ರಾಜ್ಯದ ಅಗ್ರಗಣ್ಯ ಕ್ರೆಡಿಟ್ ಸಹಕಾರ ಸಂಘಗಳಲ್ಲೊಂದಾದ ಮಂಗಳೂರಿನ ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ- ಓಪರೇಟಿವ್ ಸೊಸೈಟಿಯು ತನ್ನ ಕಾರ್ಯಯೋಜನೆ “ವಿಷನ್ 2025”ರಂತೆ ಹೊಸ 30 ಶಾಖೆಗಳನ್ನು ತಲುಪುವ ನಿಟ್ಟಿನಲ್ಲಿ 2025ರ ಜೂನ್ ತಿಂಗಳ 8 ರಿಂದ 18ರವರೆಗಿನ 11 ದಿನಗಳ ಕಿರು ಅವಧಿಯಲ್ಲಿ 4 ಹೊಸ ಶಾಖೆಗಳನ್ನು ಮತ್ತು 2 ವಿಸ್ತರಣಾ ಕೌಂಟರ್ಗಳನ್ನು ತೆರೆದು ಸಹಕಾರ ರಂಗದಲ್ಲಿ ಮತ್ತೊಂದು ಅಪೂರ್ವ ಸಾಧನೆಯನ್ನು ಮಾಡಿದೆ. ಈ ಹಿಂದೆ 2021ನೇ ಸಾಲಿನ ನವೆಂಬರ್ ತಿಂಗಳ 7 ದಿನಗಳ ಕಿರು ಅವಧಿಯಲ್ಲಿ 5 ನೂತನ ಶಾಖೆಗಳನ್ನು ಆರಂಭಿಸುವ ಮೂಲಕ ಅದ್ವಿತೀಯ ಸಾಧನೆಯನ್ನು ಮಾಡಿರುವುದು ಇಲ್ಲಿ ಉಲ್ಲೇಖನೀಯ. ಶ್ರೀ ರಾಮಕೃಷ್ಣ ಕ್ರೆಡಿಟ್ರ್ ಕೋ- ಓಪರೇಟಿವ್ ಸೊಸೈಟಿಯು ತನ್ನ 26ನೇ ಶಾಖೆಯನ್ನು ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ಹಾಗೂ 27ನೇ ಶಾಖೆಯನ್ನು ಕಡಬ ತಾಲೂಕಿನ ಸವಣೂರಿನಲ್ಲಿ ದಿನಾಂಕ 08.06.2025 ಆದಿತ್ಯವಾರದಂದು ಉದ್ಘಾಟನೆ ಮಾಡಿ ಕಾರ್ಯಾರಂಭಗೊಳಿಸಿತು. ಸಂಘದ 28 ನೇಯ ಶಾಖೆಯು ಉಡುಪಿ ಜಿಲ್ಲೆಯ ಹಿರಿಯಡ್ಕದಲ್ಲಿ ದಿನಾಂಕ 09.06.2025 ಸೋಮವಾರದಂದು ಶುಭಾರಂಭಗೊಂಡಿತು.

ದಿನಾಂಕ 12.06.2025ರಂದು ಸಂಘದ ಮಂಗಳೂರು ಶಾಖೆಯ ವಿಸ್ತರಣಾ ಕೌಂಟರನ್ನು ಮಂಗಳೂರು ಮಹಾನಗರ ವ್ಯಾಪ್ತಿಯ ಕದ್ರಿ ಕಂಬಳ ರಸ್ತೆ, ಇಲ್ಲಿ ಇರುವ ಸಂಘದ ಕೇಂದ್ರ ಕಛೇರಿಯ ನೂತನ ಕಟ್ಟಡದಲ್ಲಿ ಆರಂಭಿಸಲಾಯಿತು. ಸಂಘದ ಇನ್ನೊಂದು ವಿಸ್ತರಣಾ ಕೌಂಟರನ್ನು ಕಾರ್ಕಳದ ಕುಂಟಾಡಿಯಲ್ಲಿ ದಿನಾಂಕ 15.06.2025 ಆದಿತ್ಯವಾರದಂದು ಕುಂಟಾಡಿ ಶ್ರೀ ರಕ್ತೇಶ್ವರಿ ದೈವಸ್ಥಾನದ ಕಟ್ಟಡದಲ್ಲಿ ಪ್ರಾರಂಭಗೊಂಡಿತು. ಸಂಘದ 29ನೇ ಶಾಖೆಯನ್ನು ಮಂಗಳೂರಿನ ಪಡೀಲ್ನಲ್ಲಿ ದಿನಾಂಕ 18.06.2025 ಬುಧವಾರದಂದು ಇಲ್ಲಿನ ಸಿಟಡೆಲ್ ಕಮರ್ಷಿಯಲ್ ಕಾಂಪ್ಲೆಕ್ಸ್ನಲ್ಲಿ ಉದ್ಘಾಟನೆ ಮಾಡಲಾಯಿತು. ರೂ. 600 ಕೋಟಿ ಠೇವಣಾತಿ, ರೂ. 510 ಕೋಟಿ ಸಾಲ, ಒಟ್ಟು ವ್ಯವಹಾರ ರೂ. 1,110 ಕೋಟಿ ಮತ್ತು ಒಟ್ಟು ವಹಿವಾಟು ರೂ. 5,000 ಕೋಟಿ ಹೊಂದಿರುವ ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ-ಓಪರೇಟಿವ್ ಸೊಸೈಟಿಯ ಹಿರಿಯಡ್ಕ ಶಾಖೆ ಮತ್ತು ಕುಂಟಾಡಿ ವಿಸ್ತರಣಾ ಕೌಂಟರನ್ನು ಉದ್ಘಾಟಿಸಿದ ಸಹಕಾರ ರತ್ನ ಡಾ. ಎಂ.ಎನ್. ರಾಜೇಂದ್ರ ಕುಮಾರ್ ರವರು ಸಂಘದ ಅಧ್ಯಕ್ಷರಾದ ಶ್ರೀ ಕೆ. ಜೈರಾಜ್ ಬಿ. ರೈಯವರ ಸ್ಪೂರ್ತಿಯುತ ದಕ್ಷ ನೇತೃತ್ವದಲ್ಲಿ ಬೆಳ್ಳಾರೆ, ಸವಣೂರು ಮತ್ತು ಹಿರಿಯಡ್ಕ ದಂಥಹ ಅರೆ ಪಟ್ಟಣ ಪ್ರದೇಶದಲ್ಲಿ ಹಾಗೂ ಕಾರ್ಕಳ ಕುಂಟಾಡಿಯಂಥಹ ಗ್ರಾಮಾಂತರ ಪ್ರದೇಶದಲ್ಲಿ ವಿಸ್ತರಣಾ ಶಾಖೆಗಳನ್ನು ಕಿರು ಅವಧಿಯಲ್ಲಿ ಜನರ ಸೇವೆಗೆ ಲೋಕಾರ್ಪಣೆಗೊಳಿಸಿ ಸದಸ್ಯರ ಸೇವೆಗಾಗಿ ತಮ್ಮನ್ನು ತೊಡಗಿಸಿಕೊಂಡಿರುವುದು ನಿಜಕ್ಕೂ ಶ್ಲಾಘನೀಯ ಎಂದು ಅಭಿನಂದಿಸಿದರು. ಉದ್ಘಾಟನಾ ಸಮಾರಂಭಗಳಲ್ಲಿ ಶಾಖೆಗಳ ಪ್ರದೇಶದ ಸ್ಥಳೀಯ ಸದಸ್ಯ ಬಾಂಧವರು ಮತ್ತು ನಾಗರಿಕರು ಸಂಘಕ್ಕೆ ನೀಡಿರುವ ಸ್ಪಂದನೆ ನಿಜಕ್ಕೂ ಸ್ಪೂರ್ತಿದಾಯಕ.
ಇದು ಸದಸ್ಯರ ಅನುಕೂಲಕ್ಕಾಗಿ ಹೊಸ ಶಾಖೆಗಳನ್ನು ಆರಂಭಿಸಿ ವ್ಯವಹಾರ ವಿಸ್ತರಣೆ ಮಾಡಿರುವುದನ್ನು ಅರ್ಥಪೂರ್ಣಗೊಳಿಸುತ್ತದೆ ಮತ್ತು ಸದಸ್ಯರಿಗೆ ಇನ್ನೂ ಹೆಚ್ಚಿನ ಸೇವೆಯನ್ನು ಕಲ್ಪಿಸಲು ಹಾಗೂ 2030 ಕ್ಕೆ 40 ಶಾಖೆಗಳನ್ನು ಹೊಂದುವ ಗುರಿಯನ್ನು ಸಾಧಿಸಲು ಪ್ರೇರಣೆಯನ್ನು ನೀಡುತ್ತದೆ ಎಂದು ಸಂಘದ ಅಧ್ಯಕ್ಷರಾದ ಶ್ರೀ ಕೆ. ಜೈರಾಜ್ ಬಿ. ರೈ ಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.