ಅಜ್ಞಾನವೆಂಬ ಕತ್ತಲನ್ನು ಹೋಗಲಾಡಿಸಿ ಜ್ಞಾನವೆಂಬ ಬೆಳಕನ್ನು ಮೂಡಿಸುವವನೇ ಗುರು. ತನ್ನ ಶಿಷ್ಯನಲ್ಲಿನ ತಪ್ಪುಗಳನ್ನು ತಿದ್ದಿ ತಿಡಿ ಆತನನ್ನು ಸರಿಯಾದ ಮಾರ್ಗದಲ್ಲಿ ಕೈ ಹಿಡಿದು ಮುನ್ನಡೆಸುವವನೇ ಗುರು ಎಂದು ತಿಳಿಸುತ್ತಾ ಗುರುಪೂರ್ಣಿಮೆಯ ಮಹತ್ವವನ್ನು ವಿದ್ಯಾರ್ಥಿಗಳಿಗೆ ವಿವರಿಸಿದ ಶ್ರೀ ಶಾರದಾ ಕಾಲೇಜು ಬಸ್ರೂರು ಇಲ್ಲಿನ ನಿವೃತ್ತ ಪ್ರಾಂಶುಪಾಲರಾದ ಕೆ. ರಾಧಾಕೃಷ್ಣ ಶೆಟ್ಟಿ ಅವರು ಎಕ್ಸಲೆಂಟ್ ಪದವಿ ಪೂರ್ವ ಕಾಲೇಜು ಸುಣ್ಣಾರಿ ಕುಂದಾಪುರ ಇಲ್ಲಿನ ಸಭಾಂಗಣದಲ್ಲಿ ಜರುಗಿದ ಗುರು ಪೂರ್ಣಿಮೆಯ ಕಾರ್ಯಕ್ರಮವನ್ನು ದೀಪ ಪ್ರಜ್ವಲಿಸಿ ಮಾತನಾಡಿದರು. ಆಷಾಢ ಮಾಸದ ಶುಕ್ಲಪಕ್ಷದ ಹುಣ್ಣಿಮೆಯಂದು ಆಚರಿಸುವ ಗುರುಪೂರ್ಣಿಮೆಯು ಪುರಾಣ ಗ್ರಂಥವಾದ ಮಹಾಭಾರತವನ್ನು ರಚಿಸಿದ ವೇದವ್ಯಾಸರ ಜನ್ಮದಿನವೆಂದು ವಿದ್ಯಾರ್ಥಿಗಳಿಗೆ ಅರ್ಥೈಸಿದರು. ಅಲ್ಲದೇ ಈ ದಿನ ಪ್ರತಿಯೊಬ್ಬ ವಿದ್ಯಾರ್ಥಿಯು ತನಗೆ ಕಲಿಸಿದ ಗುರುಗಳಿಗೆ ಕೃತಜ್ಞತೆಯನ್ನು ತಿಳಿಸಬೇಕೆಂದು ತಿಳಿಸಿದರು. ಪ್ರತಿಯೊಬ್ಬ ವಿದ್ಯಾರ್ಥಿಯು ತನ್ನ ಜೀವನದಲ್ಲಿ ಶಿಸ್ತನ್ನು ಅಳವಡಿಸಿಕೊಂಡು ಗುರುಗಳು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯಬೇಕೆಂದರು. ವೈಯಕ್ತಿಕ ಹಾಗೂ ತಮ್ಮ ಸುತ್ತಮುತ್ತಲಿನ ಸ್ವಚ್ಛತೆಯ ಕಡೆಗೆ ಹೆಚ್ಚಿನ ಗಮನ ಕೊಡುತ್ತಾ, ಗುರು ನೀಡಿದ ಶಿಕ್ಷಣಕ್ಕೆ ಸೂಕ್ತ ಪ್ರತಿಫಲವನ್ನು ನೀಡಬೇಕೆಂದು ಕರೆ ನೀಡಿದರು. ಇದೇ ಸಂದರ್ಭದಲ್ಲಿ ಎಕ್ಸಲೆಂಟ್ ವಿದ್ಯಾ ಸಂಸ್ಥೆಯ ಅತ್ಯುತ್ತಮ ಶೈಕ್ಷಣಿಕ ಫಲಿತಾಂಶಕ್ಕೆ ಶ್ರಮಿಸಿದ ಉಪನ್ಯಾಸಕ ವೃಂದದವರನ್ನು ಗೌರವಿಸಿ ಸನ್ಮಾನಿಸಲಾಯಿತು. ಮುಖ್ಯ ಅತಿಥಿಗಳಾದ ಕೆ ರಾಧಾಕೃಷ್ಣ ಶೆಟ್ಟಿ ಅವರನ್ನು ಸನ್ಮಾನಿಸಿ ವಿದ್ಯಾರ್ಥಿನಿಯರು ಆರತಿ ಬೆಳಗುವುದರ ಮೂಲಕ ವಿಶಿಷ್ಟವಾಗಿ ಗುರುವಂದನೆ ಸಲ್ಲಿಸಿದರು. 9ನೇ ತರಗತಿಯ ವಿದ್ಯಾರ್ಥಿನಿ ಅದ್ವಿತ ಗುರುಪೂರ್ಣಿಮೆಯ ವಿಶೇಷತೆಯ ಕುರಿತು ಮಾತನಾಡಿದರು.



ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ಸ್ಥಾಪಕರಾದ ಎಂ ಮಹೇಶ್ ಹೆಗ್ಡೆಯವರು, ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಶಿಸ್ತಿಗೆ ಮೊದಲ ಆದ್ಯತೆ ನೀಡಬೇಕೆಂದು ಹೇಳಿದರು. ಗುರು ಹಿರಿಯರಲ್ಲಿ ಮಾತನಾಡುವ ಸಂದರ್ಭದಲ್ಲಿ ನಯ ವಿನಯ ಗೌರವದ ಭಾವನೆಯನ್ನು ಅಳವಡಿಸಿಕೊಳ್ಳಬೇಕೆಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಪ್ರಾಂಶುಪಾಲರಾದ ನಾಗರಾಜ್ ಶೆಟ್ಟಿ, ಹೈಸ್ಕೂಲು ವಿಭಾಗದ ಮುಖ್ಯಸ್ಥರಾದ ಸರೋಜಿನಿ ಪಿ ಆಚಾರ್ಯ ಹಾಗೂ ಸಿಬಿಎಸ್ಸಿ ವಿಭಾಗದ ಮುಖ್ಯಸ್ಥರಾದ ವಿಶಾಲ ಶೆಟ್ಟಿ ಉಪಸ್ಥಿತರಿದ್ದರು. 9ನೇ ತರಗತಿಯ ವಿದ್ಯಾರ್ಥಿನಿಯರಾದ ಪ್ರಜ್ಞ ಹಾಗೂ ಪ್ರಕೃತಿ ಕಾರ್ಯಕ್ರಮವನ್ನು ನಿರೂಪಿಸಿದರು. 8ನೇ ತರಗತಿ ವಿದ್ಯಾರ್ಥಿನಿ ಪೂರ್ವಿ ಸಿ ಸ್ವಾಗತಿಸಿ, ಆಯುಷ್, ಅಲೈನ ವಂದಿಸಿದರು. 7ನೇ ತರಗತಿ ವಿದ್ಯಾರ್ಥಿನಿ ಸನ್ನಿಧಿ ಎಂ ನಾಯರ್ ಅತಿಥಿಗಳನ್ನು ಪರಿಚಯಿಸಿದರು.




















































































































