ಮಕ್ಕಳ ಬೌದ್ಧಿಕ ಮತ್ತು ಶೈಕ್ಷಣಿಕ ವಿದ್ಯಾಭ್ಯಾಸದ ಜೊತೆಗೆ ಸಾಧನೆ ಮಾಡುವಂತಹ ಕಲೆ ಅಡಗಿರಬೇಕು. ಮಕ್ಕಳು ಮೊಬೈಲ್ ಗಳಿಗೆ ವ್ಯಾಮೋಹವಾಗದೆ, ಬೇರೆ ಚಟುವಟಿಕೆಗಳತ್ತ ಗಮನಹರಿಸಿದರೆ ಸಮಾಜ ಸುಸ್ಥಿತ ವಾತಾವರಣ ನಿರ್ಮಾಣವಾಗುತ್ತದೆ. ಮೊಳಹಳ್ಳಿ ದಿನೇಶ್ ಹೆಗ್ಡೆ ಜಯರತ್ನ ಟ್ರಸ್ಟ್ (ರಿ.) ಮಾಡುತ್ತಿರುವ ಸಮಾಜಮುಖಿ ಕಾರ್ಯ ಇಂದಿನ ಯುವ ಜನತೆಗೆ ಹಾಗೂ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿದೆ. ಮಕ್ಕಳ ಬೌದ್ಧಿಕ ವಿಕಾಸಕ್ಕೆ ಇಂತಹ ಕಾರ್ಯಕ್ರಮಗಳು ಪೂರಕ ಎಂದು ಮಾಜಿ ತೋಟಗಾರಿಕಾ ನಿರ್ದೇಶಕರಾದ ಎಚ್. ಜಯಶೀಲ ಶೆಟ್ಟಿ ಮೊಳಹಳ್ಳಿ ಹೇಳಿದರು. ಇವರು ಇತ್ತೀಚಿಗೆ ಮೊಳಹಳ್ಳಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ವಿಭಾಗದಲ್ಲಿ 90% ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಣೆ ಹಾಗೂ ಸಾಧಕರ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಇದೇ ಸಂದರ್ಭದಲ್ಲಿ ಎಕ್ಸಲೆಂಟ್ ಪಿಯು ಕಾಲೇಜು ಮತ್ತು ಶಾಲೆಯ ಅಧ್ಯಕ್ಷರಾದ ಎಂ ಮಹೇಶ್ ಹೆಗ್ಡೆ ಮಾತನಾಡಿ, ಮಕ್ಕಳ ಜ್ಞಾನ ಕೌಶಲ್ಯ ಮತ್ತು ಕ್ರಿಯಾಶೀಲ ಚಟುವಟಿಕೆಗಳನ್ನು ತೆರೆದಿಡಲು ಇದು ಮುಕ್ತ ವೇದಿಕೆ. ನಮ್ಮ ತಂದೆ, ತಾಯಿ ಹೆಸರಿನಲ್ಲಿ ನಡೆಯುತ್ತಿರುವ “ಜಯರತ್ನ” ಟ್ರಸ್ಟ್ ಸಮಾಜಮುಖಿ ಕಾರ್ಯ ಆಗಿದೆ. ಮೊಳಹಳ್ಳಿ ಗ್ರಾಮದ ಇಬ್ಬರು ಕಣ್ಮಣಿಗಳಿಗೆ ಸನ್ಮಾನ ಮಾಡುತ್ತಿರುವುದು ಸಂತಸ ತಂದಿದೆ ಎಂದರು. ಕಾರ್ಯಕ್ರಮದಲ್ಲಿ ಟ್ರಸ್ಟ್ ನ ಪ್ರವರ್ತಕರು, ಉದ್ಯಮಿ ಮೊಳಹಳ್ಳಿ ದಿನೇಶ್ ಹೆಗ್ಡೆಯವರು ಅಧ್ಯಕ್ಷೀಯ ಭಾಷಣವನ್ನು ನೆರವೇರಿಸಿದರು.
ಕಾರ್ಯಕ್ರಮದಲ್ಲಿ ದಿವಂಗತ ಬಿ. ಜಯರಾಮ ಹೆಗ್ಡೆಯವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಗೌರವಾರ್ಪಣೆ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಪತ್ರಕರ್ತ, ಅಂಕಣಕಾರ ಕೆ. ಸಂತೋಷ್ ಶೆಟ್ಟಿ ಮೊಳಹಳ್ಳಿ ಹಾಗೂ ಮೊಳಹಳ್ಳಿ ಹಾಲು ಉತ್ಪಾದಕರ ಸಂಘದ ನಿವೃತ್ತ ಕಾರ್ಯನಿರ್ವಹಣಾ ಅಧಿಕಾರಿ ವಿವೇಕಾನಂದ ಶೆಟ್ಟಿ ಮೊಳಹಳ್ಳಿ ಇವರಿಗೆ ಗೌರವದ ಸನ್ಮಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ಮೊಳಹಳ್ಳಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಚೈತ್ರ ಅಡಪ, ಗ್ರಾಮ ಪಂಚಾಯತ್ ನ ಮಾಜಿ ಉಪಾಧ್ಯಕ್ಷೆ ವಾಣಿ ಆರ್. ಶೆಟ್ಟಿ, ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷೆ ಪೂರ್ಣಿಮಾ ಶೆಟ್ಟಿ, ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯ ಜಯಂತಿ ಶೆಟ್ಟಿ, ಶಾಲಾ ಮುಖ್ಯೋಪಾಧ್ಯಾಯ ಗೋವಿಂದ ಎಸ್ ಹಾಗೂ ಶಾಲಾ ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.
ಈ ಕಾರ್ಯಕ್ರಮವನ್ನು ಶಾಲಾ ಸಹ ಶಿಕ್ಷಕ ಗಣೇಶ್ ಶೆಟ್ಟಿ ನಿರೂಪಿಸಿ, ಟ್ರಸ್ಟ್ ನ ಯೋಜನಾ ನಿರ್ದೇಶಕ ಗಿರೀಶ್ ಎಂ ಎನ್ ಪ್ರಾಸ್ತಾವಿಕ ಮಾತನಾಡಿ, ಶಿಕ್ಷಕಿ ಶೋಭಾ ಸಿ. ಶೆಟ್ಟಿ ಸಾಧಕರ ಪಟ್ಟಿ ವಾಚಿಸಿದರು. ಶಿಕ್ಷಕ ಆದರ್ಶ ಶೆಟ್ಟಿ ಸನ್ಮಾನಿತರ ಪಟ್ಟಿ ವಾಚಿಸಿದರು. ಶಾಲಾ ಸಹ ಶಿಕ್ಷಕಿಯರಾದ ಸುಜಾತ, ಚೇತನ, ಶಾಲಾ ಹಳೆ ವಿದ್ಯಾರ್ಥಿ ಲೋಕೇಶ್ ಮರಾತೂರು, ವೆಂಕಟ ಕುಲಾಲ್ ಸಹಕರಿಸಿದರು. ಶಿಕ್ಷಕಿ ಪ್ರೀತಿ ಶೆಟ್ಟಿ ವಂದಿಸಿದರು.