ಬಂಟ ಸಮಾಜದಲ್ಲಿ ಸಮಸ್ಯೆಯಲ್ಲಿರುವವರು ಬಂಟರ ಸಂಘದಿಂದ ಸಹಾಯ ಕೇಳುವುದರಲ್ಲಿ ತಪ್ಪಿಲ್ಲ. ಬಂಟರಿಗೆ ಸಿಗುವ ಸವಲತ್ತುಗಳನ್ನು ಪಡೆಯಬೇಕು. ಎಲ್ಲಿಯವರೆಗೆ ಪಡೆದುಕೊಳ್ಳುವವರು ಇದ್ದಾರೆಯೋ ಅಲ್ಲಿಯವರೆಗೆ ಕೊಡುವವರಿಗೆ ಅಸ್ತಿತ್ವ. ಬಂಟರ ಸಂಘದಲ್ಲಿ ಯಾವುದೇ ಸಹಾಯ ಪಡೆಯಲು ಅಂಜಿಕೆ ಬೇಡ ಎಂದು ಬಂಟರ ಸಂಘ ಮುಂಬಯಿಯ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ ತಿಳಿಸಿದರು. ಮೀರಾರೋಡ್ ಪೂರ್ವದ ಲತಾ ಮಂಗೇಶ್ಕರ್ ನಾಟ್ಯ ಸಭಾಗೃಹದಲ್ಲಿ ಜೂನ್ 15 ರಂದು ಜರಗಿದ ಬಂಟರ ಸಂಘ ಮುಂಬಯಿ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿ ನೇತೃತ್ವದಲ್ಲಿ ಮೀರಾ ಭಾಯಂದರ್ ಪ್ರಾದೇಶಿಕ ಸಮಿತಿಯ ಸಹಾಯಧನ ಮತ್ತು ಡಾ| ಆರ್.ಕೆ ಶೆಟ್ಟಿ ಪ್ರಾಯೋಜಿತ ಟಾಟಾ ಐಐಎಸ್ ಸಂಜೀವಿನಿ ಲೋಕಾರ್ಪಣೆ ಕಾರ್ಯಕ್ರಮವನ್ನು ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಡಾ| ಆರ್.ಕೆ ಶೆಟ್ಟಿಯಂತಹ ವ್ಯಕ್ತಿತ್ವದವರು ಸಹಸ್ರಾರು ಸಂಖ್ಯೆಯಲ್ಲಿ ನಮ್ಮ ಸಮಾಜದಲ್ಲಿ ಹುಟ್ಟಬೇಕು. ಸದಾ ಸಮಾಜಕ್ಕಾಗಿ ಸೇವೆ ಮಾಡುವ ಅವರು ಇಂದು ನಾಲ್ಕು ಜನ ಬಂಟ ಬಂಧುಗಳಿಗೆ ದೊಡ್ಡ ಪ್ರಮಾಣದ ನೆರವು ನೀಡಿದ್ದಾರೆ. ಬಂಟರ ಸಂಘದಿಂದ ಮೀರಾ ಭಾಯಂದರ್ ಪ್ರಾದೇಶಿಕ ಸಮಿತಿಗೆ ಅತೀ ಹೆಚ್ಚು ಸಹಾಯಧನ ಸಿಗುತ್ತಿದೆ. ಯಾವುದೇ ಕಾಯಿಲೆಗೆ ಔಷದ ಬೇಕಾದಲ್ಲಿ ನಮ್ಮ ಬಂಟರ ಸಂಘದ ಉಪಾಧ್ಯಕ್ಷ ಮಹೇಶ್ ಶೆಟ್ಟಿಯವರ ‘ಆರೋಗ್ಯಂ’ ಯೋಜನೆ ಪ್ರಯೋಜನ ಪಡೆಯಬಹುದು ಎಂದರು.

ದೀಪ ಪ್ರಜ್ವಲಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಮಾತನಾಡಿ, ಬಂಟರ ಸಂಘದ ಇತಿಹಾಸದಲ್ಲಿ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಕಾರ್ಯಕ್ರಮ ಉತ್ತಮ ಕಾರ್ಯಕ್ರಮ. ವರ್ಷದಿಂದ ವರ್ಷಕ್ಕೆ ನಮ್ಮ ಸಮಾಜದ ಮಕ್ಕಳಿಗೆ ಸಹಾಯ ನೀಡುತ್ತಾ ಬಂದಿದ್ದು, ಇದರ ಲಾಭ ಪಡೆದ ಅನೇಕ ಮಕ್ಕಳು ಉತ್ತಮ ಶಿಕ್ಷಣದೊಂದಿಗೆ ಉನ್ನತ ಸ್ಥಾನ ಪಡೆದಿದ್ದಾರೆ ಎಂದರು. ಮುಖ್ಯ ಅತಿಥಿ ಮೀರಾರೋಡ್ ಶಾಸಕ ನರೇಂದ್ರ ಮೆಹ್ತಾ ಮಾತನಾಡಿ, ಸೃಷ್ಟಿಕರ್ತ ಪ್ರತಿಯೊಬ್ಬ ವ್ಯಕ್ತಿಯ ಬದುಕಿನಲ್ಲಿ ಏನಾದರೂ ಬರೆದಿರುತ್ತಾನೆ. ಹಾಗೆಯೇ ಪ್ರತಿಯೊಬ್ಬ ವ್ಯಕ್ತಿಯ ಜೀವನದ ಅವಶ್ಯಕತೆಗೆ ಸಹಾಯ ಮಾಡಲು ಯಾರನ್ನಾದರೂ ಕಳುಹಿಸಿರುತ್ತಾನೆ. ತಮ್ಮ ಸಮಾಜದವರನ್ನು ತಮ್ಮ ಮನೆ ಸದಸ್ಯರೆಂದು ಭಾವಿಸಿ, ಅವರ ಅಗತ್ಯಗಳನ್ನು ಪೂರೈಸುವ ಬಂಟರ ಸಂಘಕ್ಕೆ ಅಭಿನಂದನೆಗಳು ಎಂದರು.
ಅತಿಥಿಯಾಗಿದ್ದ ಬಂಟರ ಸಂಘ ಮುಂಬಯಿಯ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷ ಡಾ| ದಿವಾಕರ್ ಶೆಟ್ಟಿ ಇಂದ್ರಾಳಿ ಮಾತನಾಡಿ, ಶಿಕ್ಷಣ ಮತ್ತು ಸಮಾಜ ಕಲ್ಯಾಣ ಕಾರ್ಯಕ್ರಮ ಬಹಳ ಅರ್ಥಪೂರ್ಣ ಕಾರ್ಯಕ್ರಮ. ಬಂಟರ ಸಂಘದಲ್ಲಿ ಸುಧಾಕರ ಹೆಗ್ಡೆಯವರ ಅಧ್ಯಕ್ಷಾವಧಿಯಲ್ಲಿ 40 ಲಕ್ಷ ರೂ. ಮೊತ್ತದಲ್ಲಿ ಆರಂಭವಾದ ಈ ಕಾರ್ಯಕ್ರಮ ಇಂದು 1.80 ಕೋಟಿ ರೂ. ಗಳವರೆಗೆ ವಿಸ್ತರಿಸಿದೆ. ನಮ್ಮ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿಯವರ ಉತ್ತಮ ಯೋಚನೆ ಜತೆಗೆ ಸಂಘದ ಪದಾಧಿಕಾರಿಗಳು ಕಾರ್ಯ ಪ್ರವೃತ್ತರಾಗಿದ್ದಾರೆ. ನಮ್ಮ ಸಮಾಜದ ಯಾವುದೇ ಮಕ್ಕಳು ವಿದ್ಯಾಭ್ಯಾಸದಿಂದ ವಂಚಿತರಾಗಿರಬಾರದು ಎಂಬುದೇ ನಮ್ಮ ಧ್ಯೇಯ. ದಾನಿಗಳ ನೆರವಿನಿಂದ ಇಂತಹ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿಸಲು ಸಾಧ್ಯವಾಗಿದೆ ಎಂದರು.
ಟಾಟಾ ಐ.ಎಸ್.ಎಸ್ ಸಂಜೀವಿನಿ ಯೋಜನೆಗೆ ಚಾಲನೆ ನೀಡಿದ ಸಾಯಿಬಾಬಾ ಆಸ್ಪತ್ರೆಯ ಸಿಎಂಡಿ ಡಾ. ಎನ್.ಎ ಹೆಗ್ಡೆ ಮಾತನಾಡಿ, ಅನ್ನ ನೀಡಿದರೆ ಒಂದು ಹೊತ್ತಿನ ಹೊಟ್ಟೆ ತುಂಬಬಹುದು. ಆದೇ ವಿದ್ಯೆ ನೀಡಿದರೆ ಬದುಕು ಕಟ್ಟಿಕೊಳ್ಳಬಹುದು. ಹಾಗಾಗಿ ವಿದ್ಯೆಯೇ ಬಹಳ ದೊಡ್ಡ ಆಸ್ತಿ. ಹೆತ್ತವರ ಒತ್ತಾಯಕ್ಕೆ ಓದುವುದಲ್ಲ, ನಾವು ಆಸಕ್ತಿ ವಹಿಸಿ ಕಲಿಯಬೇಕು. ಆಗ ಮಾತ್ರ ಶಿಕ್ಷಣದ ಮೌಲ್ಯ ತಿಳಿಯುವುದು. ಬಂಟರ ಸಂಘದಿಂದ ಪ್ರಯೋಜನ ಪಡೆದ ವಿದ್ಯಾರ್ಥಿಗಳು ಕಲಿತು ಉತ್ತಮ ಸ್ಥಾನ ಪಡೆದು ಬಂಟರ ಮುಂದಿನ ಜನಾಂಗದ ಮಕ್ಕಳಿಗೆ ಸಹಾಯ ಮಾಡುವಂತಾಗಲಿ ಎಂದರು. ಮೀರಾ ಭಾಯಂದರ್ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಗುತ್ತಿನಾರ್ ರವೀಂದ್ರ ಶೆಟ್ಟಿ ಸ್ವಾಗತಿಸಿ, ಮೀರಾ ಭಾಯಂದರ್ ಬಡತನದಲ್ಲಿರುವ ಬಂಟ ಸಮಾಜದ ಬಂಧುಗಳು ವೈದ್ಯಕೀಯ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುವ ಉದ್ದೇಶ ನಮ್ಮದು. ಪರಿಸರದ ಸಮಾಜದ ದಾನಿಗಳು ಹೆಚ್ಚಿನ ಸಹಕಾರ ನೀಡುತ್ತಿದ್ದಾರೆ ಎಂದರು.
ಬಂಟರ ಸಂಘ ಮುಂಬಯಿಯ ಗೌರವ ಪ್ರಧಾನ ಕಾರ್ಯದರ್ಶಿ ಡಾ| ಆರ್. ಕೆ ಶೆಟ್ಟಿ ಮಾತನಾಡಿ, ನಾನು ಹಿಂದಿನ ವರ್ಷ ಸಂಜೀವಿನಿ ಸಂಸ್ಥೆಯನ್ನು ಆರಂಭಿಸಿದ್ದು ಅರೋಗ್ಯ, ವಿದ್ಯಾಭ್ಯಾಸಕ್ಕೆ ಸಂಜೀವಿನಿ ಸಂಸ್ಥೆ ಮೂಲಕ ಸಹಾಯ ನೀಡಿದ್ದೇವೆ. ಅನುಭವದ ಕೊರತೆಯಿಂದ ಸಮುದಾಯದ ವಿದ್ಯಾವಂತರಿಗೆ ಕೆಲಸ ಸಿಗುತ್ತಿಲ್ಲ. ಪ್ರಧಾನಿ ನರೇಂದ್ರ ಮೋದಿಜಿಯವರು ‘ಸ್ಕಿಲ್ ಇಂಡಿಯಾ’ ಯೋಜನೆಯನ್ನು ರಾಷ್ಟ್ರ ಮಟ್ಟದಲ್ಲಿ ಚಾಲನೆ ನೀಡಿದ್ದು, ಮಹಾರಾಷ್ಟ್ರ ರಾಜ್ಯ ಸರ್ಕಾರ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸ್ಕಿಲ್ ಡೆವಲಪ್ಮೆಂಟ್ ಯೋಜನೆಯನ್ನು ಟಾಟಾ ಟ್ರಸ್ಟ್ ಜೊತೆ ಸೇರಿ ನಡೆಸುತ್ತಿದೆ. ನಮ್ಮ ಸಮಾಜದವರಿಗೆ ಪ್ರಯೋಜನವಾಗಲೆಂದು ನಾನು ಟಾಟಾ ಟ್ರಸ್ಟ್ ಸಂಸ್ಥೆಯಲ್ಲಿ ವಿನಂತಿಸಿದೆ. ಅವರು ನಮ್ಮ ಸಂಜೀವಿನಿ ಟ್ರಸ್ಟ್ ನ ಕಾರ್ಯಚಟುವಟಿಕೆ ಗಮನಿಸಿ ಒಪ್ಪಿಗೆ ನೀಡಿದ್ದು, ಟಾಟಾ ಐಐಎಸ್ ಸಂಜೀವಿನಿ ಯೋಜನೆ ನಮ್ಮ ಎಲ್ಲಾ ಬಂಟರಿಗೆ ಸಹಕಾರಿಯಾಗಲಿದೆ. ಈ ಶುಲ್ಕವನ್ನು ಸಂಜೀವಿನಿ ಟ್ರಸ್ಟ್ ನೀಡಲಿದೆ. ತರಬೇತಿ ಪಡೆದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ಜೊತೆಗೆ ಭಾರತದ ಪ್ರಸಿದ್ಧ ಕಂಪನಿಗಳಲ್ಲಿ ಉದ್ಯೋಗಾವಕಾಶ ಇದೆ. ಆಸಕ್ತರು ತಮ್ಮ ತಮ್ಮ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷರನ್ನು ಸಂಪರ್ಕಿಸಬಹುದು ಎಂದರು.
ಮುಖ್ಯ ಅತಿಥಿಗಳಾಗಿ ಶುಭಾರಂಭ್ ಇನ್ಫ್ರಾ ಸ್ಟ್ರಕ್ಚರ್ ಪ್ರೈವೇಟ್ ಲಿಮಿಟೆಡ್ ನ ಆಡಳಿತ ನಿರ್ದೇಶಕ ಅರವಿಂದ ಎ. ಶೆಟ್ಟಿ, ವಿಶಾಲ್ ಪ್ಲಾಸ್ಟಿಕ್ ಇಂಡಸ್ಟ್ರೀಸ್ ನ ಭಾಸ್ಕರ್ ಶೆಟ್ಟಿ, ದೀಪಕ್ ಆಸ್ಪತ್ರೆಯ ಎಂಡಿ ಭಾಸ್ಕರ್ ಶೆಟ್ಟಿ, ಮಾನವ ಸೇವಾ ಸಂಘದ ಅಧ್ಯಕ್ಷ ಡಾ| ಹರೀಶ್ ಶೆಟ್ಟಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಪ್ರಾದೇಶಿಕ ಸಮಿತಿಯ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷ ಸಂಪತ್ ಶೆಟ್ಟಿ ಪಂಜದಗುತ್ತು ಪ್ರಾಸ್ತಾವಿಸಿದರು. ಕಾರ್ಯದರ್ಶಿ ಸುಶ್ಮಿತಾ ಶೆಟ್ಟಿ, ಕೋಶಾಧಿಕಾರಿ ಅಮಿತಾ ಬಿ. ಶೆಟ್ಟಿ ವಿದ್ಯಾರ್ಥಿಗಳ ಹೆಸರನ್ನು ವಾಚಿಸಿದರು. ಮೀರಾರೋಡ್ ಶಾಸಕ ನರೇಂದ್ರ ಮೆಹ್ತಾ ಹಾಗೂ ಸಂಪತ್ ಶೆಟ್ಟಿ ಪಂಜದಗುತ್ತು ಅವರನ್ನು ಸನ್ಮಾನಿಸಲಾಯಿತು.
ಬಂಟರ ಸಂಘದ ಉಪಾಧ್ಯಕ್ಷ ಮಹೇಶ್ ಎಸ್. ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ಡಾ|ಆರ್.ಕೆ ಶೆಟ್ಟಿ, ಗೌರವ ಕೋಶಾಧಿಕಾರಿ ಸಿಎ ರಮೇಶ್ ಬಿ. ಶೆಟ್ಟಿ, ಜತೆ ಕಾರ್ಯದರ್ಶಿ ಗಿರೀಶ್ ಆರ್. ಶೆಟ್ಟಿ ತೆಳ್ಳಾರ್, ಜತೆ ಕೋಶಾಧಿಕಾರಿ ಶಶಿಧರ್ ಕೆ. ಶೆಟ್ಟಿ ಇನ್ನಂಜೆ ಹಾಗೂ ಸಮಾಜ ಕಲ್ಯಾಣ ಸಮಿತಿಯ ಉಪ ಕಾರ್ಯಾಧ್ಯಕ್ಷ ಸುಬ್ಬಯ್ಯ ಎ. ಶೆಟ್ಟಿ, ಕಾರ್ಯದರ್ಶಿ ಉತ್ತಮ್ ಶೆಟ್ಟಿ, ಕೋಶಾಧಿಕಾರಿ ಜಯಪ್ರಕಾಶ್ ಶೆಟ್ಟಿ, ಪ್ರಾದೇಶಿಕ ಸಮಿತಿಯ ಸಂಚಾಲಕ ಶಿವಪ್ರಸಾದ್ ಶೆಟ್ಟಿ ಮಾಣಿಗುತ್ತು, ಉಪ ಕಾರ್ಯಾಧ್ಯಕ್ಷ ಅರವಿಂದ ಎ. ಶೆಟ್ಟಿ, ಕಾರ್ಯದರ್ಶಿ ಬಾಬಾ ಪ್ರಸಾದ್ ಅರಸ ಕುತ್ಯಾರು, ಕೋಶಾಧಿಕಾರಿ ಶಂಕರ್ ಶೆಟ್ಟಿ ಬೋಳ, ಜತೆ ಕಾರ್ಯದರ್ಶಿ ರಮೇಶ್ ಶೆಟ್ಟಿ ಸಿದ್ದಕಟ್ಟೆ, ಜತೆ ಕೋಶಾಧಿಕಾರಿ ಜಗದೀಶ್ ಶೆಟ್ಟಿ, ಸಲಹಾ ಸಮಿತಿ ಕಾರ್ಯಾಧ್ಯಕ್ಷ ಕಿಶೋರ್ ಕುಮಾರ್ ಶೆಟ್ಟಿ ಕುತ್ಯಾರು, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ವಸಂತಿ ಎಸ್. ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ವರ್ಷಭ್ ಶೆಟ್ಟಿ, ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಉಪ ಕಾರ್ಯಾಧ್ಯಕ್ಷ ದಾಮೋದರ ಶೆಟ್ಟಿ, ಕಾರ್ಯದರ್ಶಿ ಸುಶ್ಮಿತಾ ಶೆಟ್ಟಿ, ಕೋಶಾಧಿಕಾರಿ ಅಮಿತ ಬಿ. ಶೆಟ್ಟಿ ಉಪಸ್ಥಿತರಿದ್ದರು.
ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ವಸಂತಿ ಎಸ್. ಶೆಟ್ಟಿ ಪ್ರಾರ್ಥನೆಗೈದರು. ಕಾರ್ಯಕ್ರಮವನ್ನು ರಂಗ ನಿರ್ದೇಶಕ ಬಾಬಾ ಪ್ರಸಾದ್ ಅರಸ ಕುತ್ಯಾರು ನಿರೂಪಿಸಿ ವಂದಿಸಿದರು. ಕುಶಿ ಶೆಟ್ಟಿ, ಆರೋಹಿ ಶೆಟ್ಟಿ, ಚೈತ್ರಾ ಶೆಟ್ಟಿ, ಅಂಕಿತಾ ಬಳಗದವರಿಂದ ನೃತ್ಯ ಕಾರ್ಯಕ್ರಮ ಹಾಗೂ ವೇಣುಗೋಪಾಲ್ ಶೆಟ್ಟಿ, ಜಗದೀಶ್ ಶೆಟ್ಟಿ ಪಂಜಿನಡ್ಕ ಸುಧೀಪ್ತ ಶೆಟ್ಟಿ ಅವರಿಂದ ರಸಮಂಜರಿ ಕಾರ್ಯಕ್ರಮ ನೆರವೇರಿತು. ಬಂಟರ ಸಂಘ ಮೀರಾ ಭಾಯಂದರ್ ಪ್ರಾದೇಶಿಕ ಸಮಿತಿಯ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು.