ಸುಭಾಷಿತನಗರ ರೆಸಿಡೆಂಟ್ಸ್ ವೆಲ್ಫೇರ್ ಅಸೋಸಿಯೇಶನ್ (ರಿ) ಸುರತ್ಕಲ್ ಇದರ 5 ನೇ ವಾರ್ಷಿಕ ಮಹಾಸಭೆ ಸುಭಾಷಿತ ನಗರದಲ್ಲಿರುವ ಹೊಟೇಲ್ ರಚನಾ ಪ್ಯಾಲೇಸ್ ಸಭಾಂಗಣದಲ್ಲಿ ನಡೆಯಿತು. ವಾರ್ಷಿಕ ಮಹಾಸಭೆಯ ಅಧ್ಯಕ್ಷತೆಯನ್ನು ಅಸೋಸಿಯೇಶನ್ ಅಧ್ಯಕ್ಷ ರಮೇಶ್ ಶೆಟ್ಟಿ ಸುಭಾಷಿತನಗರ ವಹಿಸಿದ್ದರು. ಸಂಘಟನಾ ಕಾರ್ಯದರ್ಶಿ ಪುಷ್ಪರಾಜ್ ಶೆಟ್ಟಿ ಕುಡುಂಬೂರು ಸ್ವಾಗತಿಸಿ, ಪ್ರಸ್ತಾವನೆಗೈದರು. ಕಳೆದ 5 ವರ್ಷಗಳಲ್ಲಿ ಸುಭಾಷಿತನಗರ ಬಡಾವಣೆಯಲ್ಲಿ ಅಸೋಸಿಯೇಶನ್ ಕೈಗೊಂಡ ಕೆಲಸ ಕಾರ್ಯಗಳ ಕುರಿತು ಸಭೆಯಲ್ಲಿ ತಿಳಿಸಿದರು. ಸುಭಾಷಿತನಗರದ ಯಾವುದೇ ಸಮಸ್ಯೆಗಳು ಎದುರಾದಾಗ ಅಸೋಸಿಯೇಶನ್ ಅಧ್ಯಕ್ಷರಾದ ರಮೆಶ್ ಶೆಟ್ಟಿ ಅವರು ಮುತುವರ್ಜಿ ವಹಿಸಿ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದರು. ಅಸೋಸಿಯೇಶನ್ ನ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಶೆಟ್ಟಿ ವರದಿ ವಾಚಿಸಿದರು. ಕೋಶಾಧಿಕಾರಿ ನರಸಿಂಹ ಸುವರ್ಣ ಲೆಕ್ಕಪತ್ರ ಮಂಡಿಸಿದರು.
ಅಸೋಸಿಯೇಶನ್ ನ ಗೌರವ ಸಲಹೆಗಾರ ಸತ್ಯಜಿತ್ ಸುರತ್ಕಲ್ ಮಾತನಾಡಿ, ಸುಭಾಷಿತನಗರ ಬಡಾವಣೆಯ ಭದ್ರತೆ ಮತ್ತು ಸುರಕ್ಷತೆಯ ದೃಷ್ಟಿಯಿಂದ ಸಿಸಿ ಟಿವಿ ಕ್ಯಾಮರಾ ಅಳವಡಿಸುವ ಕುರಿತು ಸಭೆಯಲ್ಲಿ ಮಾಹಿತಿ ನೀಡಿದರು. ಬಳಿಕ ಸಿಸಿ ಟಿವಿ ಅಳವಡಿಸಲು ಸಭೆಯಲ್ಲಿ ಸದಸ್ಯರಿಂದ ಅನುಮೋದನೆ ಪಡೆಯಲಾಯಿತು. ಸಭೆಯ ಅಧ್ಯಕ್ಷತೆ ವಹಿಸಿದ್ದ ಅಸೋಸಿಯೇಶನ್ ಅಧ್ಯಕ್ಷ ರಮೇಶ್ ಶೆಟ್ಟಿ ಮಾತನಾಡಿ, ಸುಭಾಷಿತ ನಗರದಲ್ಲಿ ಅಭಿವೃದ್ದಿ ಕೆಲಸಗಳಿಗೆ ಎಲ್ಲರ ಸಹಕಾರ, ಅಧಿಕಾರಿಗಳ ಸ್ಪಂದನೆ ಹಾಗೂ ಸ್ಥಳೀಯ ಶಾಸಕರ ನೆರವಿನಿಂದ ಅಭಿವೃದ್ದಿ ಕೆಲಸಗಳು ಸುಲಲಿತವಾಗಿ ನಡೆಯಿತು. ಮತ್ತಷ್ಟು ಕೆಲಸಗಳು ಬಾಕಿ ಇದೆ. ಇದರ ಬಗ್ಗೆಯೂ ಗಮನ ಹರಿಸಲಾಗುವುದು ಎಂದರು. ಸಭೆಯಲ್ಲಿ ಅಜೀವ ಸದಸ್ಯತ್ವ ಪಡೆದ ಸದಸ್ಯರನ್ನು ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಮಹಾಸಭೆಗೆ ಸ್ಥಳಾವಕಾಶ ಒದಗಿಸಿದ ರಚನಾ ಪ್ಯಾಲೇಸ್ ಮಾಲಕರಾದ ರಾಜೇಶ್ ಶೆಟ್ಟಿ ಅವರನ್ನು ಅಧ್ಯಕ್ಷರು ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಿದರು.


ಸಭೆಯಲ್ಲಿ ಸೌಮ್ಯ ನಿತಿನ್ ಕುಂದರ್, ಮಂಜುನಾಥ ಶೆಟ್ಟಿ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಸಭೆಯಲ್ಲಿ ಉಪಾಧ್ಯಕ್ಷ ತಾರಾನಾಥ ಸಾಲ್ಯಾನ್, ಗೌರವ ಸಲಹೆಗಾರರಾದ ಬಾಳ ಜಗನ್ನಾಥ ಶೆಟ್ಟಿ ಉಪಸ್ಥಿತರಿದ್ದರು. ಅಜಿತಾ ಸೂಡಾ ಪ್ರಾರ್ಥನೆಗೈದರು. ಜೊತೆ ಕಾರ್ಯದರ್ಶಿ ಲಕ್ಷ್ಮೀ ಚಂದ್ರಶೇಖರ್ ಆಚಾರ್ಯ ವಂದಿಸಿದರು. ಚಂದ್ರಶೇಖರ ಪಾಲೇಕರ್ ಕಾರ್ಯಕ್ರಮ ನಿರ್ವಹಿಸಿದರು.




















































































































