ಬಂಟರ ಸಂಘ ಮುಂಬಯಿ ತನ್ನ ಪ್ರಾದೇಶಿಕ ಸಮಿತಿಗಳ ಮೂಲಕ ಪ್ರತೀ ವರ್ಷ ಸಹಸ್ರಾರು ಯೂನಿಟ್ ರಕ್ತ ಸಂಗ್ರಹಿಸಿ ಬ್ಲಡ್ ಬ್ಯಾಂಕ್ ಗೆ ನೀಡಿ ಸಹಸ್ರಾರು ರೋಗಿಗಳನ್ನು ರೋಗದಿಂದ ಮುಕ್ತಿ ಪಡೆಯಲು ಸಹಕಾರವನ್ನು ನೀಡುತ್ತಿದೆ. ಸದ್ಯ ಮಳೆಗಾಲ ಪ್ರಾರಂಭವಾಗಿದ್ದು, ಆಸ್ಪತ್ರೆಗಳಲ್ಲಿ ಮಲೇರಿಯಾ, ಡೆಂಗ್ಯೂ ಜ್ವರದ ರೋಗಿಗಳ ಸಂಖ್ಯೆ ವಿಪರೀತ ಹೆಚ್ಚುತ್ತಿದೆ. ನಾವೆಲ್ಲರೂ ಮೊದಲು ನಮ್ಮ ಆರೋಗ್ಯದ ಬಗ್ಗೆ ವಿಶೇಷವಾಗಿ ಕಾಳಜಿ ವಹಿಸಬೇಕು. ಇಂದಿನ ಆಧುನಿಕ ಯುಗದಲ್ಲಿ ಎಲ್ಲರೂ ಹಣ ಸಂಪಾದನೆಯ ಹಿಂದೆ ಹೋಗಿ ತಮ್ಮ ಆರೋಗ್ಯವನ್ನು ನಿರ್ಲಕ್ಷಿಸಿ ಬ್ಲಡ್ ಪ್ರಶರ್, ಸಕ್ಕರೆ ಖಾಯಿಲೆಗಳಂತಹ ರೋಗಗಳನ್ನು ಆಹ್ವಾನಿಸುತ್ತಿದ್ದಾರೆ. ಯಾವುದೇ ರೋಗಗಳು ಬಂದಾಗ ನಮಗೆ ರಕ್ತದ ಅವಶ್ಯಕತೆ ಬಹಳಷ್ಟು ಇರುತ್ತದೆ. ಪ್ರತಿಯೊಬ್ಬರು 18 ವರ್ಷದಿಂದ ಮೇಲ್ಪಟ್ಟು 65 ವರ್ಷದವರೆಗೆ ವರ್ಷದಲ್ಲಿ ಎರಡು ಸಲ ರಕ್ತದಾನವನ್ನು ಮಾಡಿದಾಗ ನಮ್ಮ ಆರೋಗ್ಯ ಸಮತೋಲನವನ್ನು ಕಾಪಾಡುತ್ತದೆ. ನಾವು ರಕ್ತದಾನ ಮಾಡಿದಾಗ ಕೆಲವೇ ಗಂಟೆಗಳಲ್ಲಿ ನಮ್ಮ ಮೂಲೆ ಮಜ್ಜೆಗಳು ಪುನಃ ರಕ್ತವನ್ನು ಉತ್ಪಾದಿಸುತ್ತದೆ. ನಮ್ಮ ಹಿರಿಯರು ಯುವ ಪೀಳಿಗೆಗೆ ರಕ್ತದಾನ ಮಾಡುವಂತೆ ಪ್ರೇರಣೆಯನ್ನು ನೀಡುತ್ತಾ ಇರಬೇಕು. ನಾವು ನೀಡುವ ಒಂದು ಯೂನಿಟ್ ರಕ್ತ ನಾಲ್ಕು ರೋಗಿಗಳ ಜೀವನ ಉಳಿಸುವ ಕೆಲಸವನ್ನು ಮಾಡುತ್ತದೆ. ಆಗಸ್ಟ್ 10 ರಂದು ಬಂಟರ ಸಂಘದಲ್ಲಿ ಬಂಟ್ಸ್ ಡಾಕ್ಟರ್ ಸಮ್ಮೇಳನ ನಡೆಯಲಿದ್ದು, ಈ ಕಾರ್ಯಕ್ರಮದಲ್ಲಿ ತಾವೆಲ್ಲರೂ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಯಾಗಲು ಸಹಕರಿಸಬೇಕು ಎಂದು ಬಂಟ್ಸ್ ಹೆಲ್ತ್ ಕೇರ್ ಸಮಿತಿಯ ಕಾರ್ಯಾಧ್ಯಕ್ಷ ಡಾ. ಸ್ವರೂಪ್ ಹೆಗ್ಡೆ ನುಡಿದರು. ಅವರು ಜೂನ್ 15 ರಂದು ಕಲ್ಯಾಣ್ ಪಶ್ಚಿಮದ ಮಾತೋಶ್ರೀ ಸಭಾಗೃಹದಲ್ಲಿ ಬಂಟರ ಸಂಘ ಮುಂಬಯಿಯ ಭಿವಂಡಿ ಬದ್ಲಾಪುರ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಸುಭೋದ್ ಭಂಡಾರಿ ಮುಂದಾಳತ್ವದಲ್ಲಿ ಪ್ರಾದೇಶಿಕ ಸಮಿತಿಯ ಯುವ ವಿಭಾಗದ ವತಿಯಿಂದ ಜರಗಿದ ರಕ್ತದಾನ ಶಿಬಿರದಲ್ಲಿ ಮಾತನಾಡುತ್ತಿದ್ದರು.

ಬಂಟರ ಸಂಘ ಪೂರ್ವ ವಲಯ ಪ್ರಾದೇಶಿಕ ಸಮಿತಿಗಳ ಸಮನ್ವಯಕ ಸುಕುಮಾರ ಶೆಟ್ಟಿ ಮಾತನಾಡುತ್ತಾ, ಭಿವಂಡಿ ಬದ್ಲಾಪುರ ಪ್ರಾದೇಶಿಕ ಸಮಿತಿ ಸುಭೋದ್ ಭಂಡಾರಿ ಕಾರ್ಯಾಧ್ಯಕ್ಷತೆಯಲ್ಲಿ ಅತ್ಯುತ್ತಮ ಕೆಲಸಗಳನ್ನು ಮಾಡುತ್ತಿದ್ದು, ವರ್ಷದಲ್ಲಿ ಎರಡನೇ ಸಲ ರಕ್ತದಾನ ಶಿಬಿರವನ್ನು ಆಯೋಜಿಸಿದ ಕೀರ್ತಿಗೆ ಪಾತ್ರವಾಗಿದೆ. ಹೆಲ್ತ್ ಕೇರ್ ಸಮಿತಿಯ ಕಾರ್ಯಾಧ್ಯಕ್ಷ ಡಾ. ಸ್ವರೂಪ್ ಹೆಗ್ಡೆ ರೋಗಿಗಳ ಬಗ್ಗೆ ವಿಶೇಷ ಕಾಳಜಿಯನ್ನು ವಹಿಸುತ್ತಿದ್ದಾರೆ. ಅವರ ಐ.ಸಿ.ಯು ವಾರ್ಡಿನಲ್ಲಿ ಸುಮಾರು 60ಕ್ಕೂ ಮಿಕ್ಕಿ ರೋಗಿಗಳ ಶುಶ್ರೂಷೆ ಮಾಡುತ್ತಿದ್ದಾರೆ ಎನ್ನಲು ಅಭಿಮಾನವಾಗುತ್ತಿದೆ. ಯುವ ವಿಭಾಗದ ರಕ್ತದಾನ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ರಕ್ತವನ್ನು ನೀಡಿದಾಗ ಈ ಕಾರ್ಯಕ್ರಮ ಯಶಸ್ವಿಯಾಗುತ್ತದೆ. ನಮ್ಮ ದೇಶ ರಕ್ತದ ಅಭಾವವನ್ನು ಎದುರಿಸುತ್ತಿದೆ. ಬ್ಲಡ್ ಬ್ಯಾಂಕ್ ಗೆ ಹೋದಾಗ ರಕ್ತ ಸಿಗುವುದಿಲ್ಲ. ನಾವು ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಮಾಡಿ ರಕ್ತದ ಅಭಾವವನ್ನು ನೀಗಿಸಲು ಸಹಕಾರ ನೀಡುವುದರೊಂದಿಗೆ ಇಂತಹ ಶ್ರೇಷ್ಠ ಸಮಾಜ ಸೇವೆಯಲ್ಲಿ ಭಾಗಿಯಾಗೋಣ ಎಂದರು.
ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಸುಭೋದ್ ಭಂಡಾರಿ ಪ್ರಾಸ್ತಾವಿಕ ಮಾತುಗಳನಾಡುತ್ತಾ, ಪ್ರಾದೇಶಿಕ ಸಮಿತಿಯ ಯುವ ವಿಭಾಗ, ಮಹಿಳಾ ವಿಭಾಗ ಸಮಾಜ ಚಿಂತನೆಯ ಅತ್ಯುತ್ತಮ ಕಾರ್ಯಕ್ರಮವನ್ನು ಆಯೋಜಿಸುತ್ತಾ ಬರುತ್ತಿರುವುದು ಸಂತೋಷದ ವಿಷಯ. ಇಂದು ಸಂಕಲ್ಪ ಬ್ಲಡ್ ಬ್ಯಾಂಕ್ ನ ಸಹ ಸಂಯೋಗದೊಂದಿಗೆ ರಕ್ತದಾನ ಆಯೋಜಿಸುತ್ತಿದ್ದೇವೆ. ರಕ್ತದಾನ ಮಹಾದಾನ. ಈ ದಾನವನ್ನು ಯಾರೂ ಮಾಡಬಹುದು. ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಮಾಡಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದರು. ಇದಕ್ಕೂ ಮೊದಲು ಪ್ರಾರ್ಥನೆಯೊಂದಿಗೆ ವೇದಿಕೆಯ ಮೇಲಿದ್ದ ಗಣ್ಯರು ದೀಪ ಪ್ರಜ್ವಲಿಸಿ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವೇದಿಕೆಯ ಮೇಲೆ ಸುಭೋದ್ ಭಂಡಾರಿ, ಡಾ. ಸ್ವರೂಪ್ ಹೆಗ್ಡೆ, ಸುಕುಮಾರ್ ಶೆಟ್ಟಿ, ರವೀಂದ್ರ ಶೆಟ್ಟಿ, ಪ್ರಕಾಶ್ ಶೆಟ್ಟಿ, ಭಾಸ್ಕರ್ ಟಿ. ಶೆಟ್ಟಿ, ಹರೀಶ್ ಟಿ. ಶೆಟ್ಟಿ, ಸಂತೋಷ್ ಎಚ್. ಶೆಟ್ಟಿ, ಶೋಭಾ ಎ. ಶೆಟ್ಟಿ, ಸುಶಾಂತ್ ಶೆಟ್ಟಿ, ಪೂಜಾ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಯಶಸ್ವಿಗಾಗಿ ಕಾರ್ಯಾಧ್ಯಕ್ಷ ಸುಭೋದ್ ಡಿ. ಭಂಡಾರಿ, ಉಪ ಕಾರ್ಯಾಧ್ಯಕ್ಷ ಪ್ರಕಾಶ್ ಆರ್. ಶೆಟ್ಟಿ, ಮುಖ್ಯ ಸಲಹೆಗಾರ ಸತೀಶ್ ಎನ್. ಶೆಟ್ಟಿ, ಸಲಹೆಗಾರ ಭಾಸ್ಕರ್ ಟಿ. ಶೆಟ್ಟಿ, ಕಾರ್ಯದರ್ಶಿ ಹರೀಶ್ ಟಿ. ಶೆಟ್ಟಿ, ಕೋಶಾಧಿಕಾರಿ ಸುಧೀರ್ ಶೆಟ್ಟಿ, ಜತೆ ಕಾರ್ಯದರ್ಶಿ ದಯಾನಂದ ಶೆಟ್ಟಿ, ಜತೆ ಕೋಶಾಧಿಕಾರಿ ನಾಗಕಿರಣ್ ಪಿ ಶೆಟ್ಟಿ, ಹೆಲ್ತ್ ಕೇರ್ ಸಮಿತಿಯ ಕಾರ್ಯಾಧ್ಯಕ್ಷೆ ಡಾ. ಪೂಜಾ ಎಸ್. ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶೋಭಾ ಎ. ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಸುಶಾಂತ್ ಎಮ್. ಶೆಟ್ಟಿ, ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷ ಸಂತೋಷ್ ಎಚ್. ಶೆಟ್ಟಿ, ಕಾರ್ಯಕಾರಿ ಸಮಿತಿ ಸದಸ್ಯರು, ಮಹಿಳಾ ವಿಭಾಗದ ಸದಸ್ಯರು, ಯುವ ವಿಭಾಗದ ಸದಸ್ಯರು, ಮತ್ತಿತರರು ಶ್ರಮಿಸಿದರು. ಜೊತೆ ಕೋಶಾಧಿಕಾರಿ ನಾಗಕಿರಣ್ ಪಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಹರೀಶ್ ಟಿ ಶೆಟ್ಟಿ ವಂದಿಸಿದರು.