ಭಾರತೀಯ ರೆಡ್ ಕ್ರಾಸ್ ಸೊಸೈಟಿಯ ದಕ್ಷಿಣ ಕನ್ನಡ ಜಿಲ್ಲಾ ಘಟಕದ ವತಿಯಿಂದ ಸರ್ಕಾರಿ ಲೇಡಿಗೋಷನ್ ಆಸ್ಪತ್ರೆಗೆ ಮೂರು ವಿದ್ಯುತ್ ಚಾಲಿತ ಹೊಲಿಗೆ ಯಂತ್ರಗಳನ್ನು ಕೊಡುಗೆಯಾಗಿ ನೀಡಲಾಯಿತು. ಕೊಡುಗೆ ಹಸ್ತಾಂತರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಲೇಡಿಗೋಶನ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ದುರ್ಗಾಪ್ರಸಾದ್ ಎಂ.ಆರ್ ಮಾತನಾಡಿ, ಜಿಲ್ಲಾ ರೆಡ್ ಕ್ರಾಸ್ ಸೊಸೈಟಿಯ ಈ ಕೊಡುಗೆ ಉನ್ನತ ದೃಷ್ಟಿಕೋನದ ಸೇವೆಯಾಗಿದೆ. ಆಸ್ಪತ್ರೆಯ ರೋಗಿಗಳು, ವೈದ್ಯರು ಹಾಗೂ ಶುಶ್ರುಷಕಿಯರಿಗೆ ಸಂಬಂಧಿಸಿದ ಯಾವುದೇ ಸರ್ಜಿಕಲ್ ಬಟ್ಟೆಗಳಲ್ಲಿ ನ್ಯೂನತೆಯಾದ ಸಂದರ್ಭ ಅದನ್ನು ಹೊಲಿದು ಸುಸ್ಥಿತಿಯಲ್ಲಿ ಉಪಯೋಗ ಮಾಡಲು ಈ ಹೊಲಿಗೆ ಯಂತ್ರಗಳು ಬಹಳಷ್ಟು ಉಪಕಾರಿಯಾಗುತ್ತದೆ ಎಂದರು. ಹೊಲಿಗೆ ಯಂತ್ರಗಳನ್ನು ಹಸ್ತಾಂತರಿಸಿದ ಜಿಲ್ಲಾ ರೆಡ್ ಕ್ರಾಸ್ ಸೊಸೈಟಿಯ ಚೇರ್ಮನ್ ಶಾಂತರಾಮ ಶೆಟ್ಟಿ ಅವರು, ಸರ್ಕಾರಿ ಲೇಡಿ ಗೋಶನ್ ಆಸ್ಪತ್ರೆ ರಾಜ್ಯದಲ್ಲೇ ಮಾದರಿ ಸರ್ಕಾರಿ ಆಸ್ಪತ್ರೆಯಾಗಿ ಕಾರ್ಯ ನಿರ್ವಹಿಸುತ್ತಿದ್ದು, ಇಲ್ಲಿನ ಅಭಿವೃದ್ಧಿಗೆ ಪೂರಕವಾಗಿ ಸ್ಪಂದಿಸಲು ರೆಡ್ ಕ್ರಾಸ್ ಸಂಸ್ಥೆ ಬದ್ಧವಾಗಿದೆ ಎಂದರು.




ಜಿಲ್ಲಾ ರೆಡ್ ಕ್ರಾಸ್ ಸೊಸೈಟಿ ಖಜಾಂಜಿ ಗುರುದತ್ ಎಂ ನಾಯಕ್, ಕಾರ್ಯದರ್ಶಿ ಡಾ. ಸತೀಶ್ ಕುಮಾರ್ ಶೆಟ್ಟಿ, ಸಂಯೋಜಕ ಗಿರೀಶ್, ಲೇಡಿ ಗೋಷನ್ ಆಸ್ಪತ್ರೆಯ ನಿವಾಸಿ ವೈದ್ಯಾಧಿಕಾರಿ ಡಾ. ಜಗದೀಶ್, ಹಿರಿಯ ತಜ್ಞ ಡಾ. ದಯಾನಂದ್, ನರ್ಸಿಂಗ್ ವಿಭಾಗದ ಮುಖ್ಯಸ್ಥರಾದ ಗೀತಾ ಮತ್ತು ಮಲ್ಲಿಕಾ ಇದ್ದರು. ಜ್ಯೋತಿ ಪ್ರಭಾ ಸ್ವಾಗತಿಸಿದರು. ಶುಶ್ರುಷಾಧಿಕಾರಿಗಳಾದ ಅಂಬಿಕಾ ಮತ್ತು ಜಯಲಕ್ಷ್ಮಿ ನಿರೂಪಿಸಿದರು.












































































































