ಯಾವುದೇ ಭೇದ ಭಾವವಿಲ್ಲದೆ ಆತಿಥ್ಯ ನೀಡುವುದರಲ್ಲಿ ಬಂಟರ ಸಮುದಾಯ ಹೆಸರುವಾಸಿಯಾಗಿದೆ. ಈ ಸಮುದಾಯದವರು ಅತ್ಯಂತ ಶ್ರಮಜೀವಿಗಳು. ಅತಿಥಿ ದೇವೋ ಭವ ಎನ್ನುವ ಹಾಗೆ ಅತಿಥಿಗಳನ್ನು ದೇವರ ರೀತಿ ಭಾವಿಸುತ್ತಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆಯಾದ ಲಕ್ಷ್ಮಿ ಹೆಬ್ಬಾಳಕರ್ ಹೇಳಿದರು. ಬೆಳಗಾವಿಯ ಬಂಟರ ಯಾನೆ ನಾಡವರ ಸಂಘದ ವತಿಯಿಂದ ರಾಷ್ಟ್ರೀಯ ಹೆದ್ದಾರಿ 4 ರ ನ್ಯೂ ಗಾಂಧಿ ನಗರದಲ್ಲಿ ನವೀಕೃತಗೊಂಡಿರುವ ಬಂಟರ ಭವನದ ಉದ್ಘಾಟನಾ ಸಮಾರಂಭ ಹಾಗೂ ಮಾಣಿಕ್ಯ ಸಂಭ್ರಮದಲ್ಲಿ ಮಾತನಾಡಿದ ಸಚಿವರು, ಚಿಕ್ಕ ವಯಸ್ಸಿನಲ್ಲೇ ಮನೆಬಿಟ್ಟು ಹೋಗಿ ಸ್ವಂತ ಕಾಲ ಮೇಲೆ ನಿಲ್ಲುವ ಸ್ವಾಭಿಮಾನಿಗಳು. ದೇಶದ ವಿವಿಧೆಡೆ ಸ್ವಾವಲಂಬಿ ಬದುಕನ್ನು ಕಟ್ಟಿಕೊಂಡಿದ್ದಾರೆ ಎಂದು ಹೇಳಿದರು.

ಸಂಸ್ಕೃತಿ ಕಲೆಯಲ್ಲಿ ನಿಮ್ಮ ಸಮಾಜಕ್ಕೆ ಇರುವ ಆಸಕ್ತಿ ನೋಡಿ ಮಂತ್ರ ಮುಗ್ಧಳಾಗಿದ್ದೇನೆ. ಈ ಸಮುದಾಯದವರು ನಿಸ್ವಾರ್ಥಿಗಳು. ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆಯಾಗಿರುವುದು ನನ್ನ ಪೂರ್ವ ಜನ್ಮದ ಪುಣ್ಯ. ಉಡುಪಿ ಶ್ರೀ ಕೃಷ್ಣ, ಕಟೀಲು ದುರ್ಗಾಪರಮೇಶ್ವರಿ, ಕಾಪು ಮಾರಿಗುಡಿ ದೇವರ ದರ್ಶನ ಭಾಗ್ಯ ನನಗೆ ಸಿಗುತ್ತಿದೆ. ಭೂತಾರಾಧನೆ ಸೇರಿದಂತೆ ಕರಾವಳಿಯ ಸಂಸ್ಕೃತಿ ಬಂಟರ ಸಮುದಾಯದವರಿಂದ ಶ್ರೀಮಂತವಾಗಿದೆ ಎಂದು ಹೇಳಿದರು. ಬಂಟ ಸಮುದಾಯದ ಸಂಖ್ಯೆ ಕಡಿಮೆ ಇದ್ದರೂ ಇಡೀ ವಿಶ್ವದ ಹೃದಯವನ್ನು ಗೆದ್ದಿದ್ದೀರಾ. ದೇಶಕ್ಕೆ, ರಾಜ್ಯಕ್ಕೆ ಬಂಟರು ಗುರುತರ ಕಾಣಿಕೆ ನೀಡಿದ್ದಾರೆ. ಸ್ವಾತಂತ್ರ್ಯ ಹೋರಾಟಕ್ಕೆ, ಕಲೆ ಸಾಹಿತ್ಯಕ್ಕೂ ಕೊಡುಗೆ ನೀಡಿದ್ದಾರೆ. ಹೃದಯ ಶ್ರೀಮಂತಿಕೆ ಮೆರೆವ ಆತಿಥ್ಯಕ್ಕೆ ಹೆಸರಾದ ಸಮಾಜ ನಿಮ್ಮದು. ಹೋಟೆಲ್ ಉದ್ಯಮವನ್ನು ಯಶಸ್ವಿಯಾಗಿ ನಿರ್ವಹಿಸುವುದರಲ್ಲಿ ಬಂಟರು ನಿಸ್ಸೀಮರು ಎಂದು ಹೇಳಿದರು. ಭಗವಂತನ ಕೃಪಾಶೀರ್ವಾದ ನಿಮ್ಮ ಮೇಲಿದೆ ಯಾವುದೇ ಊರಿಗೆ ಹೋದರೂ ಎಲ್ಲರನ್ನೂ ಪ್ರೀತಿ ವಿಶ್ವಾಸದಿಂದ ನೋಡುತ್ತೀರಿ. ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯುತ್ತೀರಿ. ಇದು ಬಂಟರ ಸಮುದಾಯದವರಿಗೆ ಇರುವ ಕಲೆ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಆಗಮಿಸಿದ ಚಿಕ್ಕೋಡಿ ಲೋಕಸಭಾ ಸಂಸದೆಯಾದ ಪ್ರಿಯಾಂಕಾ ಜಾರಕಿಹೊಳಿ ಅವರು ಮಾತನಾಡಿ, ನಾನು ಮೊದಲ ಬಾರಿಗೆ ತಮ್ಮ ಸಮಾಜದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೇನೆ. ಇಂತಹ ಅದ್ಬುತ ಕಾರ್ಯಕ್ರಮದಲ್ಲಿ ನಾನು ಭಾಗಿಯಾಗಲು ಕಾರಣರಾದ ತಮ್ಮೆಲ್ಲರಿಗೆ ನಾನು ಋಣಿಯಾಗಿದ್ದೇನೆ. ತಂದೆಯವರು ಮೊದಲಿನಿಂದಲೂ ಹೇಳುತ್ತಿರುವ ಮಾತೆಂದರೆ ನಾವು ಬೇರೆ ಬೇರೆ ಸಮುದಾಯದ ಜನರ ಬಳಿ ಹೋಗಬೇಕು, ಅವರ ಜೀವನಶೈಲಿ, ಸಂಸ್ಕೃತಿ ಹಾಗೂ ಸಮಸ್ಯೆಗಳ ಬಗ್ಗೆ ತಿಳಿಯಬೇಕು ಎನ್ನುತ್ತಿದ್ದರು. ತಮ್ಮ ಸಮುದಾಯ ತುಂಬಾ ಬೆಳವಣಿಗೆ ಆಗಿರುವ ಸಮುದಾಯ, ಸಮಾಜದ ಎಲ್ಲಾ ಕ್ಷೇತ್ರಗಳಲ್ಲಿಯೂ ತಮ್ಮ ಸಮುದಾಯದ ಸಾಧನೆ ಇದೆ. ಬರುವ ದಿನಗಳಲ್ಲಿ ಈ ಸಮುದಾಯದ ಜನರು ಮತ್ತಷ್ಟು ಮೇಲುಗೈ ಸಾಧಿಸಲಿ ಎಂದು ಶುಭ ಹಾರೈಸಿದರು.
ಸಮುದಾಯದ ಪ್ರಮುಖರಾಗಿ ಕಾರ್ಯಕ್ರಮದ ಸಭಾಧ್ಯಕ್ಷರಾಗಿ ಆಗಮಿಸಿದ ಡಾ| ಕೆ ಪ್ರಕಾಶ್ ಶೆಟ್ಟಿ ಅವರು ಮಾತನಾಡಿ, ಬೆಳಗಾವಿ ಬಂಟರ ಸಂಘಟನೆ ಹಾಗೂ ಈ ಭವನವನ್ನು ನವೀಕರಣದ ಉದ್ಘಾಟನೆ ಕಾರ್ಯಕ್ರಮ ನೋಡಿ ತುಂಬಾ ಖುಷಿಯಾಗಿದೆ. ನಾನು ಎಲ್ಲಾ ಕಡೆಯ ಸಂಘಟನೆ ಹಾಗೂ ಭವನಗಳನ್ನು ನೋಡಿದ್ದೇನೆ. ಬೇರೆ ಕಡೆ ದೊಡ್ಡ ದೊಡ್ಡ ಭವನಗಳು ಇರುತ್ತವೆ. ಆದರೆ ಜನರೇ ಇರುವುದಿಲ್ಲ. ಆದರೆ ಇಲ್ಲಿ ಸೇರಿರುವ ಜನರಿಗೆ ಭವನವೇ ಸಾಲುತ್ತಿಲ್ಲ. ಬೆಳಗಾವಿಯ ಸಂಘದೊಂದಿಗೆ ನಾನು ಮುಂದೆ ಯಾವತ್ತೂ ಇರುತ್ತೇನೆ ಎಂಬ ಭರವಸೆಯನ್ನು ನೀಡಿದರು.
ಬಂಟರ ಸಮುದಾಯದ ಸೆಲೆಬ್ರಿಟಿಯಾದಂತ ಸಂಗೀತ ಮಾಂತ್ರಿಕ ಹಾಗೂ ನಟ ಗುರುಕಿರಣ್ ಅವರು ಮಾತನಾಡಿ, 2002ರಲ್ಲಿ ಐಶ್ವರ್ಯ ರೈ ಇದ್ದ ಒಂದು ಸಭೆಯಲ್ಲಿ ಒಬ್ಬ ವ್ಯಕ್ತಿ ಮಾತನಾಡುತ್ತಾ, ಅಂಡರ್ ವರ್ಲ್ಡ್ ನಿಂದ ಹಿಡಿದು ಮಿಸ್ ವರ್ಲ್ಡ್ ವರೆಗೂ ಎಲ್ಲೆಲ್ಲೂ ಬಂಟರೇನಾ ಎಂದಿದ್ದರು, ಅಂದರೆ ಎಲ್ಲಾ ರಂಗದಲ್ಲಿ ಬಂಟರ ಸಮುದಾಯ ಸಾಧನೆ ಮಾಡಿದೆ. ಗುರು, ಮಠ ಇಲ್ಲದ ಸಮುದಾಯ ಬಂಟ ಸಮುದಾಯ. ಯಾಕೆಂದರೆ ಇಲ್ಲಿ ಎಲ್ಲರೂ ನಾಯಕರೇ. ಇಲ್ಲಿ ಯಾರೂ ಇನ್ನೊಬ್ಬರ ಮಾತು ಕೇಳುವದಿಲ್ಲ ಎಂದು ಮಾರ್ಮಿಕವಾಗಿ ತಮ್ಮ ಸಮುದಾಯದ ಸ್ವಾಭಿಮಾನದ ಗುಣವನ್ನು ಹೇಳಿದರು.
ಬೆಳಗಾವಿ ಬಂಟರ ಯಾನೆ ನಾಡವರ ಸಂಘದಿಂದ ಏರ್ಪಡಿಸಿದ 40 ನೇ ವಾರ್ಷಿಕೋತ್ಸವ “ಮಾಣಿಕ್ಯ ಸಂಭ್ರಮ 2025” ಹಾಗೂ ನವೀಕರಣ ಭವನದ ಉದ್ಘಾಟನೆಯ ಈ ಅದ್ಧೂರಿ ಕಾರ್ಯಕ್ರಮದಲ್ಲಿ ಎಂಆರ್ ಜಿ ಗ್ರೂಪ್ ನ ಸಿಎಂಡಿ ಡಾ| ಕೆ ಪ್ರಕಾಶ್ ಶೆಟ್ಟಿ, ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಸಂಸದೆ ಪ್ರಿಯಾಂಕಾ ಜಾರಕಿಹೊಳಿ, ಶಾಸಕರಾದ ಆಸಿಫ್ ಸೇಠ್, ಉದ್ಯಮಿಗಳಾದ ಜಯಶೀಲ ಶೆಟ್ಟಿ, ಮುಂಬಯಿ ಬಂಟರ ಸಂಘದ ಅಧ್ಯಕ್ಷರಾದ ಪ್ರವೀಣ್ ಭೋಜ ಶೆಟ್ಟಿ, ಸಂಗೀತ ನಿರ್ದೇಶಕರಾದ ಗುರುಕಿರಣ್, ಡಾ. ಮಹಾಬಲೇಶ್ ಶೆಟ್ಟಿ, ಗೌರವಾಧ್ಯಕ್ಷರಾದ ವಿಠಲ ಹೆಗ್ಡೆ ಅಧ್ಯಕ್ಷರಾದ ವಿಜಯ ಶೆಟ್ಟಿ, ಶ್ರೀಧರ್ ಶೆಟ್ಟಿ, ಹಸ್ತ ಶೆಟ್ಟಿ, ಪ್ರಸನ್ನ ಶೆಟ್ಟಿ, ಚೇತನ್ ಶೆಟ್ಟಿ, ಕರುಣಾಕರ್ ಶೆಟ್ಟಿ, ಪ್ರಣಯ್ ಶೆಟ್ಟಿ, ಬಂಟ ಸಮುದಾಯದ ಅನೇಕರು ಉಪಸಿತರಿದ್ದರು.