ತುಳುನಾಡಿನ ಅಸ್ಮಿತೆಯ ಚಳುವಳಿಯಾದ ತುಳುವ ಮಹಾಸಭೆ ತನ್ನ ಶತಮಾನೋತ್ಸವದ ಸಂಧರ್ಭದಲ್ಲಿ ಹೊಸ ಚಟುವಟಿಕೆಗಳಿಗೆ ಪುನಶ್ಚೇತನ ನೀಡುತ್ತಿದೆ. ಇಂತಹ ಸಂಧರ್ಭದಲ್ಲಿ ಭಾನುಮತಿ ಶೆಟ್ಟಿ ಕಕ್ವಗುತ್ತು ಅವರನ್ನು ತುಳುವ ಮಹಾಸಭೆ ಮೂಲ್ಕಿ ತಾಲೂಕು ಸಂಚಾಲಕಿಯಾಗಿ ನೇಮಕ ಮಾಡಲಾಗಿದೆ. ಭಾನುಮತಿ ಶೆಟ್ಟಿ ಅವರು ಜರ್ಮನಿಯ ಕೋಲೋನ್ ವಿಶ್ವವಿದ್ಯಾನಿಲಯದಲ್ಲಿ ಉನ್ನತ ಶಿಕ್ಷಣ ಪಡೆದು, ಪ್ರವಾಸೋದ್ಯಮದಲ್ಲಿ ಡಿಪ್ಲೋಮಾ ಪೂರೈಸಿದ ನಂತರ 39 ವರ್ಷಗಳ ಕಾಲ ಜರ್ಮನಿಯಲ್ಲಿ ವಾಸವಿದ್ದು, ತಮ್ಮದೇ ಆದ ಟ್ರಾವೆಲ್ ಏಜೆನ್ಸಿಯನ್ನು ಯಶಸ್ವಿಯಾಗಿ ನಿರ್ವಹಿಸಿದ್ದರು. ವಿದೇಶದಲ್ಲಿದ್ದರೂ ಅವರು ತುಳು ಭಾಷೆ ಮತ್ತು ಸಂಸ್ಕೃತಿಗೆ ಅತ್ಯಂತ ಪ್ರಾಮುಖ್ಯತೆ ನೀಡುತ್ತಾ, “ಅಟಿಲ್ ಮಲ್ಪುಲೆ ತುಳು ಕಲ್ಪುಲೆ” ಎಂಬ ಯೂಟ್ಯೂಬ್ ಚಾನೆಲ್ ಮುಖಾಂತರ ತುಳುನಾಡಿನ ಪರಂಪರೆಯನ್ನು ಜಾಗೃತಗೊಳಿಸುತ್ತಿದ್ದಾರೆ. ಕಡಲಾಯೆರೆಡ ತುಳುವೆರು ಸಂಘದ ಸದಸ್ಯೆಯಾಗಿರುವ ಅವರು, ನಿವೃತ್ತಿಯಾದ ನಂತರ ಈಗ ಮುಲ್ಕಿ ತಾಲೂಕಿನ ಏಳು ಹಳ್ಳಿಗಳನ್ನು ಒಳಗೊಂಡ ಮೂಲ್ಕಿ ತಾಲೂಕು ಸಂಜೀವಿನಿ ಒಕ್ಕೂಟ (ರಿ)ದ ಅಧ್ಯಕ್ಷೆ ಆಗಿ ಸಮಾಜಮುಖಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಜೊತೆಗೆ, ಲಯನ್ಸ್ ಕ್ಲಬ್ ಹಾಗೂ ಮೂಲ್ಕಿ ರೋಟರಿ ಕ್ಲಬ್ ನಲ್ಲೂ ಸಕ್ರಿಯವಾಗಿ ಭಾಗವಹಿಸುತ್ತಿದ್ದಾರೆ.

ತುಳುವ ಮಹಾಸಭೆ ತನ್ನ ಪುನಶ್ಚೇತನ ಗುರಿಯಲ್ಲಿ ತುಳುನಾಡಿನ ಕಲಾ, ಸಾಹಿತ್ಯ, ಜನಪದ ಪರಂಪರೆ, ತುಳುನಾಡ ಕಳರಿ ತರಬೇತಿ ಮತ್ತು ಮರ್ಮ ಚಿಕಿತ್ಸೆ, ನಶಿಸಿದ ದೈವ ಆರಾಧನೆಗಳ ಪುನರುಜ್ಜೀವನ, ಬಸ್ರೂರು ತುಳುವೇಶ್ವರ ದೇವಸ್ಥಾನ ಪುನರ್ ಉದ್ಧಾರಣ ಹಾಗೂ ಜಾತಿ, ಮತ, ಭಾಷಾ ಸೌಹಾರ್ದತೆ ಕಾಪಾಡುವ ಮಹತ್ವದ ಯೋಜನೆಗಳಿಗೆ ನಾಂದಿ ಹಾಡಿದೆ. ಈ ಯೋಜನೆಗಳನ್ನು ಕಾರ್ಯಗತಗೊಳಿಸಲು ಅಲ್ಲಲ್ಲಿ ತುಳುವ ಮಹಾಸಭಾ ಸಮಿತಿಗಳನ್ನು ರೂಪಿಕರಿಸಲಾಗುವುದು. ಈ ಪ್ರಯತ್ನಗಳಿಗೆ ಭಾನುಮತಿ ಶೆಟ್ಟಿ ಅವರು ಶಕ್ತಿಶಾಲಿ ನಾಯಕತ್ವವನ್ನು ನೀಡಲಿದ್ದಾರೆ. ತುಳು ಸಮೂಹದಲ್ಲಿ ಮಹಿಳಾ ನಾಯಕತ್ವಕ್ಕೆ ಹೊಸ ಬಾಗಿಲು ತೆರೆಯುತ್ತಿರುವ ಅವರ ನೇಮಕ ಸಮಸ್ತ ತುಳುವರ ಹೆಮ್ಮೆ ಹಾಗೂ ಪ್ರೇರಣೆಗೆ ಕಾರಣವಾಗಿದೆ.