ ಅಸೋಸಿಯೇಶನ್ ಸಂಸ್ಥೆಯ ಅಧ್ಯಕ್ಷರಾದ ಅಡ್ವೋಕೇಟ್ ಡಿ.ಕೆ ಶೆಟ್ಟಿಯವರ ಅಧ್ಯಕ್ಷತೆ ಹಾಗೂ ಮಾರ್ಗದರ್ಶನದೊಂದಿಗೆ ಯೋಗ ದಿನಾಚರಣೆಯು ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಹಲವಾರು ಗೋಲ್ಡ್ ಮೆಡಲ್ ಪಡೆದ ಹಾಗೂ “ದೇವಾಡಿಗ ರತ್ನ” ಪ್ರಶಸ್ತಿಗೆ ಭಾಜನರಾದ ಯೋಗ ಗುರು ಜಯಂತಿ ದೇವಾಡಿಗರವರು ವಿಶೇಷವಾಗಿ ಆಗಮಿಸಿ ಸಹಕರಿಸಲಿದ್ದಾರೆ.

ಅಗ್ನಿಯ ಸುಡುವಲ್ಲಿ ಉದಕವ ತೊಳೆವಲ್ಲಿ, ವಾಯುವ ಮೆಟ್ಟಿ ಆಕಾಶವ ಹಿಡಿವಲ್ಲಿ, ಯೋಗದ ಹೊಲಬ ನೀನೆತ್ತ ಬಲ್ಲೆ. ವಚನಕಾರರಾದ ಅಲ್ಲಮ ಪ್ರಭುಗಳ ಈ ಸಾಲುಗಳು ಸರಳವಾಗಿ ಹೇಳುವುದೇನೆಂದರೆ, ವ್ಯಕ್ತಿಯು ಯೋಗದ ಮೂಲಕ ಅಗ್ನಿ, ಉದಕ, ವಾಯು ಮತ್ತು ಆಕಾಶದಂತಹ ಪ್ರಕೃತಿಯ ಶಕ್ತಿಗಳನ್ನು ತನ್ನ ಅಧೀನದಲ್ಲಿ ತರಬಹುದು ಅಥವಾ ಅವುಗಳೊಂದಿಗೆ ಸಾಮರಸ್ಯದಿಂದ ಬದುಕಬಹುದು. ಅಲ್ಲದೇ ಇದು ಯೋಗದ ಅಂತಿಮ ಗುರಿ ಅಥವಾ ಉದ್ದೇಶವನ್ನು ಸೂಚಿಸುತ್ತದೆ ಮತ್ತು ಯೋಗದ ಶಕ್ತಿಯ ಬಗ್ಗೆ ತಿಳಿಸುತ್ತದೆ. ಯೋಗವು 5000 ವರ್ಷಗಳಿಗೂ ಹೆಚ್ಚು ಹಳೆಯದಾದ ಭಾರತೀಯ ಸಂಪ್ರದಾಯವಾಗಿದೆ. ಇದನ್ನು ಋಷಿಮುನಿಗಳು ಅಧ್ಯಾತ್ಮಿಕ ಮತ್ತು ದೈಹಿಕ ಶಿಸ್ತಿನ ರೂಪದಲ್ಲಿ ಅಭಿವೃದ್ಧಿ ಪಡಿಸಿದರು. ಯೋಗ ವಿದ್ಯೆಯು ಇಡೀ ಜಗತ್ತಿಗೆ ಭಾರತೀಯರು ನೀಡಿದ ದೊಡ್ಡ ಕೊಡುಗೆಯಾಗಿದೆ. ಯಜ್ ಅಂದರೆ ಒಂದುಗೂಡಿಸುವುದು.2014ರಲ್ಲಿ ಭಾರತದ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರು ವಿಶ್ವಸಂಸ್ಥೆಯಲ್ಲಿ ಯೋಗ ದಿನವನ್ನು ಆಚರಿಸುವ ಪ್ರಸ್ತಾಪವನ್ನು ಮಂಡಿಸಿದ ನಂತರ ಅದಕ್ಕೆ ಮಾನ್ಯತೆ ದೊರೆತು 2015ರ ಜೂನ್ 21ರಂದು ವಿಶ್ವ ಯೋಗ ದಿನವನ್ನು ಆಚರಿಸುವಂತೆ ಘೋಷಿಸಲಾಯಿತು. ಯೋಗದ ಮೂಲಕ ಆರೋಗ್ಯ ಮತ್ತು ಶಾಂತಿ ಸಾಮರಸ್ಯವನ್ನು ಪಡೆಯಬಹುದು. ಇಂದು ವಿಶ್ವ ಯೋಗದ ದಿನವನ್ನು 190ಕ್ಕೂ ಹೆಚ್ಚು ದೇಶಗಳಲ್ಲಿ ಆಚರಿಸಲಾಗುತ್ತದೆ. ಈ ದಿನ ಅನೇಕ ಸ್ಥಳಗಳಲ್ಲಿ ಶಿಬಿರಗಳು ಸಾಮೂಹಿಕ ಯೋಗ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಆರೋಗ್ಯದ ದೃಷ್ಟಿಯಿಂದ ಯೋಗವು ರಕ್ತದೊತ್ತಡ, ಆತಂಕ, ಜೀರ್ಣ ಕ್ರಿಯೆ ಮೊದಲಾದ ತೊಂದರೆಗಳನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಭಾರತವು ಯೋಗದ ಜನ್ಮಸ್ಥಳವಾಗಿದ್ದು, ವಿಶ್ವ ಯೋಗ ದಿನದ ಮೂಲಕ ತನ್ನ ಸಂಸ್ಕೃತಿಕ ಪರಂಪರೆಯನ್ನು ಜಾಗತಿಕವಾಗಿ ಉತ್ತೇಜಿಸುತ್ತದೆ ಎಂದರೆ ತಪ್ಪಾಗಲಾರದು. ಆಧುನಿಕ ಜೀವನ ಶೈಲಿಯ ಒತ್ತಡದಿಂದ ಯುವ ಜನತೆಗೆ ಯೋಗವು ಶಾಂತಿ ಏಕಾಗ್ರತೆಯನ್ನು ಒದಗಿಸುವ ಒಂದು ಶಕ್ತಿಶಾಲಿ ಸಾಧನವಾಗಿದೆ.
ಪ್ರತಿಯೊಬ್ಬರು ವಿಶ್ವ ಯೋಗ ದಿನವನ್ನು ಆಚರಿಸುವ ಮೂಲಕ ಯೋಗದ ಸಂದೇಶವನ್ನು ಪ್ರತಿಯೊಬ್ಬರಿಗೂ ತಲುಪಿಸಿ ಒಂದು ಆರೋಗ್ಯಕರ ಮತ್ತು ಸಾಮರಸ್ಯದ ಒಗ್ಗಟ್ಟನ್ನು ಕಟ್ಟೋಣ. ಯೋಗ ದಿನದ ಈ ಕಾರ್ಯಕ್ರಮವು ತುಂಬಾ ಒಳ್ಳೆಯ ರೀತಿಯಲ್ಲಿ ನಡೆಯಲಿದ್ದು ಎಲ್ಲರೂ ಭಾಗವಹಿಸಬೇಕೆಂದು ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶ್ರೀಮತಿ ಶಾಂತಾ ನಾರಾಯಣ ಶೆಟ್ಟಿ ಹಾಗೂ ಸಮಿತಿ ಸದಸ್ಯೆಯರು ಮತ್ತು ಬಾಂಬೆ ಬಂಟ್ಸ್ ಅಸೋಸಿಯೇಶನ್ ನ ಯುವ ವಿಭಾಗದ ಪದಾಧಿಕಾರಿಗಳು ವಿನಂತಿಸಿದ್ದಾರೆ.