

ಸಹಕಾರಿ ಕ್ಷೇತ್ರದಲ್ಲಿ 120 ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ ಪುತ್ತೂರಿನ ಹೆಮ್ಮೆಯ ‘ಪುತ್ತೂರು ಕೋ- ಓಪರೇಟಿವ್ ಟೌನ್ ಬ್ಯಾಂಕ್’ ತನ್ನ ಗ್ರಾಹಕರಿಗೆ ಆಧುನಿಕ ಬ್ಯಾಂಕಿಂಗ್ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಸಂಪೂರ್ಣ ಡಿಜಿಟಲೀಕರಣದತ್ತ ಮಹತ್ವದ ಹೆಜ್ಜೆ ಇಟ್ಟಿದೆ. ಇದರ ಭಾಗವಾಗಿ ಗ್ರಾಹಕರ ಖಾತೆಗೆ ನೇರವಾಗಿ ಹಣ ಪಾವತಿಸಲು ಅನುಕೂಲವಾಗುವ ಕ್ಯೂಆರ್ ಕೋಡ್ (QR Code) ಸೌಲಭ್ಯವನ್ನು ಬ್ಯಾಂಕ್ನ ಆಡಳಿತ ಮಂಡಳಿ ಸಭೆಯಲ್ಲಿ ಅನಾವರಣಗೊಳಿಸಲಾಯಿತು. ಬ್ಯಾಂಕ್ನ ಆಡಳಿತ ಮಂಡಳಿ ಸಭೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಮುಖ ಉದ್ಯಮಿ ಗ್ರಾಹಕರಿಗೆ ಕ್ಯೂಆರ್ ಕೋಡ್ ಕಾರ್ಡ್ ಮತ್ತು ಸೌಂಡ್ ಬಾಕ್ಸ್ ನೀಡಿ ಚಾಲನೆ ನೀಡಲಾಯಿತು.


ಪುತ್ತೂರು ಕೋ-ಓಪರೇಟಿವ್ ಟೌನ್ ಬ್ಯಾಂಕ್ ಈಗಾಗಲೇ ಸಿಟಿಎಸ್ ಕ್ಲಿಯರಿಂಗ್ ಕ್ಷೇತ್ರಕ್ಕೆ ಕಾಲಿಟ್ಟಿದ್ದು, ಇನ್ವರ್ಡ್ ಮತ್ತು ಔಟ್ವರ್ಡ್ ತ್ವರಿತ ಕ್ಲಿಯರಿಂಗ್ ವ್ಯವಸ್ಥೆ ಜಾರಿಯಲ್ಲಿದೆ. ನೇರ ಹಣ ವರ್ಗಾವಣೆಗಾಗಿ ಆರ್ಟಿಜಿಎಸ್ ಮತ್ತು ಎನ್ಇಎಫ್ಟಿ ವ್ಯವಸ್ಥೆ, ಬ್ಯಾಂಕ್ ಐಎಫ್ಎಸ್ಸಿ ಕೋಡ್ ಹಾಗೂ ಮೊಬೈಲ್ ಬ್ಯಾಂಕಿಂಗ್ ಆಪ್ ಕೂಡ ಬಿಡುಗಡೆಯಾಗಿದೆ. ಇದೀಗ ವ್ಯಾಪಾರಸ್ಥರಿಗೆ ಅನುಕೂಲವಾಗುವಂತೆ ಕ್ಯೂಆರ್ ಕೋಡ್ ಸೌಲಭ್ಯವನ್ನು ನೀಡಲಾಗಿದೆ. ಬ್ಯಾಂಕ್ನ ಅಧ್ಯಕ್ಷರಾದ ಕಿಶೋರ್ ಕೊಳತ್ತಾಯ ಅವರು ಮಾತನಾಡಿ, ಯಾವುದೇ ಬ್ಯಾಂಕಿಂಗ್ ವ್ಯವಹಾರ ಇಲ್ಲದ ಸಂದರ್ಭದಲ್ಲಿ ನಮ್ಮ ಹಿರಿಯರು ಸ್ಥಾಪಿಸಿದ ಪಾರಂಪರಿಕ ಬ್ಯಾಂಕ್ ಇದಾಗಿದೆ. ಆದರೆ ಕಾಲಕ್ಕೆ ತಕ್ಕಂತೆ ಬದಲಾವಣೆ ಅನಿವಾರ್ಯ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಪುತ್ತೂರು ಟೌನ್ ಬ್ಯಾಂಕ್ ಹಿಂದೆ ಬೀಳಲು ತಯಾರಿಲ್ಲ. ಯುವ ಪೀಳಿಗೆಯು ಸಮಯ ಉಳಿಸಲು ಡಿಜಿಟಲ್ ವ್ಯವಹಾರವನ್ನೇ ಬಯಸುತ್ತಿದ್ದು, ಅದಕ್ಕೆ ಪೂರಕವಾಗಿ ನಾವು ಡಿಜಿಟಲೀಕರಣಕ್ಕೆ ಒತ್ತು ನೀಡಿದ್ದೇವೆ. ಬ್ಯಾಂಕಿನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶೇಖರ ಶೆಟ್ಟಿಯವರ ವಿಶೇಷ ಮುತುವರ್ಜಿ, ನಿರ್ದೇಶಕ ಮಂಡಳಿಯ ಮಾರ್ಗದರ್ಶನ ಹಾಗೂ ಸಿಬ್ಬಂದಿಗಳ ಸಹಕಾರದಿಂದ ಈ ಸಾಧನೆ ಸಾಧ್ಯವಾಯಿತು ಎಂದರು.
ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ. ಶೇಖರ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ಬ್ಯಾಂಕ್ ಡಿಜಿಟಲೀಕರಣದ ಪ್ರಗತಿ ತಿಳಿಸಿ, ಮುಂಬರುವ ದಿನಗಳಲ್ಲಿ ಇಂಟರ್ನೆಟ್ ಬ್ಯಾಂಕಿಂಗ್, ಡೋರ್ ಸ್ಟೆಪ್ ಬ್ಯಾಂಕಿಂಗ್, ಐ.ಎಮ್.ಪಿ.ಎಸ್, ಯುಪಿಐ ಪಾವತಿ, ಎಟಿಎಮ್ ಕಾರ್ಡ್ ಸೌಲಭ್ಯಗಳನ್ನು ನೀಡಲಿದ್ದೇವೆ. ಕೇವಲ 10 ರಿಂದ 11 ಮಂದಿ ಸಿಬ್ಬಂದಿಗಳೊಂದಿಗೆ ಇಷ್ಟೆಲ್ಲಾ ಡಿಜಿಟಲ್ ಸೇವೆಗಳನ್ನು ನೀಡುವ ಏಕೈಕ ಬ್ಯಾಂಕ್ ನಮ್ಮದಾಗಲಿದೆ ಎಂದು ಮಾಹಿತಿ ನೀಡಿದರು. ಶೀಘ್ರದಲ್ಲಿಯೇ ಸಂಪೂರ್ಣ ಡಿಜಟಲೀಕರಣ ನಮ್ಮ ಗುರಿಯಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಹಿರಿಯ ಗ್ರಾಹಕ ಮತ್ತು ಹೋಟೆಲ್ ಉದ್ಯಮಿ ಗೋಪಾಲಕೃಷ್ಣ ಹೇರಳೆ (ಶ್ರೀ ನ್ಯೂ ಗಣೇಶ್ ಪ್ರಸಾದ್), ಪ್ರದೀಪ್ (ಶ್ರೀ ಆಟೋ ಮೊಬೈಲ್ಸ್), ರವಿ ಬಾಳಿಗ (ಬಾಳಿಗ ಫುಡ್ಸ್), ವನಿತಾ (ಭಾವನ ಕಲಾ ಆರ್ಟ್ಸ್), ಸಾಯಿ ದೀಕ್ಷಿತ್ ಮತ್ತು ಪವಿತ್ರ (ಶಾಂತಿ ಫ್ಯಾನ್ಸಿ) ಇವರಿಗೆ ಪ್ರಥಮ ಕ್ಯೂಆರ್ ಕೋಡ್ ಕಾರ್ಡ್ ಮತ್ತು ಯಂತ್ರವನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಬ್ಯಾಂಕ್ನ ಉಪಾಧ್ಯಕ್ಷ ಶ್ರೀಧರ ಗೌಡ, ನಿರ್ದೇಶಕರುಗಳಾದ ಚಂದ್ರಶೇಖರ್ ರಾವ್ ಬಪ್ಪಳಿಗೆ, ರಾಮಚಂದ್ರ ಕಾಮತ್, ಸುಜೀಂದ್ರ ಪ್ರಭು, ಮಲ್ಲೇಶ್ ಕುಮಾರ್, ರಾಜು ಶೆಟ್ಟಿ, ಕಿರಣ ಕುಮಾರ ರೈ, ಶ್ರೀಧರ ಪಟ್ಲ, ವೀಣಾ, ಸೀಮಾ ನಾಗರಾಜ್, ಗಣೇಶ್ ಕೌಕ್ರಾಡಿ, ಹರೀಶ್ ಬಿಜತ್ರೆ, ಸಿಎ. ಅರವಿಂದ ಕೃಷ್ಣ, ಕೆ ವಿಶ್ವಾಸ ಶೆಣೈ ಹಾಗೂ ಪುತ್ತೂರು ಶಾಖೆಯ ಮ್ಯಾನೇಜರ್ ಚಿದಂಬರ, ವಿಟ್ಲ ಶಾಖೆಯ ಮ್ಯಾನೇಜರ್ ಜ್ಯೋತಿ, ಬ್ಯಾಂಕಿನ ಸಿಬ್ಬಂದಿಗಳು ಮತ್ತು ಬಿಜಲಿ ಪೇ ಕಂಪೆನಿಯ ಪ್ರತಿನಿಧಿ ತೇಜಸ್ ಉಪಸ್ಥಿತರಿದ್ದರು.

























































































































