
ಯು.ಎ.ಇ.ಯಲ್ಲಿ ಕಳೆದ 23 ವರ್ಷಗಳಿಂದ ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ಹಾಗೂ ಸಮಾಜಮುಖಿ ಸೇವೆಗಳನ್ನು ನಡೆಸುತ್ತಾ ಅನಿವಾಸಿ ಕನ್ನಡಿಗರ ಮೆಚ್ಚುಗೆಗೆ ಪಾತ್ರವಾಗಿರುವ ಕರ್ನಾಟಕ ಸಂಘ ಶಾರ್ಜಾ ಇದರ 2026 -28ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿಯ ಪದಗ್ರಹಣ ಸಮಾರಂಭವು ದುಬೈ ಗ್ರ್ಯಾಂಡ್ ಹೋಟೆಲ್ ಬೈ ಫಾರ್ಚೂನ್ ನಲ್ಲಿ ಅತ್ಯಂತ ವಿಜೃಂಭಣೆಯಿಂದ ನೆರವೇರಿತು. ಕಾರ್ಯಕ್ರಮವು ಪ್ರಾರ್ಥನೆಯೊಂದಿಗೆ ಆರಂಭಗೊಂಡು, ಸಂಘದ ಪಥ ಹಾಗೂ ಸಾಧನೆಗಳ ಕುರಿತು ಸತೀಶ್ ಪೂಜಾರಿ ಅವರು ಮಾಹಿತಿ ನೀಡಿದರು. ಬಳಿಕ ಸಂಘದ ಬೈಲಾ ಕುರಿತು ಗಣೇಶ್ ರೈ ಅವರು ಸದಸ್ಯರಿಗೆ ವಿವರಿಸಿದರು. ನಂತರ ನೂತನ ಕಾರ್ಯಕಾರಿ ಸಮಿತಿಯ ಸದಸ್ಯರ ಪರಿಚಯ ನಡೆಯಿತು.



ಕರ್ನಾಟಕ ಸಂಘ ಶಾರ್ಜಾದ ಪೂರ್ವಾಧ್ಯಕ್ಷ ಗಣೇಶ್ ರೈಯವರ ನೇತೃತ್ವದಲ್ಲಿ ನೂತನ ಅಧ್ಯಕ್ಷರು ಹಾಗೂ ಎಲ್ಲಾ ಪದಾಧಿಕಾರಿಗಳಿಗೆ ಅಧಿಕೃತವಾಗಿ ಪದಗ್ರಹಣ ಪ್ರಮಾಣ ವಚನ ಬೋಧಿಸಲಾಯಿತು. ಸಂಘದ ನೂತನ ಅಧ್ಯಕ್ಷರಾಗಿ ರಂಗಸಾರಥಿ ವಿಶ್ವನಾಥ್ ಶೆಟ್ಟಿ ಅವರು ಪದಗ್ರಹಣ ಸಮಾರಂಭದಲ್ಲಿ ಪ್ರಮಾಣ ವಚನ ಸ್ವೀಕರಿಸಿ, ಸಂಘದ ಅಭಿವೃದ್ಧಿ, ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಉತ್ತೇಜನ ಹಾಗೂ ಅನಿವಾಸಿ ಕನ್ನಡಿಗರನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಹೊಸ ಯೋಜನೆಗಳನ್ನು ರೂಪಿಸಿ ಕಾರ್ಯ ನಿರ್ವಹಿಸುವ ಸಂಕಲ್ಪ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಉಪಾಧ್ಯಕ್ಷರಾಗಿ ಅಜ್ಮಲ್ ಸಯ್ಯದ್, ಪ್ರಧಾನ ಕಾರ್ಯದರ್ಶಿಯಾಗಿ ವಿಘ್ನೇಶ್ ಕುಂದಾಪುರ, ಕೋಶಾಧಿಕಾರಿಯಾಗಿ ಸುಂಗಧರಾಜ್ ಬೇಕಲ್, ಜೊತೆ ಕಾರ್ಯದರ್ಶಿಯಾಗಿ ದಿನೇಶ್ ಸಾಲಿಯಾನ್, ಜೊತೆ ಕೋಶಾಧಿಕಾರಿಯಾಗಿ ರಘುರಾಮ್ ಶೆಟ್ಟಿಗಾರ್, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ರೀತೇಶ್ ಅಂಚನ್, ಜೊತೆ ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಪ್ರೇಮ್ ಪೂಜಾರಿ, ಕ್ರೀಡಾ ಕಾರ್ಯದರ್ಶಿಯಾಗಿ ಅಮರ್ ಉಮೇಶ್, ಜೊತೆ ಕ್ರೀಡಾ ಕಾರ್ಯದರ್ಶಿಗಳಾಗಿ ಜೀವನ್ ಹಾಗೂ ಮೊಹಮ್ಮದ್ ಅಬ್ರಾರ್ ಉಲ್ಲಾ ಶರೀಫ್ ಅವರು ಪದಗ್ರಹಣ ಸಮಾರಂಭದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
ಇದೇ ಸಂದರ್ಭದಲ್ಲಿ ಸಂಘಕ್ಕೆ ನೂತನ ಸದಸ್ಯರಾಗಿ ಸುದರ್ಶನ್ ಹೆಗ್ಡೆ, ಸುರೇಶ್ ಎನ್ ಶೆಟ್ಟಿ, ಕಿರಣ್, ಸುಜಿತ್ ಫೆರ್ನಾಂಡಿಸ್, ಸುಮನ್ ಜಾಯ್ ವಾಸ್, ವಿಠಲ್ ರಿಷನ್ ನಾಯಕ್ ಹಾಗೂ ವಿಜಯ್ ಕುಮಾರ್ ಶೆಟ್ಟಿ ಗಾಣದಮೂಲೆ ಅವರನ್ನು ಆತ್ಮೀಯವಾಗಿ ಬರಮಾಡಿ ಕೊಳ್ಳಲಾಯಿತು. ವೇದಿಕೆಯಲ್ಲಿ ಸಂಘದ ಸಲಹಾ ಮಂಡಳಿಯ ಗೌರವಾನ್ವಿತ ನಿರ್ದೇಶಕರಾದ ಹರೀಶ್ ಶೇರಿಗಾರ್, ಜೋಸೆಫ್ ಮಥಾಯಿಸ್ ಹಾಗೂ ರಾಮಚಂದ್ರ ಹೆಗ್ಡೆ ಉಪಸ್ಥಿತರಿದ್ದು, ನೂತನ ಸಮಿತಿಗೆ ಶುಭ ಹಾರೈಸಿದರು. ತಮ್ಮ ಭಾಷಣಗಳಲ್ಲಿ ಸಂಘದ ಬೆಳವಣಿಗೆಗೆ ಎಲ್ಲರೂ ಒಗ್ಗಟ್ಟಿನಿಂದ ಕಾರ್ಯ ನಿರ್ವಹಿಸುವಂತೆ ಕರೆ ನೀಡಿದರು. ಅದೇ ರೀತಿ ಸಂಘದ ಸಲಹೆಗಾರರಾದ ಎಂ.ಇ ಮೂಳೂರು, ಗಣೇಶ್ ರೈ, ಸತೀಶ್ ಪೂಜಾರಿ ಹಾಗೂ ನೋಯೆಲ್ ಡಿ ಅಲ್ಮೇಡಾ ಅವರು ಸಂಘದ ಮುಂದಿನ ಕಾರ್ಯ ಚಟುವಟಿಕೆಗಳಿಗೆ ಮಾರ್ಗದರ್ಶನ ನೀಡಿ ನೂತನ ಸಮಿತಿಗೆ ಶುಭ ಹಾರೈಸಿದರು.
ನೂತನ ಅಧ್ಯಕ್ಷ ವಿಶ್ವನಾಥ್ ಶೆಟ್ಟಿ ಅವರು ಮಾತನಾಡಿ, ಕರ್ನಾಟಕ ಸಂಘ ಶಾರ್ಜಾವನ್ನು ಇನ್ನಷ್ಟು ಬಲಿಷ್ಠವಾಗಿ ಬೆಳೆಸುವುದರೊಂದಿಗೆ ಕನ್ನಡ ಭಾಷೆ, ಕಲೆ, ಸಂಸ್ಕೃತಿ ಹಾಗೂ ಸಮಾಜಮುಖಿ ಕಾರ್ಯಕ್ರಮಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಆಯೋಜಿಸುವ ಮೂಲಕ ಎಲ್ಲಾ ಕನ್ನಡಿಗರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸುವ ಗುರಿಯನ್ನು ಹೊಂದಿದ್ದೇವೆ ಎಂದು ತಿಳಿಸಿದರು. ಕೊನೆಯಲ್ಲಿ ಪ್ರಧಾನ ಕಾರ್ಯದರ್ಶಿ ವಿಘ್ನೇಶ್ ಕುಂದಾಪುರ ಅವರು ವಂದನಾರ್ಪಣೆ ಸಲ್ಲಿಸಿ, ಕಾರ್ಯಕ್ರಮ ಯಶಸ್ವಿಯಾಗಲು ಸಹಕರಿಸಿದ ಸಲಹಾ ಮಂಡಳಿ, ಸಲಹೆಗಾರರು, ಸದಸ್ಯರು, ಅತಿಥಿಗಳು ಹಾಗೂ ಎಲ್ಲಾ ಕನ್ನಡಾಭಿಮಾನಿಗಳಿಗೆ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಿದರು. ರೀತೇಶ್ ಅಂಚನ್ ಅವರು ಕಾರ್ಯಕ್ರಮದ ನಿರೂಪಕರಾಗಿ ಅತ್ಯಂತ ಅಚ್ಚುಕಟ್ಟಾಗಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಬಳಿಕ ಎಲ್ಲರಿಗೂ ಭೋಜನದ ವ್ಯವಸ್ಥೆ ಮಾಡಲಾಗಿತ್ತು.






























































































































