ಕಳೆದ ಹಲವಾರು ವರ್ಷಗಳಿಂದ ಗ್ರಾಮೀಣ ಪ್ರದೇಶದ ಯುವ ಜನತೆಗೆ ಅವರ ಬದುಕನ್ನು ಕಟ್ಟಿಕೊಳ್ಳಲು ನಿರಂತರವಾಗಿ ಮಾರ್ಗದರ್ಶನ ಮಾಡುತ್ತಾ, ಹಲವಾರು ಸರಕಾರಿ ನೇಮಕಾತಿಗಳಲ್ಲಿ ನೇಮಕಗೋಳ್ಳುವಂತೆ ಮಾಡಿದ ಕೀರ್ತಿಯನ್ನು ಹೊತ್ತು ಮುನ್ನಡೆಯುತ್ತಿರುವ ಪ್ರತಿಷ್ಠಿತ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಸಂಸ್ಥೆಯಾದ ವಿದ್ಯಾಮಾತಾ ಅಕಾಡೆಮಿಯಲ್ಲಿ ನವೋದಯ, ಸೈನಿಕ, ಮೊರಾರ್ಜಿ ಸೇರಿದಂತೆ ವಿವಿಧ ವಸತಿ ಶಾಲೆಗಳ ಪ್ರವೇಶ ಪರೀಕ್ಷೆಗಳಿಗೆ ಪೂರ್ವ ಸಿದ್ದತಾ ತರಬೇತಿಗಳು ಪ್ರಾರಂಭಗೊಂಡವು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಹ್ವಾನಿತಾರಾಗಿದ್ದ ಜೆ.ಸಿ.ಐ ಪುತ್ತೂರು ಇದರ ಸದಸ್ಯರು, ಶಿಶು ಮಂದಿರ ಪುತ್ತೂರು ಇದರ ಶ್ರೀ ಕೃಷ್ಣ ಜನ್ಮಾಷ್ಠಮಿ 2025ರ ಉಪಾಧ್ಯಕ್ಷರು, ಲಶ್ ಪ್ಯಾಶನ್ ಇದರ ಮಾಲಿಕರಾದ ಮಾಲಿನಿ ಕಶ್ಯಪ್ ರವರು ಮಾತನಾಡಿ, ಸ್ಥಳೀಯ ಮಟ್ಟದಲ್ಲಿ ಚಿಕ್ಕ ವಯಸ್ಸಿನ ಮಕ್ಕಳಿಗೆ ಪೂರಕವಾದ ತರಬೇತಿ ನೀಡಿ ಉತ್ತಮ ರೀತಿಯಲ್ಲಿ ಮಾರ್ಗದರ್ಶನ ನೀಡುತ್ತಿರುವ ಕಾರ್ಯ ಎಲ್ಲರಿಗೂ ಪ್ರೇರಣೆಯಾಗಿದ್ದು, ನಾವೆಲ್ಲರೂ ವಿದ್ಯಾಮಾತಾ ಅಕಾಡೆಮಿಯ ಕಾರ್ಯಕ್ಕೆ ಕೈ ಜೋಡಿಸಬೇಕು ಎಂದು ಸಂಸ್ಥೆಯ ಕಾರ್ಯ ಚಟುವಟಿಕೆಗಳನ್ನು ಗುರುತಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ವಿದ್ಯಾಮಾತಾ ಅಕಾಡೆಮಿಯ ಆಡಳಿತ ನಿರ್ದೇಶಕರಾದ ಭಾಗ್ಯೇಶ್ ರೈರವರು, ಮಕ್ಕಳು ದಾರಿ ತಪ್ಪುವ ಈ ಕಾಲಘಟ್ಟದಲ್ಲಿ ಬಾಲ್ಯದಲ್ಲೇ ಭವಿಷ್ಯದ ಕನಸನ್ನು ಬಿತ್ತಿ ಉನ್ನತವಾದ ಸ್ಥಾನಮಾನವನ್ನು ಹೊಂದಲು ನವೋದಯ, ಸೈನಿಕದಂತಹ ಪ್ರವೇಶ ಪರೀಕ್ಷೆಗಳಿಗೆ ತರಬೇತಿ ನೀಡುತ್ತಾ ಮಕ್ಕಳಲ್ಲಿ ಅರಿವು ಮೂಡಿಸಿ ಯಶಸ್ವಿಯಾಗಿ ಮುನ್ನಡೆಯುತ್ತಿರುವುದು ನಮಗೆ ಅತೀವ ಸಂತಸದ ಸಂಗತಿ. ಇದು ಇನ್ನಷ್ಟು ಯೋಜನೆಗಳಿಗೆ ಆದರ್ಶವಾಗಿದ್ದು, ವಿದ್ಯಾರ್ಥಿಗಳಿಗೂ ಇನ್ನಷ್ಟು ಇದರ ಅರಿವನ್ನು ಹೆಚ್ಚಿಸಲಿದೆ ಎಂದು ವಿದ್ಯಾಮಾತಾ ಅಕಾಡೆಮಿಯಲ್ಲಿರುವ ವಿವಿಧ ರೀತಿಯ ತರಬೇತಿಗಳ ಕುರಿತು ಮಾಹಿತಿ ಹಂಚಿಕೊಂಡರು.ಪ್ರಮಾಣ ಪತ್ರ ವಿತರಣೆ : ಸಂಸ್ಥೆಯಲ್ಲಿ ಕಂಪ್ಯೂಟರ್, ಪ್ರಾಕ್ಟಿಕಲ್ ಅಕೌಂಟಿಂಗ್ ಸೇರಿದಂತೆ ವಿವಿಧ ವಿಷಯಗಳ ಕುರಿತು ತರಬೇತಿ ಪಡೆದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರವನ್ನು ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಮಾಲಿನಿ ಕಶ್ಯಪ್ ರವರು ವಿತರಿಸಿ ಅಭಿನಂದಿಸಿದರು. ಕಾರ್ಯಕ್ರಮವನ್ನು ಸಂಸ್ಥೆಯ ತರಬೇತುದಾರ ಚಂದ್ರಕಾಂತ್ ರವರು ನಿರೂಪಿಸಿದರು. ತರಬೇತುದರರಾದ ಸ್ವಾತಿ, ಸ್ನೇಹ, ಸಿಬ್ಬಂದಿ ಮಿಥುನ್ ರೈರವರು ಸಹಕರಿಸಿದರು. ಕಾರ್ಯಕ್ರಮದಲ್ಲಿ ನವೋದಯ, ಸೈನಿಕ ಶಾಲೆ ಸೇರಿದಂತೆ ವಿವಿಧ ವಸತಿ ಶಾಲೆಗಳ ಪ್ರವೇಶ ಪರೀಕ್ಷೆಗಳ ಪೂರ್ವ ಸಿದ್ದತಾ ತರಬೇತಿಯ ವಿದ್ಯಾರ್ಥಿಗಳು, ವಿವಿಧ ರೀತಿಯ ತರಬೇತಿ ಪಡೆದು ಪ್ರಮಾಣ ಪತ್ರ ಪಡೆದ ವಿದ್ಯಾರ್ಥಿಗಳು, ಸಶಸ್ತ್ರ ಪಡೆಗಳ ನೇಮಕಾತಿ ಪೂರ್ವ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿಗಳು, ಪೋಷಕರು,ಸಂಸ್ಥೆಯ ತರಬೇತುದಾರರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.