ಭಾರತದ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಕಳೆದ ಶುಕ್ರವಾರ ಆಗಸ್ಟ್ 15 ರಂದು ಬೆಳಿಗ್ಗೆ 8:30ಕ್ಕೆ ಮನಾಮದ ಕನ್ನಡ ಭವನ ಸಮುಚ್ಛಯದಲ್ಲಿ ಅದ್ದೂರಿಯಾಗಿ ಆಚರಿಸಲಾಯಿತು. ಕಾರ್ಯಕ್ರಮವು ಸಂಘದ ಅಧ್ಯಕ್ಷ ಅಜಿತ್ ಬಂಗೇರ ಅವರು ಭಾರತೀಯ ತ್ರಿವರ್ಣ ಧ್ವಜಾರೋಹಣ ಮಾಡುವುದರ ಮೂಲಕ ಆರಂಭಗೊಂಡಿತು. ನಂತರ ಉಪಾಧ್ಯಕ್ಷ ನಿತಿನ್ ಶೆಟ್ಟಿ ಅವರು ಬಹ್ರೈನ್ ರಾಷ್ಟ್ರಧ್ವಜಾರೋಹಣಗೈದರು. ನೆರೆದಿದ್ದ ನೂರಾರು ಸದಸ್ಯರು ಧ್ವಜಕ್ಕೆ ವಂದನೆ ಸಲ್ಲಿಸಿ, ರಾಷ್ಟ್ರಗೀತೆಯನ್ನು ಹಾಡಿದರು.

ಸಮಾರಂಭದ ಅತಿಥಿಗಳಾಗಿ ಜಯಶಂಕರ್, ಮೊಹಮ್ಮದ್ ಮನ್ಸೂರ್, ಸಿಎ ಅಜಯ್, ನಿಕಟಪೂರ್ವ ಅಧ್ಯಕ್ಷ ಅಮರನಾಥ ರೈ ಹಾಗೂ ಮಾಜಿ ಅಧ್ಯಕ್ಷ ಪ್ರದೀಪ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದು, ಸ್ವಾತಂತ್ರ್ಯ ದಿನದ ಕುರಿತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಅಧ್ಯಕ್ಷ ಅಜಿತ್ ಬಂಗೇರ ಅವರು ಸ್ವಾತಂತ್ರ್ಯ ದಿನದ ಸಂದೇಶ ನೀಡಿದರು. ಸಾಂಸ್ಕೃತಿಕ ಕಾರ್ಯಕ್ರಮಗಳ ಭಾಗವಾಗಿ ಕನ್ನಡ ಭವನ ಸಭಾಂಗಣದಲ್ಲಿ ಸ್ವಾತಂತ್ರ್ಯ ದಿನ ವಿಶೇಷ ಛದ್ಮವೇಷ ಸ್ಪರ್ಧೆ ಮತ್ತು ಸಂಘದ ಸದಸ್ಯರ ಪರಿವಾರದಿಂದ ಮನರಂಜನಾತ್ಮಕ ನೃತ್ಯ ಪ್ರದರ್ಶನಗಳು ನಡೆಯಿತು.
ಸೌರವ್ ರಾಕೇಶ್ ಹಾಗೂ ಫೆಲ್ಸಿ ಫಿಲೊಮೇನಾ ಫರ್ನಾಂಡಿಸ್ ತೀರ್ಪುಗಾರರಾಗಿ ಸಹಕರಿಸಿದರು. ಸ್ಪರ್ಧಾ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಕಾರ್ಯಕ್ರಮದ ಅಂತ್ಯದಲ್ಲಿ ರುಚಿಕರ ಉಪಹಾರ ಮತ್ತು ಸಿಹಿತಿಂಡಿಗಳನ್ನು ಎಲ್ಲರಿಗೂ ನೀಡಲಾಯಿತು. ಕಾರ್ಯಕ್ರಮವನ್ನು ಸಂಘದ ಸಾಂಸ್ಕೃತಿಕ ಕಾರ್ಯದರ್ಶಿ ಶ್ರೀಮತಿ ಹರಿಣಿ ಶೆಟ್ಟಿ, ಉಪ ಸಾಂಸ್ಕೃತಿಕ ಕಾರ್ಯದರ್ಶಿ ಹರೀಶ್ ಗೌಡ ಮತ್ತು ಪ್ರಭಾರ ಕಾರ್ಯದರ್ಶಿ ಹರಿನಾಥ್ ಸುವರ್ಣ ಅವರ ಸಮನ್ವಯದಲ್ಲಿ ಯಶಸ್ವಿಯಾಗಿ ನೆರವೇರಿಸಲಾಯಿತು.