ಬರಡು ಭೂಮಿಯನ್ನು ವಿದ್ಯಾಕಾಶಿಯನ್ನಾಗಿ ಮಾಡಿದ ಶಿಲ್ಪಿ ಡಾ| ಸುಧಾಕರ ಶೆಟ್ಟಿಯವರಿಗೆ ಸಲ್ಲುತ್ತದೆ. ದಾನ ಮಾಡಲಿಕ್ಕೆ ಮನಸ್ಸು ಬೇಕು. ಅದರ ಜೊತೆಗೆ ಕೊಡುವ ಸಂಸ್ಕಾರವೂ ಬೇಕು. ಇವೆರಡನ್ನು ಮೈಗೂಡಿಸಿಕೊಂಡ ಜೀವನ ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ತಿಳಿಸುವ ಸುಂದರ ಕಾರ್ಯಕ್ರಮ ಇದಾಗಿದೆ ಎಂದು ಡಾ. ಟಿ.ಎಂ.ಎ ಪೈ ರೋಟರಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಸಂಜಯ್ ಹೇಳಿದರು. ಅವರು ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ ವತಿಯಿಂದ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ದಿ. ಗೋಪ ಶೆಟ್ಟಿಯವರ ೧೦೫ನೇ ಜನ್ಮದಿನದ ಅಂಗವಾಗಿ ಕಾರ್ಕಳ ಗಣಿತನಗರ ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯ ಅಭ್ಯಾಗತರಾಗಿ ಮಾತನಾಡಿದರು. ಅಜೆಕಾರು ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ ನ ಆಡಳಿತ ಮಂಡಳಿ ಸದಸ್ಯ ತಾಜ್ ಗ್ಲಾಸ್ ಮಾಲಕ ಗಣಪತಿ ಪೈ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಸಂಸ್ಥೆ ಮೌಲ್ಯಸುಧಾ ಮತ್ತು ಜ್ಞಾನಸುಧಾವನ್ನು ಎರಡನ್ನು ಕೊಡುತ್ತಾ ಬಂದಿದೆ. ಡಾ| ಸುಧಾಕರ ಶೆಟ್ಟಿಯವರು ವ್ಯಾಪಾರ ಮನೋಭಾವದವರಲ್ಲ. ಬದಲಾಗಿ ದಾನದ ಮನೋಭಾವ ಉಳ್ಳವರು. ಆದ್ದರಿಂದ ಈ ಕಾರ್ಯಕ್ರಮವು ಎಲ್ಲರಿಗೂ ಆದರ್ಶಪ್ರಾಯವಾಗಿದೆ ಎಂದು ಪ್ರಶಂಸಿದರು.
ಅಜೆಕಾರ್ ಪದ್ಮಗೋಪಲ್ ಎಜ್ಯುಕೇಶನ್ ಟ್ರಸ್ಟಿನ ಅಧ್ಯಕ್ಷರಾದ ಡಾ| ಸುಧಾಕರ ಶೆಟ್ಟಿಯವರು ಸ್ವಾಗತಿಸಿ, ಈ ಕಾರ್ಯಕ್ರಮ ಹೆಗ್ಗಳಿಕೆಗೆ ಮಾಡುವ ಕಾರ್ಯಕ್ರಮವಲ್ಲ. ಒಂದು ಪರಿಪೂರ್ಣ ಸಮಾಜ ನಿರ್ಮಾಣ ಮಾಡಬೇಕು ಅನ್ನುವಂತಹ ನಿಟ್ಟಿನಲ್ಲಿ ಕಾರ್ಯವನ್ನು ನಿರ್ವಹಿಸುತ್ತಿದೆ. ಇಂದಿನ ಕಾಲಘಟ್ಟದಲ್ಲಿ ಸಂಬಂಧಗಳು ಮೌಲ್ಯವನ್ನು ಕಳೆದುಕೊಳ್ಳುತ್ತಿದೆ. ಮಕ್ಕಳಿಗೆ ಹೆತ್ತವರ ಮೌಲ್ಯ ಅರಿವಾಗಬೇಕು. ಆ ಮೂಲಕ ತಂದೆ ತಾಯಿಯರ ಬದುಕನ್ನು ಹಸನುಗೊಳಿಸಬೇಕು ಎಂದು ಕರೆಕೊಟ್ಟರು. ಇದೇ ಸಂದರ್ಭ ಕಾರ್ಕಳ ತಾಲೂಕಿನ ವಿಶೇಷ ಮಕ್ಕಳ ಶಾಲೆಯಾದ ಚೇತನ ವಿಶೇಷ ಶಾಲೆ, ವಿಜೇತ ವಿಶೇಷ ಶಾಲೆ ಹಾಗೂ ಅರುಣೋದಯ ವಿಶೇಷ ಶಾಲೆಯನ್ನು ಗುರುತಿಸಿ ಅಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಧ್ಯಾಪಕ ವೃಂದವನ್ನು ಗೌರವಿಸಲಾಯಿತು. ಶೃಂಗೇರಿಯ ತೊರೆಹಡ್ಲು ಶಾಲೆಯ ಎಸ್.ಎಸ್.ಎಸ್.ಸಿ ಟಾಪರ್ ವಿದ್ಯಾರ್ಥಿಗಳಿಗೆ ಹತ್ತು ಸಾವಿರವನ್ನು ನೀಡಲಾಯಿತು. ಈ ಮೂಲಕ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟಿನಿಂದ ೩ಲಕ್ಷದ ೩೦ಸಾವಿರದ ೫೦೩ ರೂಪಾಯಿ ಈ ಸಂದರ್ಭದಲ್ಲಿ ನೆರವು ನೀಡಲಾಯಿತು. ಕಾರ್ಯಕ್ರಮದಲ್ಲಿ ಕುಕ್ಕುಂದೂರು ಗ್ರಾ.ಪಂ ಸದಸ್ಯರಾದ ರಹಮತ್ತುಲ್ಲಾ, ಟ್ರಸ್ಟಿಗಳಾದ ಶ್ರೀಮತಿ ವಿದ್ಯಾವತಿ ಎಸ್ ಶೆಟ್ಟಿ, ಅನಿಲ್ ಕುಮಾರ್ ಜೈನ್, ಸಂಸ್ಥೆಯ ಹಿತೈಷಿಗಳಾದ ಅಪ್ರಾಯ ಕಿಣಿ, ಕಮಲಾಕ್ಷ ನಾಯಕ್, ದೇವೇಂದ್ರ ನಾಯಕ್, ತ್ರಿವಿಕ್ರಮ ಕಿಣಿ, ಕಾರ್ಕಳ ಜ್ಞಾನಸುಧಾದ ಸಿಇಒ ಮತ್ತು ಪ್ರಾಂಶುಪಾಲ ದಿನೇಶ್ ಎಂ ಕೊಡವೂರು ಉಪಸ್ಥಿತರಿದ್ದರು. ಪ್ರಾಂಶುಪಾಲರು ಹಾಗೂ ಪ್ರಾಂಶುಪಾಲರುಗಳು ಉಪಸ್ಥಿತರಿದ್ದರು. ಆಂಗ್ಲ ಭಾಷಾ ವಿಭಾಗದ ಮುಖ್ಯಸ್ಥೆ ಶ್ರೀಮತಿ ಸಂಗೀತಾ ನಿರೂಪಿಸಿ, ಸಾರ್ವಜನಿಕ ಸಂಪರ್ಕಾಧಿಕಾರಿ ಶ್ರೀಮತಿ ಜ್ಯೋತಿ ಪದ್ಮನಾಭ ಭಂಡಿ ವಂದಿಸಿದರು.






ಪೂವಾಹ್ನ ನಡೆದ, ಸಂಸ್ಥಾಪಕ ದಿ. ಗೋಪ ಶೆಟ್ಟಿಯವರ ಜನ್ಮದಿನಾಚರಣೆಯ ಸಂಭ್ರಮದ ಪ್ರಯುಕ್ತ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳು ಹಾಗೂ ಹಳೆ ವಿದ್ಯಾರ್ಥಿ ಸಂಘದ ಸಹಯೋಗದೊಂದಿಗೆ ನಡೆದ ರಕ್ತದಾನ ಶಿಬಿರವನ್ನು ಕೆ.ಎಂ.ಸಿ ಬ್ಲಡ್ ಬ್ಯಾಂಕ್ ಮುಖ್ಯಸ್ಥ ಪ್ರೊಫೆಸರ್ ಡಾ. ಗಣೇಶ್ ಮೋಹನ್ ಉದ್ಘಾಟಿಸಿ ಶುಭ ಹಾರೈಸಿದರು. ರಕ್ತದಾನ ಶಿಬಿರದಲ್ಲಿ ೮೭ ಯುನಿಟ್ ರಕ್ತ ಸಂಗ್ರಹಿಸಲಾಯಿತು.















































































































