
ಯೋಗ ಇದ್ದವರಿಗೆಲ್ಲಾ ಒಂದು ದೊಡ್ಡ ಜವಾಬ್ದಾರಿಯನ್ನು ನಿಭಾಯಿಸಲು ಯೋಗ್ಯತೆ ಇರಬೇಕೆಂದಿಲ್ಲ. ಹಾಗೇ ಯೋಗ್ಯತೆ ಇದ್ದವರಿಗೆಲ್ಲಾ ಅಂತಾ ಹುದ್ದೆಯನ್ನು ನಿಭಾಯಿಸುವ ಯೋಗ ಕೂಡಿ ಬರಬೇಕೆಂದೂ ಇಲ್ಲ. ಆದರೆ ಯೋಗ್ಯತೆ ಇದ್ದು ಯೋಗವೂ ಕೂಡಿ ಬಂದಾಗ ಒಬ್ಬ ವ್ಯಕ್ತಿ ಅಸಾಮಾನ್ಯನಾಗುತ್ತಾನೆ. ಜನರ ಕಣ್ಮಣಿಯಾಗುತ್ತಾನೆ, ಜನನಾಯಕನಾಗುತ್ತಾನೆ, ಲೋಕ ಮಾನ್ಯನಾಗುತ್ತಾನೆ, ಆತನಿಗೆ ಪಟ್ಟ ಬೇಕಾಗಿಲ್ಲ. ಜನರೇ ಆತನನ್ನು ರತಗನ ಸಿಂಹಾಸನದಲ್ಲಿ ಕೂರಿಸಿ ಮೆರೆಸುತ್ತಾರೆ. ಇಂತಾ ಯೋಗ್ಯತೆ ಯೋಗ ಅದರೊಂದಿಗೆ ಮುಗ್ದತೆ ಮತ್ತು ಸಾಧನೆಯಿಂದ ಅಸಾಧ್ಯವನ್ನು ಸಾಧಿಸಿದ ಮಹಾ ಸಾಧಕ ಜಾಗತಿಕ ಬಂಟರ ಸಂಘದ ಅಧ್ಯಕ್ಷರಾದ ಮಾನ್ಯ ಐಕಳ ಹರೀಶಣ್ಣ. ಅಂದು ಆ ಒಂದು ಶುಭ ಘಳಿಗೆಯಲ್ಲಿ ಬಂಟರ ಕುಲದಾಗಸದಲ್ಲಿ ದ್ರುವ ತಾರೆಯೊಂದರ ಉದಯವಾಯಿತು. ಎಳತ್ತೂರು ಗುತ್ತು ಪಡುಮನೆ ರಾಮಣ್ಣ ಶೆಟ್ಟಿ, ಐಕಳ ಕುಂರ್ಬಿಲ್ ಗುತ್ತು ದೇವಕಿ ಶೆಟ್ಟಿ ದಂಪತಿಗಳ ಮುದ್ದಿನ ಮಗನಾಗಿ ಎಪ್ರಿಲ್ ಹತ್ತೊಂಬತ್ತು 1961 ರಂದು ಜಗದ ಬೆಳಕನ್ನು ಕಂಡ ಆ ದ್ರುವ ತಾರೆಯೇ ನಮ್ಮ ಐಕಳ ಹರೀಶಣ್ಣ. ತಂದೆ ರಾಮಣ್ಣ ಶೆಟ್ಟರು ವಿದ್ಯಾವಂತರು, ಧಾರ್ಮಿಕ ಪ್ರಜ್ಞೆಯುಳ್ಳವರು ಜೊತೆಗೆ ಯಶಸ್ವೀ ಕ್ರಷಿಕರಾಗಿರುವುದರಿಂದ ಈ ಎಲ್ಲಾ ಗುಣಗಳು ಹರೀಶಣ್ಣನಿಗೆ ಬಳುವಳಿಯಾಗಿ ಬಂದಿದ್ದವು. ತುಂಟ, ಪೋಕರಿ ಮತ್ತು ಚುರುಕು ಸ್ವಭಾವದ ಬಾಲಕ ಹರೀಶಣ್ಣ ಬಾಲ್ಯವನ್ನು ಕಳೆದಿದ್ದು ಎಳತ್ತೂರು ಗುತ್ತು ಪಡುಮನೆಯ ಅಜ್ಜ ಮೈಂದ ಶೆಟ್ಟಿಯವರ ಮನೆಯಲ್ಲಿ. ವಿದ್ಯಾಭ್ಯಾಸ ಆರಂಭಿಸಿದ ವಿದ್ಯಾ ದೇಗುಲ ಶಾರದಾ ಎಲಿಮೆಂಟರಿ ಸ್ಕೂಲ್. ಎಳವೆಯಲ್ಲೇ ಕ್ರೀಡೆಯಲ್ಲಿ ಅಪಾರ ಆಸಕ್ತಿಯುಳ್ಳ ಬಾಲಕ ಮುಂದಿದ್ದ ಎಸ್.ಎಸ್. ಎಲ್.ಸಿ ಅಂತಿಮ ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣ ರಾಗಿದ್ದು ಇದಕ್ಕೆ ಸಾಕ್ಷಿ. ಕಾಲೇಜು ಜೀವನ ಮುಲ್ಕಿ ವಿಜಯಾ ಕಾಲೇಜಿನಲ್ಲಿ, ಸಹಜವಾಗಿ ಕಾಲೇಜು ಜೀವನದಲ್ಲಿ ಇರುವ ಪೋಲಿತನ, ಪೆಟ್ ಗಲಾಟೆ, ಸ್ನೇಹ, ಇದೆಲ್ಲವನ್ನೂ ಅನುಭವಿಸಿದ ಹರೀಶಣ್ಣನ ಬದುಕನ್ನು ಬದಲಿಸಿದ್ದು ಕ್ರೀಡೆ, ಒಳ್ಳೆಯ ದೇಹದಾರ್ಡ್ಯ ಪಟುವಾಗಿ ರೂಪುಗೊಂಡ ಹರೀಶಣ್ಣ ಡಾಕ್ಟರ್ ಆಗಬೇಕೆಂಬ ಆಸೆ ಅಣ್ಣಂದಿರದ್ದಾಗಿತ್ತಾದರೂ ಮುಂದೆ ಆಗಿದ್ದು ಶ್ರೇಷ್ಟ ಕ್ರೀಡಾಪಟು. ಕ್ರೀಡೆಯಲ್ಲಿ ಪಡೆದುಕೊಂಡ ಪ್ರಶಸ್ತಿಗಳನ್ನು ಲೆಕ್ಕ ಹಾಕುವುದೇ ಸವಾಲು. ಮಿಸ್ಟರ್ ಮಂಗಳೂರು ಯುನಿವರ್ಸಿಟಿ ಪ್ರಶಸ್ತಿ. ಕರ್ನಾಟಕ ಕಿಶೋರ್ ಪ್ರಶಸ್ತಿ. ಭಾರತ್ ಕಿಶೋರ್ ಪ್ರಶಸ್ತಿ. ಪ್ರಶಸ್ತಿಗಳ ಒಡೆಯ ಹರೀಶಣ್ಣನಿಗೆ ಇನ್ನಷ್ಟು ಮತ್ತಷ್ಟು ಪ್ರಶಸ್ತಿಗಳು ಸಿಗುವಂತಾಗಲಿ ಎಂಬ ಹಾರೈಕೆ. ಹರೀಶಣ್ಣ ಕ್ರೀಡಾಪಟು, ಯಶಸ್ವೀ ಉದ್ಯಮಿ ಜೊತೆಗೆ ಸಿನಿಮಾ ರಂಗಕ್ಕೂ ಕಾಲಿಟ್ಟ ಪ್ರತಿಭೆ, ಪ್ರಾಯಶಃ ಕೆಲಸದ ಒತ್ತಡವಿಲ್ಲದಿರುತ್ತಿದ್ದರೆ ಚಿತ್ರ ರಂಗದಲ್ಲೂ ದೊರೆಯಾಗಿ ಮೆರೆಯುತ್ತಿದ್ದರೇನೋ. ಅದು 1991 ಮಾಚ್೯ ತಿಂಗಳ 7 ನೇ ತಾರೀಕು, ತಾಳಿಪಾಡಿ ಅಡ್ರೆ ಗುತ್ತು ರಾಘು ಶೆಟ್ಟಿ ಮತ್ತು ಮುಂಡ್ಕೂರು ಅನ್ನೆದ ಗುತ್ತು ಯಮುನಾ ಶೆಟ್ಟಿಗಳ ಸುಪುತ್ರಿ ಪ್ರತಿಭಾವಂತೆ ಅಂತರಾಷ್ಟ್ರೀಯ ಕಾಲೇಜು ತ್ರೋ ಬಾಲ್ ಕ್ರೀಡೆಯಲ್ಲಿ ಉನ್ನತ ಸಾಧನೆ ಮಾಡಿದ ಬಿ.ಎ ಬಿಇಡಿ ಪದವೀಧರೆ ಚಂದ್ರಿಕಾರವರು ಹರೀಶಣ್ಣನ ಮಡದಿಯಾಗಿ ಮನೆ ಸೇರಿದರು, ಇವರ ದಾಂಪತ್ಯದ ಫಲವಾಗಿ ತಂದೆಗೆ ತಕ್ಕ ಮಗನಾಗಿ ಅರ್ಜುನ್ ಹರೀಶ್ ಮತ್ತು ಮುದ್ದಿನ ಮಗಳಾಗಿ ತಂದೆ ತಾಯಿಗಳ ಪ್ರತಿಭೆಯನ್ನು ಮೈಗೂಡಿಸಿಕೊಂಡು ಸನ್ನಿಧಿ ಜನಿಸಿದರು. ಹೀಗೆ ಸಂಸಾರ ರಥ ಸುಂದರವಾಗಿ ಸಾಗಿದೆ. ಮುಂಬೈನಲ್ಲಿ ನಿರ್ಲಾನ್ ಕಂಪನಿಯಲ್ಲಿ ಉದ್ಯೋಗ ಮುಂದೆ ಹೋಟೇಲ್ ಉದ್ಯಮ ನಡೆಸುತ್ತಾ ತ್ರಿವಿಕ್ರಮನಂತೆ ಬೆಳೆದು ನಿಂತವರು ಹರೀಶಣ್ಣ. ಮಹಾ ದೈವ ಭಕ್ತ ನಮ್ಮ ಹರೀಶಣ್ಣ ಕಟೀಲು ತಾಯಿಯ ಪರಮ ಭಕ್ತ ಕಟೀಲಮ್ಮನನ್ನು ಎನ್ನ ಅಪ್ಪೆ ಎಂದೇ ಕರೆಯುವ ಐಕಳರು ಸಣ್ಣ ಮಗುವನ್ನಾದರೂ ಬಹುವಚನದಲ್ಲೇ ಕರೆಯುವ ಸಂಸ್ಕಾರವಂತ. ತನ್ನ ಪ್ರಗತಿಯ ಹೆಜ್ಜೆಗಳಿಗೆ ಶಕ್ತಿ ತುಂಬಿದ ತನ್ನನ್ನು ಮಗನೆಂದೇ ಕರೆಯುವ ಬಂಟರ ಸಂಘದಲ್ಲಿ ಕಾರ್ಯಕಾರಿಣಿ ಸದಸ್ಯೆಯಾಗಿ ದುಡಿದ ಅನುಭವವಿರುವ ಡಾ.ಸುನೀತಾ ಎಂ ಶೆಟ್ಟಿ, ಶಿಕ್ಷಕರು, ತಂದೆ ತಾಯಿ, ಅತ್ತೆ ಮಾವ ಗುರು ಹಿರಿಯರು, ಸಮುದಾಯದ ಅಧ್ಯಕ್ಷರುಗಳು, ಸಮಾಜದ ಗಣ್ಯರು, ಸಮುದಾಯದ ಹಿರಿಯರು ಎಲ್ಲರನ್ನೂ ಹ್ರದಯದಲ್ಲಿಟ್ಟು ಪೂಜಿಸುವ ಐಕಳ ಹರೀಶಣ್ಣ ನಿಜವಾಗಿಯೂ ವ್ಯಕ್ತಿಯಲ್ಲ ಅವರೊಂದು ಶಕ್ತಿ. ಭಗವಾನ್ ಶ್ರೀ ಕ್ರಷ್ಣ ಪರಮಾತ್ಮನಲ್ಲಿ ಐಕ್ಯರಾದ ಮಹಾ ಸಂತ ಪರಮ ಪೂಜ್ಯ ಶ್ರೀ ಶ್ರೀ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ, ಮಾತನಾಡುವ ಮಂಜುನಾಥ ಪರಮ ಪೂಜ್ಯ ಖಾವಂದರಾದ ರಾಜರ್ಷಿ ಡಿ. ವೀರೇಂದ್ರ ಹೆಗ್ಗಡೆ. ಜಗನ್ಮಾತೆ ಯಾಯಿ ಕಟೀಲು ಶ್ರೀ ದುರ್ಗಾ ಪರಮೇಶ್ವರೀ ದೇವಿಯ ಅರ್ಚಕರಾದ ಪೂಜ್ಯ ಶ್ರೀ ಲಕ್ಷ್ಮೀ ನಾರಾಯಣ ಅಸ್ರಣ್ಣ, ಪಲಿಮಾರು ಮಠದ ಯತಿವರ್ಯರಾದ ಶ್ರೀ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ , ತಾಯಿ ಕಟೀಲು ಭ್ರಮರಾಂಭಿಕೆಯ ಆರಾಧಕರೂ ರಾಜಕೀಯ ಮುಖಂಡರೂ ಆದ ಶ್ರೀ ನಳಿನ್ ಕುಮಾರ್ ಕಟೀಲ್, ಮುಂಬೈ ಸಂಸದರಾದ ಮಾನ್ಯ ಗೋಪಾಲ್ ಶೆಟ್ಟಿ. ಇವರೆಲ್ಲರ ಆಶೀರ್ವಾದದ ಶ್ರೀ ರಕ್ಷೆ ತನ್ನ ಮೇಲಿರಲಿ ಎಂದು ವಿನೀತರಾಗಿ ಕೈ ಮುಗಿದು ನಿಲ್ಲುವ ವಿಧೇಯ, ಬೀಗುವ ಬದಲು ಬಾಗುವ ಮನೋಭಾವವನ್ನು ಹೊಂದಿರುವ ಐಕಳ ಹರೀಶ್ ಶೆಟ್ಟರು ಬಂಟರ ಕುಲದ ಅನಘ್ರ್ಯ ರತ್ನ.ಅಂದಹಾಗೆ 2011 ರಲ್ಲಿ ಪ್ರತಿಷ್ಠಿತ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯು ಹರೀಶಣ್ಣನ ಕೊರಳನ್ನಲಂಕರಿಸಿದ ಸಂದರ್ಭದಲ್ಲಿ ಮುಂಡ್ಕೂರು ಪ್ರೇಮನಾಥ ಶೆಟ್ಟಿಯವರು ಹಾಗೂ ದಿ! ಕೊಡು ಬೋಜ ಶೆಟ್ಟಿ ಐಕಳರ ಬಗ್ಗೆ ಬರೆದ ಹರೀಶ ಪುಸ್ತಕವು ಬಿಡುಗಡೆಯಾಗಿತ್ತು.
ಸಾರ್ವಭೌಮ
ಸಾರ್ವಭೌಮ ಶೀರ್ಷಿಕೆ ಐಕಳ ಹರೀಶಣ್ಣನಿಗೆ ಸರಿಯಾಗಿ ಒಪ್ಪುವ ಅನ್ವರ್ಥ ನಾಮ. ಸಾರ್ವಬೌಮ ಪದದ ಅರ್ಥವೇ ಹಾಗೆ. ಪರಿಧಿಯನ್ನು ಮೀರಿ ಅದರಾಚೆಗೂ ತನ್ನ ಪ್ರಭಾವ ವರ್ಚಸ್ಸು ಮತ್ತು ಅಧಿಕಾರವನ್ನು ಹೊಂದಿರುವುದು ಮತ್ತು ಯಾರದೇ ಹಂಗು ಇಲ್ಲದೇ ಯಾರ ಅಧೀನಕ್ಕೂ ಒಳಪಡದೇ ತಾನೇ ಶಾಸನ ರೂಪಿಸಿಕೊಂಡು ಸ್ವತಂತ್ರವಾಗಿ ಸೂರ್ಯನಂತೆ ಕಂಗೊಳಿಸುವುದು ಸಾರ್ವಭೌಮತೆ. ಸಮುದಾಯದ ಗಣ್ಯರ ಅನಿಸಿಕೆಗಳನ್ನಿಲ್ಲಿ ಉಲ್ಲೇಖಿಸಲೇಬೇಕು. ಅಪರೂಪದ ಅಪರಂಜಿ ಸಮಾಜ ಸಾಮ್ರಾಟ ಎಂದು ಅಶೋಕ್ ಪಕ್ಕಳ ಕರೆದಿದ್ದರೆ, ಸಾಧನೆಯ ಭಗೀರಥ ಐಕಳರೆಂಬ ಮಹಾರಥ ಎಂದು ಉಳ್ತೂರು ಮೋಹನ್ ಶೆಟ್ಟಿಯವರು ಹೇಳಿದ್ದಾರೆ. ಖ್ಯಾತ ಭಾಗವತರಾದ ಸತೀಶ್ ಶೆಟ್ಟಿ ಪಟ್ಲ ರವರು ಹರೀಶಣ್ಣನನ್ನು ಸಾಂಸ್ಕ್ರತಿಕ ಛಲಗಾರನಾಗಿ ಕಂಡಿದ್ದಾರೆ. ಸಂಘಟಕ, ಕಲಾವಿದ ಕರ್ನೂರು ಮೋಹನ್ ರೈಯವರು ಹೊಸ ವ್ಯಾಖ್ಯಾನ ಬರೆದವರು ಎಂಬ ಮೆಚ್ಚುಗೆಯನ್ನು ಸೂಚಿಸಿದರೆ,ತುಂಗಾ ಗ್ರೂಪ್ ಅಫ್ ನ ಸುಧಾಕರ ಹೆಗ್ಡೆ ಯವರು ಶುಭ ನುಡಿಗಳನ್ನಾಡಿದ್ದಾರೆ. ಬಡವರ ಸೇವೆ ದೇವರ ಪೂಜೆ ಎಂದು ಭಾವಿಸುವ ಉದಾರ ಹೃದಯಿ ಎಂಬ ಅಭಿಪ್ರಾಯ ಕರ್ನಿರೆ ವಿಶ್ವನಾಥ ಶೆಟ್ರದ್ದಾಗಿದೆ. ವಜ್ರದಂತೆ ಕಠಿಣ ಹೂವಿನಂತೆ ಮೃದು ಇದು ಮುಂಡ್ಕೂರು ರತ್ನಾಕರ ಶೆಟ್ಟಿಯವರ ಮನದಾಳದ ಮಾತು. ಉದಾರ ಹೃದಯದ ಆಪಾದ್ಬಾಂದವ ಐಕಳರ ಹ್ರದಯ ವೈಶಾಲ್ಯತೆ, ಕಷ್ಟಕ್ಕೊದಗುವ ಗುಣ ಇವೆಲ್ಲವನ್ನು ಜಗನ್ನಾಥ ಬಾಳ. ತಮ್ಮ ಅನಿಸಿಕೆಯಲ್ಲಿ ತಿಳಿಸಿದ್ದಾರೆ. ಜಯಕರ್ ಶೆಟ್ಟಿಇಂದ್ರಾಳಿಯವರು ಹರೀಶಣ್ಣನಿಗೆ ಹರೀಶಣ್ಣನೇ ಸಾಟಿ ಬೇರೆ ಯಾರು ಇಲ್ಲ ಎಂದು ಹೇಳಿದ್ದಾರೆ.ಇನ್ನೂ ಅನೇಕ ಗಣ್ಯಾತಿ ಗಣ್ಯರು ತಮ್ಮ ಅನಿಸಿಕೆ ಮತ್ತು ಆಶೀರ್ವಚನ ನೀಡಿರುತ್ತಾರೆ. ಹೀಗೆ ಸಮಾಜದ ಗಣ್ಯರ ಅನಿಸಿಕೆಗಳು ದಾಖಲಾಗಿರುವ ಸಂಗ್ರಹ ಯೋಗ್ಯ ಗ್ರಂಥ ರೂಪದ ಪುಸ್ತಕ ಸಾರ್ವಭೌಮ.ಈ ಸುಂದರ ಪುಸ್ತಕ ಹೊರ ಬರುವಲ್ಲಿ ಶ್ರಮಿಸಿ, ಓದುಗರ ಕೈಗಿತ್ತ ಶ್ರೀ ಚಂದ್ರ ಶೇಖರ ಪಾಲೆತ್ತಾಡಿ, ಸಂಪಾದಕರು ಕರ್ನಾಟಕ ಮಲ್ಲ ಮುಂಬೈ. ಡಾ. ಜಿ.ಎನ್ ಉಪಾದ್ಯ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು ಕನ್ನಡ ವಿಭಾಗ ಮುಂಬಯಿ ವಿಶ್ವ ವಿದ್ಯಾಲಯ. ಡಾ. ಪೂರ್ಣಿಮಾ ಸುಧಾಕರ ಶೆಟ್ಟಿ ಸಹ ಪ್ರಾಧ್ಯಾಪಕರು ಕನ್ನಡ ವಿಭಾಗ ಮುಂಬಯಿ ವಿಶ್ವ ವಿದ್ಯಾಲಯ. ಸಾರ್ವಭೌಮ ಪುಸ್ತಕ ಅತ್ಯಾಕರ್ಷಕವಾಗಿ, ಬರಬೇಕಾದರೆ ಡಾ. ಪೂರ್ಣಿಮಾರವರ ಪ್ರಯತ್ನ, ಪರಿಶ್ರಮ ಕಂಡಿತ ಮರೆಯುವಂತಿಲ್ಲ. ಇಂತಾ ಕಠಿಣ ಪರಿಶ್ರಮದ ಫಲವಾಗಿ ಅದ್ಬುತ ವ್ಯಕ್ತಿಯೋರ್ವರ ಬಗೆಗಿನ ಪುಸ್ತಕವನ್ನು ಯಾವುದೇ ಲೋಪವಿಲ್ಲದಂತೆ ಅಚ್ಚಾಗಿಸಿ, ಅಚ್ಚುಕಟ್ಟಾಗಿ ಅಣಿಗೊಳಿಸುವಂತಾಗಿದೆ ಅಂದರೆ ಅತಿಶಯೋಕ್ತಿ ಆಗಲಾರದು. ಈ ತ್ರಿಮೂರ್ತಿಗಳು ಅಭಿನಂದನಾರ್ಹರು. ಯೋಗ್ಯರ ಕೈಗೆ ಅಧಿಕಾರ ಸಿಕ್ಕಿದಾಗ, ಸಮುದಾಯದ ಬಗ್ಗೆ ಪ್ರೀತಿ, ಕಾಳಜಿ ಜೊತೆಗೆ ಸಾಧಿಸುವ ಛಲ ಇದ್ದಾಗ ಯಾವುದೂ ಅಸಾಧ್ಯವೆನಿಸಲಾರದು, ಕಳೆದ ನಾಲ್ಕು ವರ್ಷಗಳಿಂದ ಜಾಗತಿಕ ಬಂಟರ ಸಂಘದಲ್ಲಿ ಅತ್ಯುತ್ತಮ ಕೆಲಸಗಳಾಗುತ್ತಿವೆ. ಕನ್ಯಾನ ಸದಾಶಿವ ಶೆಟ್ಟಿ, ತೊನ್ಸೆ ಆನಂದ ಶೆಟ್ಟಿ.ಕೊರಂಗ್ರಪಾಡಿ ಪ್ರಕಾಶ್ ಶೆಟ್ಟಿ, ಶಶಿಧರ್ ಶೆಟ್ಟಿ ಬರೋಡಾ, ಪ್ರವೀಣ್ ಭೋಜ ಶೆಟ್ಟಿ ,ವಕ್ವಾಡಿ ಪ್ರವೀಣ್ ಶೆಟ್ಟಿ ಇಂತಾ ಸಮುದಾಯದ ಬಗ್ಗೆ ವಿಶೇಷ ಅಭಿಮಾನವಿರುವ ಮಹಾನ್ ದಾನಿಗಳ ಸಹಕಾರ, ಜಾಗವನ್ನು ಖರೀದಿಸಿ ಕೊಟ್ಟಿರುವ ಕನ್ಯಾನ ಸದಾಶಿವ ಶೆಟ್ಟಿಯವರು ಕೊಡುಗೆ ಮರೆಯಲಾಗದ. ಸಾರ್ವಭೌಮ ಪುಸ್ತಕ ಬಿಡುಗಡೆಯ ದಿನ ನಡೆದ ಅದ್ಧೂರಿ ಸಮಾರಂಭ, ಬ್ಯಾಂಡು ಕೊಂಬು, ವಾದ್ಯ, ಡೊಳ್ಳು ನಗಾರಿ ಹೀಗೆ ವಿವಿಧ ಬಿರುದು ಬಾವಲಿಗಳೊಂದಿಗೆ ಅದ್ಬುತ ಸುಂದರವಾಗಿ ಸಂಪನ್ನಗೊಂಡಿತು. ಮಂಗಳೂರು ವಿಶ್ವ ವಿದ್ಯಾನಿಲಯದ ಕುಲಪತಿಗಳಾದ ಮಾನ್ಯ ಸುಬ್ರಹ್ಮಣ್ಯ ಎಡಪಡಿತ್ತಾಯ ರವರು ತಮ್ಮ ಭಾಷಣದಲ್ಲಿ ನ ಭೂತೋ ಎಂಬಂತೆ ನಡೆದ ಇಂತಾ ಸಮಾರಂಭ ಮುಂಬೈ ವಿಶ್ವ ವಿದ್ಯಾಲಯದಲ್ಲಿ ಇದುವರೆಗೆ ನಡೆದಿದ್ದಿಲ್ಲ ಅನ್ನುವ ಮಾತು ಉಲ್ಲೇಖನೀಯ. ಜಾಗತಿಕ ಬಂಟರ ಸಂಘದ ಚಕ್ರೇಶ್ವರನಾಗಿ ಸಮುದಾಯದ ಎಲ್ಲರನ್ನೂ ಪ್ರೀತಿ ಮತ್ತು ಸಮಾನತೆಯ ಮಾನದಂಡದಲ್ಲಿ ಮುನ್ನಡೆಸುತ್ತಾ ಜಾಗತಿಕ ಬಂಟರ ಸಂಘದ ಚುಕ್ಕಾಣಿ ಹಿಡಿದಿರುವ ಐಕಳ ಹರೀಶಣ್ಣನ ವರ್ಚಸ್ಸು, ಪ್ರಭಾವ, ಅಧಿಕಾರ ವ್ಯಾಪ್ತಿ ವಿಶ್ವ ಮಟ್ಟದ್ದಾಗಿದ್ದು ಅವರ ಬಗ್ಗೆ ಬರೆದಿರುವ ಪುಸ್ತಕಕ್ಕೆ ಸಾರ್ವಭೌಮ ಶಿರೋನಾಮೆ ಅರ್ಥಪೂರ್ಣವೂ, ಸೂಕ್ತವೂ ಆಗಿರತ್ತದೆ. ಈ ಮೇರು ವ್ಯಕ್ತಿತ್ವಕ್ಕೆ ಇದೇ ಸರಿಯಾದ ಶಿರೋನಾಮೆ ಅನ್ನುವುದು ನನ್ನ ಅಭಿಪ್ರಾಯ. ಇಂತ ಮಹಾನ್ ವ್ಯಕ್ತಿಗಳ ಜೊತೆ ನಾನಿದ್ದೇನೆ ಅನ್ನುವುದೇ ಒಂದು ಮರೆಯಲಾಗದ ಸಂಗತಿ. ನನ್ನ ಪೂರ್ವಜರು ಮಾಡಿರುವ ಸುಕ್ರತದ ಫಲವಿದು ಎಂದು ನಾನು ತಿಳಿದಿರುವೆ. ಜನ್ಮ ಜನ್ಮಾಂತರದ ಪುಣ್ಯದ ಫಲ ಇವರೆಲ್ಲರ ಸಾಂಗತ್ಯ ದೊರಕಿದೆ ಇದೇ ಸಂತೋಷ. ಇದೇ ಆನಂದ. ಇದೇ ಮಹದಾನಂದ.
– ನೀತಾ ರಾಜೇಶ್ ಶೆಟ್ಟಿ

































































































































