
ಮೂಡಬಿದಿರೆ: ಆಳ್ವಾಸ್ ಪದವಿಪೂರ್ವ ಕಾಲೇಜಿನ ಜೂನಿಯರ್ ರೆಡ್ ಕ್ರಾಸ್ ಘಟಕದ 2025-26ನೇ ಶೈಕ್ಷಣಿಕ ವರ್ಷದ ಚಟುವಟಿಕೆಗಳಿಗೆ ಶುಕ್ರವಾರ ಚಾಲನೆ ದೊರೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಪತ್ರಕರ್ತ ಧನಂಜಯ ಮೂಡಬಿದಿರೆ ಮಾತನಾಡಿ, “ಕೆಂಪು ಬಣ್ಣವನ್ನು ಸಾಮಾನ್ಯವಾಗಿ ಭೀಕರ, ಭಯಂಕರ, ರುದ್ರ ಎಂಬ ಅರ್ಥದಲ್ಲಿ ಕಾಣಲಾಗುತ್ತದಾದರೂ, ಅದು ಮುಗ್ದತೆಯ ಸಂಕೇತವೂ ಹೌದು. ಆ ಮುಗ್ದತೆಯೊಳಗೆ ಸೇವಾ ಮನೋಭಾವವನ್ನು ರಕ್ತಗತ ಮಾಡಿಕೊಂಡಿರುವುದೇ ಜೂನಿಯರ್ ರೆಡ್ ಕ್ರಾಸ್ ಸಂಸ್ಥೆ,” ಎಂದರು. ರೆಡ್ ಕ್ರಾಸ್ ಸಂಸ್ಥೆಯ ಧ್ಯೇಯವಾದ ಮಾನವೀಯತೆ, ನಿಷ್ಪಕ್ಷಪಾತತೆ, ತಟಸ್ಥತೆ, ಸ್ವಯಂಸೇವೆ, ಸ್ವಾತಂತ್ರ್ಯ, ಏಕತೆ, ಶಾಂತಿ-ಸ್ನೇಹ ಹಾಗೂ ಪ್ರಾಮಾಣಿಕತೆಗಳನ್ನು ಪ್ರತಿಯೊಬ್ಬ ಸದಸ್ಯರೂ ಪಾಲಿಸಬೇಕು ಎಂದು ಅವರು ಕರೆ ನೀಡಿದರು. ಪ್ರೀತಿ-ಸ್ನೇಹವನ್ನು ಉತ್ತೇಜಿಸುವ ಕಾರ್ಯಕ್ರಮಗಳ ಮೂಲಕ ಈ ಸಂಸ್ಥೆ ಜನಾನುರಾಗಿಯಾಗಿದೆ ಎಂದು ಹೇಳಿದರು.

ಸಮಾಜದಲ್ಲಿ ಶಾಂತಿ ಮತ್ತು ಸಹಕಾರವನ್ನು ಕಾಪಾಡುವಲ್ಲಿ ಜೂನಿಯರ್ ರೆಡ್ ಕ್ರಾಸ್ ಘಟಕಗಳು ಮಹತ್ವದ ಪಾತ್ರ ವಹಿಸುತ್ತಿವೆ. ಈ ಸಂಸ್ಥೆಯಲ್ಲಿ ತೊಡಗಿರುವ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಉತ್ತಮ ನಾಗರಿಕರು, ಜವಾಬ್ದಾರಿ ಹೊಂದಿದ ನಾಯಕರು ಮತ್ತು ನಿಜವಾದ ಮಾನವೀಯತೆಯ ಸೇವಕರು ಆಗಿ ಬೆಳೆಯಬಲ್ಲರು ಎಂದರು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಮಾತನಾಡಿದ ವಕೀಲ ಸಂತೋ ಪೀಟರ್ ಡಿಸೋಜಾ, “ಸ್ವಿಟ್ಜಲ್ಯಾರ್ಂಡ್ನ ಹೆನ್ರಿ ಡ್ಯೂನಾಂಟ್ ಅವರು ಯುದ್ಧಭೂಮಿಯಲ್ಲಿ ಗಾಯಗೊಂಡ ಸೈನಿಕರ ದುಸ್ಥಿತಿ ನೋಡಿ ಆಘಾತಗೊಂಡು ಅವರಿಗೆ ಸಹಾಯ ಮಾಡಲು ಮುಂದಾದರು. ಮುಂದೆ ಅವರ ಚಿಂತನೆಯ ಫಲವಾಗಿ ರೆಡ್ ಕ್ರಾಸ್ ಸಂಸ್ಥೆ ಸ್ಥಾಪನೆಯಾಯಿತು. ಇಂದು 190ಕ್ಕೂ ಹೆಚ್ಚು ದೇಶಗಳಲ್ಲಿ ರೆಡ್ ಕ್ರಾಸ್ ಸಂಘಟನೆಗಳು ಕಾರ್ಯನಿರ್ವಹಿಸುತ್ತಿವೆ. ಭಾರತದಲ್ಲಿಯೂ ‘ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ’ ಸ್ಥಾಪನೆಯಾಗಿ, ಅದರ ಅಂಗಸಂಸ್ಥೆಯಾಗಿ ಜೂನಿಯರ್ ರೆಡ್ ಕ್ರಾಸ್ ಕಾರ್ಯನಿರ್ವಹಿಸುತ್ತಿದೆ ಎಂದರು. ಕಾರ್ಯಕ್ರಮದಲ್ಲಿ ಕಾಲೇಜಿನ ಉಪಪ್ರಾಂಶುಪಾಲೆ ಜಾನ್ಸಿ ಪಿಎನ್, ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಮೂಡುಬಿದಿರೆ ಘಟಕದ ಕಾರ್ಯದರ್ಶಿ ರಾಜೇಂದ್ರ ಪೈ ಇದ್ದರು. ಉಪನ್ಯಾಸಕರಾದ ಪೂರ್ಣಿಮಾ ಸ್ವಾಗತಿಸಿ, ಅಕ್ಷತಾ ಪಾಠಕ್ ವಂದಿಸಿ, ವಿರಾನ್ ನಿರೂಪಿಸಿದರು.





















































































































