ನಿಸ್ವಾರ್ಥವಾಗಿ ದುಡಿದು ಯಕ್ಷಗಾನವನ್ನು ಈ ಮರಳುಭೂಮಿಯಲ್ಲಿ ಬೆಳೆಸಿ, ಉಳಿಸಲು ಶ್ರಮಪಡುವ ನಮ್ಮ ಗುರುಗಳಾದ ಶ್ರೀ ಶೇಖರ್ ಡಿ ಶೆಟ್ಟಿಗಾರ್, ಶ್ರೀ ಶರತ್ ಕುಡ್ಲ ಹಾಗೂ ಎಲ್ಲಾ ಕಾರ್ಯಕರ್ತರಿಗೂ, ಪೋಷಕರಿಗೂ, ಕಲಾವಿದರಿಗೂ, ಬಾಲ ಕಲಾವಿದರಿಗೂ ಶಿರಭಾಗಿ ಮಾಡುವ ನಮಸ್ಕಾರಗಳು. ಇದೀಗ ಯಕ್ಷಗಾನ ಅಭ್ಯಾಸ ಕೇಂದ್ರದ ಸಂಸ್ಥೆಗೆ ದಶಮಾನೋತ್ಸವದ ಸಡಗರ. ಹತ್ತರ ಹರುಷದ ಹೊತ್ತಿನಲ್ಲಿ ಹಿಂದೆ ತಿರುಗಿ ನೋಡಿದಾಗ, ಸಾಗಿ ಬಂದ ದಾರಿ, ಸಾಧನೆ ಸಂಭ್ರಮ ಮೂಡಿಸುತ್ತಿದೆ. ಯಕ್ಷಗಾನ ಅಭ್ಯಾಸ ಕೇಂದ್ರದ ಹೆಸರು ಯು. ಎ. ಇ. ಯ ಸರ್ವರ ಮನೆ-ಮನ ತಲುಪಿದೆ. ವಿದ್ವಜ್ಜನರ ಕೊಂಡಾಟಕ್ಕೆ ಕಾರಣವಾಗಿದೆ. ಮುಂಚೂಣಿಯಲ್ಲಿ ನಿಂತ ನಮಗೆ ಸಾರ್ಥಕ್ಯ ಭಾವ. ಮತ್ತಷ್ಟು ಸಾಧನೆಗೆಳಸುವ ಉತ್ಸಾಹ, ಹೆಚ್ಚಿದ ಹೊಣೆಯ ಅರಿವು, ಧನ್ಯತೆ ಸಮ್ಮಿಳಿತ ಭಾವಗಳಿಂದ ನಿರುತ್ತರರು. ಗುರುಗಳಾದ ಶೇಖರ್ ಡಿ ಶೆಟ್ಟಿಗಾರ್ ಚಿಂತನೆಗಳನ್ನು ಚಿಂತೆಯಾಗದಂತೆ ಕಾರ್ಯರೂಪಕ್ಕೆ ತರುವಲ್ಲಿ ಪೂರ್ಣ ಬೆಂಬಲ ಸಂಚಾಲಕ ಕೊಟ್ಟಿಂಜ ದಿನೇಶ ಶೆಟ್ಟಿಯವರದ್ದು. ದೈವಭಕ್ತರು, ನಿಸ್ವಾರ್ಥಿ, ನಿರಂತರ ಕವಲೊಡೆಯದ ನಿಷ್ಠೆಯಿಂದ ಸಂಸ್ಥೆಯ ನೇತೃತ್ವ ವಹಿಸಿ, ಮುನ್ನಡೆಸಿ, ಹೆಸರಿನಂತೆ ದಿನಮಣಿಯಾದವರು. ಹಿರಿಯರು- ಕಿರಯರೆನ್ನುವ ಭೇದವಿಲ್ಲದ ಕಲಾವಿದರ, ಸದಸ್ಯರ, ವಿದ್ಯಾರ್ಥಿಗಳ, ಹೆತ್ತವರ ಬೆಂಬಲ, ಕಾರ್ಯಕರ್ತರ ಕರಗದ ಉತ್ಸಾಹಕ್ಕೆ ಸದಾ ಚಿರಋಣಿ. ದಿನನಿತ್ಯದ ತರಗತಿಗಳಿಗೆ ಸಹಕರಿಸುವ ಕಾರ್ಯಕರ್ತರ ಪಡೆ ಒಂದೆಡೆಯಾದರೆ, ವಾರ್ಷಿಕ ಕಾರ್ಯಕ್ರಮಗಳಿಗಾಗಿ ದುಡಿಯುವ ಪಡೆ ಮಗದೊಂದು. ಜೊತೆಜೊತೆಗೆ ಮಾಧ್ಯಮದವರ ಮಹತ್ತಿಕೆ, ಕಲಾಪೋಷಕರ ಕಾರುಣ್ಯ ಎಲ್ಲದರ ಸಮ್ಮಿಲನ ಈ ವೈಭವದ ದಶಮಾನೋತ್ಸವದ ಸಡಗರ. ವೈಭವದ ಕಾರ್ಯಕ್ರಮ ಸರ್ವ ಸಿದ್ಧತೆಗಳು ಕಲಾಪೋಷಕರ ಸಹಕಾರದಿಂದ ಪ್ರಕ್ಯಾತ ಭಾಗವತರಾದ ಶ್ರೀ ಪಟ್ಲ ಸತೀಶ್ ಶೆಟ್ಟಿ, ದೇವಿ ಪ್ರಸಾದ್ ಆಳ್ವಾ, ಮಹಿಳಾ ಭಾಗವತರು ಶ್ರೀಮತಿ ಕಾವ್ಯಶ್ರೀ ಕುಲ್ಕುಂದ, ಕಟೀಲು ಮೇಳದ ದೇವಿ ಪಾತ್ರಧಾರಿ ಶ್ರೀ ಅರುಣ್ ಕೋಟ್ಯಾನ್, ಪ್ರಸಿದ್ದ ಚೆಂಡೆ ವಾದಕರು ಶ್ರೀ ಸರಪಾಡಿ ಚಂದ್ರಶೇಖರ್ ಹಾಗುಉ ದುಬಾಯಿಯ ಹಿಮ್ಮೇಳ ಮುಮ್ಮೇಳ ಕಲಾವಿದರಿಂಡ “ಶಿವಾನಿ ಸಿಂಹವಾಹಿನಿ” ಕಥಾಪ್ರಸಂಗ ಹಾಗೂ ಯಕ್ಷ ಶ್ರೀ ರಕ್ಷ ಗೌರವ ಪ್ರಶಸ್ತಿ ಶ್ರೀ ಕಾಸರಗೋಡು ಸುಬ್ರಾಯ ಹೊಳ್ಳರಿಗೆ ನೀಡಿ ಗೌರವಿಸಲಾಗುವುದು.

ದಶಮಾನೋತ್ಸವ ಸಂಭ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಯು.ಎ.ಇ.ಯ ಹತ್ತು ಸಾಧಕರಿಗೆ ಸನ್ಮಾನಿಸಿ ಗೌರವಿಸಲಾಗುವುದು. ಶ್ರೀಯುತರುಗಳಾದ ಸರ್ವೋತ್ತಮ ಶೆಟ್ಟಿ, ಪ್ರವೀಣ್ ಕುಮಾರ್ ಶೆಟ್ಟಿ, ಪುತ್ತಿಗೆ ವಾಸುದೇವ ಭಟ್, ಬಾಲಕೃಷ್ಣ ಸಾಲಿಯಾನ್, ಬಿ. ಕೆ. ಗಣೇಶ್ ರೈ, ಡೋನಿ ಕೊರೆಯಾ, ಶ್ರೀಮತಿ ರೂಪಾ ಕಿರಣ್ ಮತ್ತು ಸಂಸ್ಥೆಗಳಾದ ಕನ್ನಡ ಪಾಠ ಶಾಲೆ ದುಬಾಯಿ, ಶ್ರೀ ರಾಜರಾಜೇಶ್ವರಿ ಭಜನಾ ತಂಡ ಯು.ಎ.ಇ ಹಾಗೂ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಯು.ಎ.ಇ. ಹಾಗೂ ಇನ್ನಿತರ ವೈವಿಧ್ಯ ಕಲಾ ಕಾರ್ಯಕ್ರಮಗಳು ದಿನ ಪೂರ್ತಿ 2025 ಜೂನ್ 29 ರಂದು ಕರಾಮದ ಶೇಖ್ ರಷೀದ್ ಅಡಿಟೋರಿಯಂನಲ್ಲಿ ವೈಭವದ ಆಯೋಜನೆಯ ಮೂಲಕ ಐತಿಹಾಸಿಕ ಸಾಕ್ಷಿಯಾಗಿ ನಿಲ್ಲುವ ಸದವಸರದಲ್ಲಿ ಯಕ್ಷಗಾನ ಅಭ್ಯಾಸ ಕೇಂದ್ರ ಯು ಎ ಇ. ಸಂಸ್ಥೆ ನಡೆದು ಬಂದ ದಾರಿ ಅರಬ್ ಸಂಯುಕ್ತ ಸಂಸ್ಥಾನದಲ್ಲಿ ನೆಲೆಸಿರುವ ಅನಿವಾಸಿ ಭಾರತೀಯ ಯಕ್ಷಗಾನ ಪ್ರೇಮಿಗಳ ಮುಂದೆ ಐತಿಹಾಸಿಕ ಸಾಕ್ಷಿಯಾಗಲಿದೆ.
ವಿಶೇಷ ಲೇಖನ : ಬಿ ಕೆ ಗಣೇಶ್ ರೈ ದುಬೈ