ಪುತ್ತೂರು ತಾಲೂಕು ಮಹಿಳಾ ಬಂಟರ ವಿಭಾಗದ ಮಾಸಿಕ ಸಭೆಯು ಅಧ್ಯಕ್ಷೆ ಗೀತಾ ಮೋಹನ್ ರೈಯವರ ಅಧ್ಯಕ್ಷತೆಯಲ್ಲಿ ನ. ೧೮ ರಂದು ಪುತ್ತೂರು ಎಂ.ಸುಂದರರಾಮ್ ಶೆಟ್ಟಿ ಸ್ಮಾರಕ ಬಂಟರ ಭವನದಲ್ಲಿ ಜರಗಿತು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ತಾಲೂಕು ಬಂಟರ ಸಂಘದ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿಯವರು ಮಾತನಾಡಿ, ನ. ೨೨ ರಂದು ಬಂಟರ ಸಂಘದ ಆಶ್ರಯದಲ್ಲಿ ನಡೆಯಲಿರುವ ಬಂಟೆರೆ ಸೇರಿಗೆ ೨೦೨೫, ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅತೀ ಹೆಚ್ಚಿನ ಸಂಖ್ಯೆ ಬಂಟ ಸಮಾಜ ಬಾಂಧವರು ಭಾಗವಹಿಸಿ, ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದರು. ಮಾರ್ಚ್ ೨೦೨೬ ರಲ್ಲಿ ಪುತ್ತೂರು ಬಂಟರ ಸಂಘಕ್ಕೆ ಸಾಮೆತ್ತಡ್ಕದಲ್ಲಿ ಸರಕಾರದಿಂದ ಮಂಜೂರಾಗಿರುವ ಜಾಗದಲ್ಲಿ ಜಿಲ್ಲಾ ಮಟ್ಟದ ಮಹಿಳಾ ಬಂಟರ ಸಮಾವೇಶವನ್ನು ಹಮ್ಮಿಕೊಳ್ಳುವ ದೊಡ್ಡ ಯೋಜನೆ ಇದೆ. ಈ ಬಗ್ಗೆ ಮಹಿಳಾ ಬಂಟರು ಮುಂದೆ ನಿಂತು ಕಾರ್ಯಕ್ರಮವನ್ನು ಆಯೋಜನೆ ಮಾಡಬೇಕು. ಬಂಟರ ಸಂಘದ ಪೂರ್ಣ ಸಹಕಾರ ಇದೆ ಎಂದು ಹೇಳಿದ ಅವರು ಸರಕಾರದಿಂದ ಮಂಜೂರಾಗಿರುವ ಐದುವರೆ ಎಕ್ರೆ ಜಾಗದಲ್ಲಿ ಪ್ರಥಮವಾಗಿ ಅಡ್ಯಾರ್ ಗಾರ್ಡ್ನ್ ಮಾದರಿಯಲ್ಲಿ ಸುಂದರವಾದ ಮದುವೆ ಹಾಲ್ ನಿರ್ಮಾಣ ಆಗಲಿದ್ದು, ಅ ಬಳಿಕ ಹಂತ ಹಂತವಾಗಿ ಬೇರೆ ಯೋಜನೆ ಇದೆ. ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸುವ ಯೋಜನೆ ಇದೆ. ಸುಂದರವಾದ ಜಾಗದಲ್ಲಿ ಹಲವು ಯೋಜನೆಗಳು ಕಾರ್ಯರೂಪಕ್ಕೆ ಬರಲಿದೆ ಎಂದು ಕಾವು ಹೇಮನಾಥ ಶೆಟ್ಟಿ ಹೇಳಿದರು.

ನ್ಯಾಯವಾದಿ ಹರಿಣಾಕ್ಷಿ ಜೆ. ಶೆಟ್ಟಿ ನೆಲ್ಲಿಕಟ್ಟೆರವರು ಮಾನವೀಯ ಮೌಲ್ಯಗಳ ಬಗ್ಗೆ ಉಪನ್ಯಾಸವನ್ನು ನೀಡಿದರು. ಜಿ.ಪಂ, ಮಾಜಿ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿಯವರು ಮಾತನಾಡಿ, ಮಹಿಳಾ ಬಂಟರು ಪ್ರತಿಯೊಬ್ಬರೂ ಬಂಟೆರೆ ಸೇರಿಗೆಯಲ್ಲಿ ಭಾಗವಹಿಸುವಂತೆ ವಿನಂತಿಸಿದರು. ತಾಲೂಕು ಬಂಟರ ಸಂಘದ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಶೆಟ್ಟಿ ಮನವಳಿಕೆ, ಕೋಶಾಧಿಕಾರಿ ಸಂತೋಷ್ ಶೆಟ್ಟಿ ಸಾಜ ಹಾಗೂ ಮಹಿಳಾ ಬಂಟರ ವಿಭಾಗದ ಉಪಾಧ್ಯಕ್ಷರುಗಳು ಮತ್ತು ಪದಾಧಿಕಾರಿಗಳು, ಸದಸ್ಯರುಗಳು ಉಪಸ್ಥಿತರಿದ್ದರು. ತಾಲೂಕು ಬಂಟರ ವಿಭಾಗದ ಅಧ್ಯಕ್ಷೆ ಗೀತಾ ಮೋಹನ್ ರೈ ಸ್ವಾಗತಿಸಿ, ಕೋಶಾಧಿಕಾರಿ ಅರುಣಾ ಡಿ ರೈ ವಂದಿಸಿದರು. ಪ್ರಧಾನ ಕಾರ್ಯದರ್ಶಿ ಕುಸುಮಾ ಪಿ.ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ವರದಿ : ಉಮಾಪ್ರಸಾದ್ ರೈ








































































































