ಜೂನ್ 21 ರಂದು ಸಯನ್ ನ ಸ್ವಾಮಿ ನಿತ್ಯಾನಂದ ಸಭಾಗೃಹದಲ್ಲಿ ಮುಂಬಯಿಯ ಪ್ರತಿಷ್ಠಿತ ಸಮುದಾಯ ಸಂಘಟನೆಯಾದ ಬಾಂಬೆ ಬಂಟ್ಸ್ ಅಸೋಸಿಯೇಷನ್ ಮಹಿಳಾ ವಿಭಾಗದ ವತಿಯಿಂದ ಯೋಗ ದಿನಾಚರಣೆಯು ನಡೆಯಿತು. ಅಧ್ಯಕ್ಷತೆ ವಹಿಸಿದ್ದ ಅಡ್ವೋಕೇಟ್ ಡಿ.ಕೆ ಶೆಟ್ಟಿಯವರು ಮಾತನಾಡುತ್ತಾ, ಯೋಗ ಎಂದರೆ ಕೇವಲ ದೈಹಿಕ ವ್ಯಾಯಾಮವಲ್ಲ. ಅದು ದೇಹದ ಆರೋಗ್ಯ, ಮನಸ್ಸಿನ ಶಾಂತತೆ ಮತ್ತು ಆತ್ಮದ ವಿಕಾಸವನ್ನು ಒಳಗೊಂಡಿರುವ ಸಮಗ್ರ ಜೀವನ ಶೈಲಿ ಮತ್ತು ಅರಿವಿನ ಸಾಧನೆ ಯಾಗಿದೆ. ಇಂದಿನ ಮನುಷ್ಯನ ಅನೇಕ ರೋಗಗಳಿಗೆ ಪ್ರಮುಖ ಕಾರಣಗಳೆಂದರೆ ಅಶುದ್ಧ ಪರಿಸರ, ಅಸಂತೃಪ್ತ ಮನೋಭಾವ, ಜಾಗೃತಿ ಕೊರತೆ ಮತ್ತು ಮೂಲಭೂತ ನಿಯಮಗಳನ್ನು ಪಾಲಿಸದ ಜೀವನಶೈಲಿ. ಆದರೆ ಯೋಗದ ಮೂಲಕ ಈ ಎಲ್ಲಾ ಅಸಮತೋಲನಗಳನ್ನು ಸರಿಪಡಿಸಿ ಸಮಪೂರ್ಣ ಆರೋಗ್ಯವನ್ನು ಮನುಷ್ಯ ಸಾಧಿಸಬಹುದಾಗಿದೆ ಎಂದು ತಮ್ಮ ವಿಚಾರವನ್ನು ತೆರೆದಿಟ್ಟರು. ಅಸೋಸಿಯೇಷನ್ ನ ಪರಂಪರೆಯಂತೆ ಮಹಿಳಾ ವಿಭಾಗವು ಆಯಾಯ ಅಧ್ಯಕ್ಷರ ಅಡಿಯಲ್ಲಿ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಆಯೋಜಿಸುತ್ತಿದೆ. ಅವರ ಅನುಕರಣೀಯ ಪರಂಪರೆಯನ್ನು ಪ್ರಸ್ತುತ ಅಧ್ಯಕ್ಷೆ ಶ್ರೀಮತಿ ಶಾಂತಾ ಶೆಟ್ಟಿ ಅವರು ಅರ್ಥಪೂರ್ಣವಾಗಿ ಮುಂದುವರಿಸುತ್ತಿದ್ದಾರೆ. ನಗರದಲ್ಲಿ ಈ ದಿನ ವಿವಿಧ ಸಂಸ್ಥೆಗಳು ಆಯೋಜಿಸಿರುವ ಹಲವಾರು ಕಾರ್ಯಕ್ರಮಗಳ ಹೊರತಾಗಿಯೂ ಉತ್ತಮ ಹಾಜರಾತಿಯ ಬಗ್ಗೆ ಅವರು ಸಂತೋಷ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮುಖ್ಯ ಯೋಗ ತರಬೇತುದಾರೆ ಮತ್ತು ಖ್ಯಾತ ಅಂತಾರಾಷ್ಟ್ರೀಯ ಅಥ್ಲೀಟ್ (ಕ್ರೀಡಾಪಟು) ಶ್ರೀಮತಿ ಜಯಂತಿ ದೇವಾಡಿಗರವರು ಮಾತನಾಡುತ್ತಾ, ಸಾವಿರಾರು ವರ್ಷಗಳ ಹಿಂದೆ ಯೋಗ ವಿಜ್ಞಾನವು ತನ್ನ ಉಗಮವನ್ನು ಪಡೆದಿದೆ. ಶಿವನನ್ನು ಆದಿಯೋಗಿ ಎಂದೂ, ಯೋಗದ ಪ್ರಥಮ ಗುರು ಎಂದು ಪರಿಗಣಿಸಲಾಗುತ್ತದೆ. ಆದಿಯೋಗಿ ತನ್ನ ಮಹತ್ತರ ಜ್ಞಾನವನ್ನು ಸಪ್ತ ಋಷಿಗಳಿಗೆ ಧಾರೆ ಎರೆದು, ಮಾನವ ಸಮಾಜದ ಒಳಿತುಗಾಗಿ ಯೋಗದ ಬಿತ್ತನೆ ಮಾಡಿದರು. ನಂತರ ಮಹಾನ್ ಋಷಿಯಾದ ಪತಂಜಲಿ ಅವರು ತಮ್ಮ ಯೋಗ ಸೂತ್ರಗಳ ಮೂಲಕ ಆ ಕಾಲದ ಯೋಗಾಭ್ಯಾಸ, ಅದರ ತಾತ್ವಿಕ ಅಂಶಗಳು ಮತ್ತು ಉಪಯೋಗ ಗಳನ್ನು ವ್ಯವಸ್ಥಿತವಾಗಿ ವರ್ಗೀಕರಿಸಿದರು ಹಾಗೂ ಪತಂಜಲಿ ಮಹರ್ಷಿಯವರು ವಿವರಿಸಿದ ಅಷ್ಟಾಂಗ ಯೋಗವು ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣಾ, ಧ್ಯಾನ ಮತ್ತು ಸಮಾಧಿ ಎಂಬ ಎಂಟು ಹಂತಗಳನ್ನು ಒಳಗೊಂಡಿದೆ. ಅವರು ಈ ಯೋಗ ಮಾರ್ಗವನ್ನು ಪ್ರಪಂಚದ ಮುಂದೆ ಮೂಡಿಸಿ, ಮಾನವ ಜೀವನದ ಪರಿಪೂರ್ಣತೆಯ ದಾರಿಗೆ ಬೆಳಕು ಚೆಲ್ಲಿದರು ಎಂದರು. ಇನ್ನೊರ್ವ ಅತಿಥಿಗಳಾಗಿ ಆಗಮಿಸಿದ್ದ ಶ್ರೀಮತಿ ಸರಿತಾ ಚಂದ್ರಶೇಖರ ಶೆಟ್ಟಿಯವರು ಯೋಗದ ಬಗ್ಗೆ ತಮ್ಮ ಅಭಿಪ್ರಾಯವನ್ನು ಮಂಡಿಸುತ್ತಾ, ಮಹಿಳಾ ವಿಭಾಗದ ಕಾರ್ಯಕ್ರಮಕ್ಕೆ ಹರ್ಷ ವ್ಯಕ್ತಪಡಿಸಿದರು.
ಕುಮಾರಿ ಪ್ರಿಥ್ವಿಕಾ ರವೀಶ್ ಶೆಟ್ಟಿ ಯವರ ಪ್ರಾರ್ಥನೆ ಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಅಸೋಸಿಯೇಷನ್ ನ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಾಂತಾ ನಾರಾಯಣ ಶೆಟ್ಟಿಯವರು ಯೋಗ ದಿನಾಚರಣೆಯ ಸಾಂದರ್ಭಿಕತೆ ಹಾಗೂ ಅಗತ್ಯವನ್ನು ತಿಳಿಸುತ್ತಾ, ಯೋಗದ ಹಿಂದಿನ ಇತಿಹಾಸ ಮತ್ತು ಅಂತರರಾಷ್ಟ್ರೀಯ ಯೋಗ ದಿನವನ್ನು ಆಯೋಜಿಸಲು ನಮ್ಮ ಪ್ರಧಾನ ಮಂತ್ರಿಗಳು ತೆಗೆದುಕೊಂಡ ಉಪಕ್ರಮಗಳನ್ನು ತಿಳಿಸುತ್ತಾ ಎಲ್ಲರನ್ನೂ ಆತ್ಮೀಯವಾಗಿ ಸ್ವಾಗತಿಸಿದರು. ವೇದಿಕೆಯಲ್ಲಿ ಅಸೋಸಿಯೇಷನ್ ನ ಅಧ್ಯಕ್ಷರಾದ ಅಡ್ವಕೇಟ್ ಡಿ.ಕೆ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶ್ರೀಮತಿ ಶಾಂತಾ ಎನ್ ಶೆಟ್ಟಿ, ಉಪ ಕಾರ್ಯಧ್ಯಕ್ಷೆ ಶ್ರೀಮತಿ ಸಹಾನಿ ಶೆಟ್ಟಿ, ಕಾರ್ಯದರ್ಶಿ ಶ್ರೀಮತಿ ಉಷಾ ಆರ್ ಶೆಟ್ಟಿ, ಜೊತೆ ಖಜಾಂಚಿ ಉಮಾ ಶೆಟ್ಟಿ, ಜೊತೆ ಕಾರ್ಯದರ್ಶಿ ಶ್ರೀಮತಿ ಮಾಯ ಆಳ್ವ, ಯೋಗ ಪಟು ಶ್ರೀಮತಿ ಜಯಂತಿ ದೇವಾಡಿಗ ಹಾಗೂ ಅತಿಥಿಗಳಾದ ಶ್ರೀಮತಿ ಸರಿತಾ ಚಂದ್ರಶೇಖರ್ ಶೆಟ್ಟಿ ಅವರು ಉಪಸ್ಥಿತರಿದ್ದರು ಮತ್ತು ವಿಶೇಷವಾಗಿ ಸಂಸ್ಥೆಗೆ ತಮ್ಮ ಅಮೂಲ್ಯ ಯೋಗದಾನ ನೀಡಿ ಸಂಸ್ಥೆ ಇಂದು ಸದೃಡವಾಗಿ ನಿಲ್ಲುವಲ್ಲಿ ಸಹಕರಿಸಿದ ಮಾಜಿ ಅಧ್ಯಕ್ಷರುಗಳು ಹಾಗೂ ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆಯರ ಉಪಸ್ಥಿತಿಯು ಪೂರ್ತಿ ಕಾರ್ಯಕ್ರಮಕ್ಕೆ ಮೆರಗು ನೀಡಿತು.
ಯೋಗ ಶಿಕ್ಷಕಿ ಜಯಂತಿ ದೇವಾಡಿಗ ಅವರ ಪರಿಚಯವನ್ನು ಶ್ರೀಮತಿ ಉಷಾ ಶೆಟ್ಟಿಯವರು ಮಾಡಿದರೆ, ಅತಿಥಿಗಳಾಗಿ ಆಗಮಿಸಿದ್ದ ಶ್ರೀಮತಿ ಸರಿತಾ ಚಂದ್ರಶೇಖರ್ ಶೆಟ್ಟಿ ಅವರ ಪರಿಚಯವನ್ನು ಶ್ರೀಮತಿ ಸಹಾನಿ ಶೆಟ್ಟಿ ಅವರು ಮಾಡಿದರು. ಕಾರ್ಯಕ್ರಮವನ್ನು ಮಹಿಳಾ ವಿಭಾಗದ ಕಾರ್ಯದರ್ಶಿ ಉಷಾ ಆರ್ ಶೆಟ್ಟಿಯವರು ನಿರೂಪಿಸಿ, ಜೊತೆ ಖಜಾಂಚಿ ಉಮಾಶೆಟ್ಟಿ ಧನ್ಯವಾದಗೈದರು. ವೇದಿಕೆಯ ಕಾರ್ಯಕ್ರಮದ ನಂತರ ಶ್ರೀಮತಿ ಜಯಂತಿ ದೇವಾಡಿಗ ಅವರ ಮಾರ್ಗದರ್ಶನದಲ್ಲಿ ಯೋಗ ಕಾರ್ಯಕ್ರಮ ನಡೆಯಿತು. ಎಲ್ಲಾ ಸದಸ್ಯರು ವಯಸ್ಸಿನ ಮಿತಿಯಿಲ್ಲದೆ ಯೋಗ ಕಾರ್ಯಕ್ರಮದಲ್ಲಿ ಭಾಗವಹಿಸಿದರು.